ಮರಳು ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಸೆ.26ರಂದು ಧರಣಿ: ಕಿಶೋರ್ ಕುಮಾರ್ ಪುತ್ತೂರು

ಮಂಗಳೂರು, ಸೆ.23: ನ್ಯಾಯಬದ್ಧವಾಗಿ ಮರಳುಗಾರಿಕೆ ಹಾಗೂ ವಾಹನ ಸಾಗಣೆ ಮಾಡಲು ಜಿಲ್ಲಾಡಳಿತ ಸೂಕ್ತ ವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಸೆ.26ರಂದು ದ.ಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ದ.ಕ ಜಿಲ್ಲಾ ಕಟ್ಟಡ ಸಾಮಗ್ರಿ ಸರಬರಾಜುದಾರರ ಮತ್ತು ಸಾಗಣೆ ವಾಹನ ಮಾಲಕರ, ಚಾಲಕರ ಸಂಘದ ಗೌರವಾಧ್ಯಕ್ಷ ಕಿಶೋರ್ ಕುಮಾರ್ ಪುತ್ತೂರು ಹೇಳಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 6 ತಿಂಗಳುಗಳಿಂದ ಮರಳಿನ ಅಭಾವವಾಗುತ್ತಿರುವುದರಿಂದ ಸಾಮಾನ್ಯ ಜನರು, ಬಿಲ್ಡರ್ಗಳು ಮನೆ ಕಟ್ಟುವವರು ಸಮಸ್ಯೆಗೀಡಾಗಿದ್ದಾರೆ. ದ.ಕ.ಜಿಲ್ಲೆಯ ಸಿಆರ್ಝೆಡ್ ಪ್ರದೇಶದಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ನಿರ್ಣಯ ದಂತೆ ಸಾಂಪ್ರದಾಯಿಕವಾಗಿ ಮರಳನ್ನು ತೆಗೆಯಲು ಪರವಾನಿಗೆ ನೀಡಲಾಗಿದ್ದರೂ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಮತ್ತು ರಾಜಕೀಯ ಪ್ರಭಾವ ದಿಂದ ಮರಳನ್ನು ತೆಗೆಯಲು ಬಿಡುತ್ತಿಲ್ಲ. ಆ.15 ನಂತರ ಮರಳು ತೆಗೆಯಲು ಅನುಮತಿ ನೀಡಲಾಗುವುದು ಎಂದು ಜಿಲ್ಲಾಡಳಿತ ಹೇಳಿದ್ದರೂ ಮರಳು ತೆಗೆಯಲು ಇನ್ನೂ ಬಿಡುತ್ತಿಲ್ಲ. ದಕ್ಷಿಣ ಕನ್ನಡದಲ್ಲಿ ಮರಳು ಅಭಾವವಿದ್ದರೂ ಹೊರರಾಜ್ಯಗಳಿಗೆ ಅನಧಿಕೃತವಾಗಿ ಮರಳು ಸರಬರಾಜು ಆಗುತ್ತಿದೆ. ಇದರ ಹಿಂದೆ ಜಿಲ್ಲಾಡಳಿತದ ಕೈವಾಡವಿದೆ. ಅಕ್ರಮ ಮರಳುಗಾರಿಕೆ ಮಾಡುವವರೊಂದಿಗೆ ಜಿಲ್ಲಾಡಳಿತ ಕೈಜೋಡಿಸಿದೆ ಎಂದು ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರ ಪ್ರಭಾವದಿಂದ ಮರಳುಗಾರಿಕೆ ನಡೆಯುತ್ತಿದೆ. ಅನಧಿಕೃತ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು. ದ.ಕ ಜಿಲ್ಲೆಯನ್ನು ಮರಳು ಮಾಫಿಯಾದಿಂದ ರಕ್ಷಿಸಿ ಸಾಮಾನ್ಯ ಜನರಿಗೆ ನ್ಯಾಯ ಸಿಗಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಮುಖಂಡರಾದ ರಂದೀಪ್ ಕಾಂಚನ್, ರಂಜಿತ್ ಜೆ. ಶೆಟ್ಟಿ, ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.





