ಭಗವಾನ್ ಬುದ್ಧನ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತಿಲ್ಲ: ಬೌದ್ಧಾಚಾರಿ ಅರವಿಂದ
ಧಮ್ಮಚಕ್ರ ಭಗವಾನ ಬುದ್ಧರ ಬೋಧನೆಗ ಕಾರ್ಯಕ್ರಮ

ಕಾರವಾರ, ಸೆ.19: ಪ್ರಸ್ತುತ ನಾವೆಲ್ಲ ಬುದ್ಧ, ಅಂಬೇಡ್ಕರರ ತತ್ವ ಬೋಧನೆಗಳನ್ನು ಓದುತ್ತಿದ್ದೇವೆಯೇ ವಿನಃ ಅವುಗಳನ್ನು ಜೀವನಕ್ಕೆ ಅಳವಡಿಸಿಕೊಳ್ಳುವುದಿಲ್ಲ ಎಂದು ಬೆಂಗಳೂರಿನ ಬೌದ್ಧ ವಿಹಾರದ ಬೌದ್ಧಾಚಾರಿ ಅರವಿಂದ ಬೋಧಿ ವಿಷಾದ ವ್ಯಕ್ತ ಪಡಿಸಿದರು.
ನಗರದ ಕನ್ನಡ ಭವನದಲ್ಲಿ ಭಗವಾನ ಬುದ್ಧ ಮೈತ್ರಿ ಸಂಘ ವತಿಯಿಂದ ಹಮ್ಮಿಕೊಂಡ ಧಮ್ಮಚಕ್ರ ಭಗವಾನ ಬುದ್ಧರ ಬೋಧನೆಗಳು ಎನ್ನುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅವಿನಾಶ ಸಾಳ್ವಿ ಮಾತನಾಡಿ, ಗೌತಮ ಬುದ್ಧನ ಜೀವನ, ಸಾಧನೆ, ಸಂದೇಶಗಳ ಕುರಿತು ವಿವರಿಸಿದರು.
ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸರಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಜಿ.ಡಿ. ಮನೋಜ್ ಮಾತನಾಡಿ, ದೇಶದಲ್ಲಿ 11 ಕೋಟಿಯಷ್ಟು ಬೌದ್ಧ ಧರ್ಮದ ಅನುಯಾಯಿಗಳಿದ್ದರೂ, ಬುದ್ಧನ ಸಂದೇಶಗಳ ಪಾಲನೆಯಾಗುತ್ತಿಲ್ಲ. ಸಮಾಜ ಸರಿಯಾದ ಮಾರ್ಗದಲ್ಲಿ ಸಾಗಲು ಬುದ್ಧಮಾರ್ಗ ಅತಿಮುಖ್ಯ ಎಂದರು.
ಪ್ರೊ.ನಿತ್ಯಾನಂದ ದೊಡ್ಮನಿ, ಜಗದೀಶ್ ಓಲೇಕಾರ್, ಸುಧಾಕರ್ ಜೋಗಳೇಕರ್, ಪರಶುರಾಮ ನಾಯಕ್, ಗಣೇಶ ಭಿಷ್ಠಣ್ಣನವರ್, ಸಂತೋಷ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಯಾಗಿದ್ದ ನಗರಸಭೆ ಅಭಿಯಂತರ ಮೋಹನರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್. ಬಿ. ರಾಠೋಡ್ ಸ್ವಾಗತಿಸಿದರು.







