ವೃತ್ತಿಯ ಕೀಳರಿಮೆ ಬಿಟ್ಟು ಮಕ್ಕಳನ್ನು ಶಿಕ್ಷಣವಂತರನ್ನಾಗಿ ರೂಪಿಸಿ: ಕವಿತಾ ಶೇಖರ
ಪೌರಕಾರ್ಮಿಕರ ದಿನಾಚರಣೆ

ಚಿಕ್ಕಮಗಳೂರು, ಸೆ.23: ವೃತ್ತಿಯಲ್ಲಿ ಯಾವುದೂ ಮೇಲು ಕೀಳಲ್ಲ. ನಾವು ಮಾಡುವ ವೃತ್ತಿಯಲ್ಲಿ ಕೀಳರಿಮೆ ಬಿಟ್ಟು ಮಕ್ಕಳನ್ನು ಶಿಕ್ಷಣವಂತರನ್ನಾಗಿ ರೂಪಿಸಿದರೆ ಉತ್ತಮ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದು ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್ ಹೇಳಿದರು.
ಅವರು ಶುಕ್ರವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪೌರ ಸೇವಾ ನೌಕರರ ಸಂಘ ಹಾಗೂ ನಗರಸಭೆೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ನಸುಕಿನ ಜಾವದಲ್ಲಿ ಎದ್ದು ಸ್ವಚ್ಛತೆ ಮಾಡುವ ಮೂಲಕ ನಗರದ ಜನರ ಹಿತ ಕಾಪಾಡುವ ಪೌರ ಕಾರ್ಮಿಕರು ಶ್ರಮ ಜೀವಿಗಳು. ನಿಮ್ಮ ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯ. ಈ ಸಂಬಂಧ ಸರಕಾರದಿಂದ ದೊರೆಯಬಹುದಾದ ಎಲ್ಲ ಸವಲತ್ತುಗಳನ್ನು ಸಮರ್ಪಕವಾಗಿ ಪೂರೈಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ನಿತ್ಯ ಕೆಲಸದ ವೇಳೆ ಅಗತ್ಯವಿರುವ ಶೂ, ಹ್ಯಾಂಡ್ಗ್ಲೌಸ್, ಜರ್ಕಿನ್ ಸೇರಿದಂತೆ ಅಗತ್ಯ ಸವಲತ್ತುಗಳನ್ನು ಕಾಲಕಾಲಕ್ಕೆ ನೀಡಲು ಕ್ರಮಕೈಗೊಳ್ಳುತ್ತೇನೆ ಎಂದು ನುಡಿದರು.
ಸ್ವಚ್ಛ ಭಾರತ ಅಭಿಯಾನದಲ್ಲಿ ದೇಶದ 72 ನಗರಗಳ ಪೈಕಿ ರಾಜ್ಯದ ಮೈಸೂರು ನಗರ ಪ್ರಥಮ ಸ್ಥಾನ ಪಡೆದಿದೆ. ಮುಂದೆ ಅದು ನಿಮ್ಮೆಲ್ಲರ ಸಹಕಾರದಿಂದ ಚಿಕ್ಕಮಗಳೂರು ನಗರ ಪ್ರಥಮ ಸ್ಥಾನಕ್ಕೇರಬೇಕು ಎಂದು ನುಡಿದರು.
ಪೌರ ಸೇವಾ ನೌಕರರ ಸಂಘದ ರಾಜ್ಯಾಧ್ಯಕ್ಷ ಪಿ.ಗುರುಮೂರ್ತಿ ಮಾತನಾಡಿ, ಪ್ರತಿಯೊಂದು ಸ್ವಚ್ಛತಾ ಕೆಲಸಕ್ಕೆ ಪೌರ ಕಾರ್ಮಿಕರನ್ನು ಉಪಯೋಗಿಸಿಕೊಳ್ಳುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಂತಹ ಸಂದಭರ್ದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಸಲಹೆ ಸಹಕಾರ ನೀಡುವ ಬದಲು ಗೈರಾಗಿರುವುದು ಬೇಸರದ ಸಂಗತಿ ಎಂದು ವಿಷಾದಿಸಿದರು.
ಪ್ರಶಸ್ತಿ ಪುರಸ್ಕೃತ ಪೌರಸೇವಾ ನೌಕರರಾದ ಬಿ.ವೆಂಕಟೇಶ್, ಜಿ. ಓಬಳಮ್ಮ, ಸುಶೀಲಮ್ಮ, ವೈ. ಗುರುವ, ತಿರುಪ, ಓಬಳಣ್ಣ ಅವರಿಗೆ 5 ಸಾವಿರ ನಗದಿನೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭಕ್ಕೂ ಮುನ್ನ ನಗರದ ಮಿನಿ ವಿಧಾನಸೌಧದಿಂದ ನೂರಾರು ಪೌರ ಕಾರ್ಮಿಕರು ಮೆರವಣಿಗೆಯಲ್ಲಿ ಮುಖ್ಯರಸ್ತೆ ಮೂಲಕ ಅಂಬೇಡ್ಕರ್ ಭವನಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಡೊಳ್ಳುಕುಣಿತ, ವೀರಗಾಸೆ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಪೌರಸೇವಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಅಣ್ಣಯ್ಯ, ನಗರಸಭೆ ಉಪಾಧ್ಯಕ್ಷ ರವೀಂದ್ರ ಪ್ರಭು, ಸದಸ್ಯರಾದ ಶ್ಯಾಮಲಾರಾವ್, ಮುತ್ತಯ್ಯ, ವನಿತಾ, ನರಸಿಂಹ, ರೂಬಿನ ಮೋಸಸ್, ಸಂದೇಶ್, ಕೃಷ್ಣ, ಸುಧೀರ್, ಪುಷ್ಪಾ ರಾಜ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ.ಕುಮಾರ್, ಪ್ರಭಾರ ಪೌರಾಯುಕ್ತ ಆನಂದ್, ರಮೇಶ್ ನಾಯ್ಡು, ಸುನೀಲ್, ಎನ್.ಅಣ್ಣಯ್ಯ, ಶ್ರೀನಿವಾಸ್ ಉಪಸ್ಥಿತರಿದ್ದರು.







