ಉಡುಪಿ ಜಿಲ್ಲೆಗೆ 45 ಹೆಚ್ಚುವರಿ ಅಂಗನವಾಡಿ ಕೇಂದ್ರ : ಮಾಸಿಕ ಕೆಡಿಪಿ ಸಭೆಗೆ ಮಾಹಿತಿ

ಉಡುಪಿ, ಸೆ.24: ಉಡುಪಿ ಜಿಲ್ಲೆಗೆ ಪ್ರಸಕ್ತ ಸಾಲಿನಲ್ಲಿ 45 ಹೆಚ್ಚುವರಿ ಅಂಗನವಾಡಿ ಕೇಂದ್ರಗಳು ಅ.2ರಂದು ಆರಂಭಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವೀಸ್ ಹೇಳಿದ್ದಾರೆ.
ಮಣಿಪಾಲದಲ್ಲಿರುವ ಜಿಪಂನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಇಂದು ನಡೆದ ಜಿಪಂನ ಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನ ಸಭೆಗೆ ಈ ಮಾಹಿತಿ ನೀಡಿದರು.
ಕುಂದಾಪುರದಲ್ಲಿ 25, ಉಡುಪಿ 13, ಬ್ರಹ್ಮಾವರ 5, ಕಾರ್ಕಳದಲ್ಲಿ 2 ಅಂಗನವಾಡಿ ಕೇಂದ್ರಗಳು ಆರಂವಾಗಲಿವೆ. ನೂತನ ಅಂಗನವಾಡಿಗಳಿಗೆ ತಕ್ಷಣವೇ ನೂತನ ನೇಮಕಾತಿ ಮಾಡುವ ಮೊದಲು ಪಕ್ಕದ ಅಂಗನವಾಡಿ ಶಿಕ್ಷಕರಿಗೆ ಪ್ರಭಾರ ಹೊಣೆಗಾರಿಕೆ ನೀಡಲಾಗುವುದು ಎಂದವರು ವಿವರಿಸಿದರು.
ಈ ಸಂಬಂಧ ಇಲಾಖೆ ಸ್ವೀಕರಿಸಿದ ಅರ್ಜಿಗಳು ಮತ್ತು ನಡೆಸಿದ ಸಮಗ್ರ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಲು ಹಾಗೂ ಸಂಬಂಧಪಟ್ಟ ಪಂಚಾಯತ್ ಸದಸ್ಯರಿಗೆ ಹಾಗೂ ಗ್ರಾಪಂಗಳಿಗೆ ಮಾಹಿತಿ ನೀಡುವಂತೆ ಅಧ್ಯಕ್ಷ ದಿನಕರ ಬಾಬು ಸೂಚಿಸಿದರು.
ಮಹಿಳಾಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಒಟ್ಟು 241 ಅಂಗನವಾಡಿ ಕಟ್ಟಡಗಳ ಮತ್ತು 15 ಖಾಲಿ ನಿವೇಶನಗಳ ಆರ್ಟಿಸಿ ಪಡೆಯಲಾಗಿದ್ದು 583 ಅಂಗನವಾಡಿ ಕಟ್ಟಡ /ಖಾಲಿ ನಿವೇಶನಗಳ ಆರ್ಟಿಸಿ ಆಗಲು ಬಾಕಿ ಇದೆ. ಈ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಗ್ರೇಸಿ ಗೊನ್ಸಾಲ್ವಿಸ್ ಮಾಹಿತಿ ನೀಡಿದರು.
ಶಿಕ್ಷಣ ಇಲಾಖೆ ಸಹ ಇದೇ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು. ಅಧಿಕಾರಿಗಳು ಪ್ರತಿ ಸಭೆಯಲ್ಲಿ ಫಾಲೋಅಪ್ ಶಬ್ದವನ್ನು ಬಿಟ್ಟು ಕೆಲಸ ಸಂಪೂರ್ಣಗೊಂಡ ಬಗ್ಗೆ ವರದಿ ನೀಡಿ ಎಂದು ದಿನಕರ ಬಾಬು ನುಡಿದರು.
ಹೊಸ ಪಡಿತರ ಕಾರ್ಡ್: ಅರ್ಹ ಕುಟುಂಬಗಳಿಗೆ ಹೊಸ ಪಡಿತರ ಕಾರ್ಡುಗಳನ್ನು ನೀಡುವ ಹೊಣೆಗಾರಿಕೆಯನ್ನು ಗ್ರಾಪಂನ ಪಿಡಿಒ ಅಥವಾ ಕಾರ್ಯದರ್ಶಿಗಳಿಗೆ ನೀಡಲಾಗಿದೆ. ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿ ಯಲ್ಲಿ ಆರೋಗ್ಯ ನಿರೀಕ್ಷಕರಿಗೆ ಈ ಹೊಣೆ ವಹಿಸಲಾಗಿದೆ. ಈ ಸಂಬಂಧ ಸಂಬಂದಪಟ್ಟ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ತರಬೇತಿಯನ್ನು ಸಹ ನೀಡಲಾಗುವುದು. ಕಾರ್ಡ್ ಹಂಚಿಕೆಯನ್ನು ಸಕಾಲ ವ್ಯಾಪ್ತಿಗೆ ಸೇರಿಸಲಾ ಗುವುದು ಈ ಕಾರಣದಿಂದ ಕಾರ್ಡ್ ನೀಡುವಲ್ಲಿ ವಿಳಂಬ ತಪ್ಪಿಸಬಹುದು. ರಿಜಿಸ್ಟರ್ ಪೋಸ್ಟ್ನಲ್ಲಿ ಕಾರ್ಡ್ ಮನೆಗೆ ತಲುಪುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಿಖೆಯ ಯೋಗೇಶ್ವರ ಸಭೆಗೆ ಮಾಹಿತಿ ನೀಡಿದರು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಕೋರಿದ ಮಾಹಿತಿಗಳನ್ನು ಸರಿಯಾಗಿ ನೀಡಬೇಕೆಂದರು. ಕಿಂಡಿ ಅಣೆಕಟ್ಟುಗಳು ರೈತರ ಕೃಷಿಗೆ ಪೂರಕವಾಗಿರಬೇಕೆಂದು ಒತ್ತಾಯಿಸಿದರು. ಮುಳ್ಳಿಕಟ್ಟೆ ಮೂಲಕ ಆಲೂರು, ನಾಡ, ಗುಡ್ಡೆಯಂಗಡಿಗೆ ನೀಡಿರುವ ಬಸ್ ಪರ್ಮಿಟ್ಗಳ ಮಾಹಿತಿ ಪಡೆದ ಬಾಬು ಶೆಟ್ಟಿ, ಪರವಾನಿಗೆ ಗಳನ್ನು ಖುದ್ದು ಇಲಾಖಾ ಇನ್ಸ್ಪೆಕ್ಟರ್ಗಳು ಪರಿಶೀಲಿಸಿ ವರದಿ ನೀಡಲು ಸೂಚಿಸಿದರು.
ಈ ಬಾರಿ ಕಿಂಡಿ ಅಣೆಕಟ್ಟುಗಳಿಗೆ ನವೆಂಬರ್ ತಿಂಗಳಿನಲ್ಲೇ ಹಲಗೆ ಹಾಕಲು ಅರಂಭಿಸುವುದಾಗಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಉತ್ತರಿಸಿದರು. ವಸತಿ ಯೋಜನೆಯಡಿ ಜಿಲ್ಲೆಯಲ್ಲಿ ನೂತನ ವಸತಿ ಯೋಜನೆಗಳಡಿ ಶೇ.42ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಬ್ರಹ್ಮಾವರ, ಉಡುಪಿ ಸುತ್ತಮುತ್ತ ಇಲಿಜ್ವರ ಪ್ರಕರಣದ ಸಮಗ್ರ ಮಾಹಿತಿ ನೀಡುವಂತೆ ಜಿಪಂ ಅಧ್ಯಕ್ಷರು ಡಿಎಚ್ಒಗೆ ಸೂಚಿಸಿದರು. ಬೇಸಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲು ಈಗಲೇ ಕ್ರಿಯಾ ಯೋಜನೆ ರೂಪಿಸಿ ಕಳುಹಿಸುವಂತೆ ಹಾಗೂ ವಸತಿ ಯೋಜನೆಗಳಿಗೆ ಮರಳು ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಅಗತ್ಯ ಮರಳಿನ ಬೇಡಿಕೆ ಪಟ್ಟಿ ಸಿದ್ದಪಡಿಸಿ ಎಂದೂ ಸಿಇಒ ಹೇಳಿದರು.
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರೆಅವರು ಆನ್ಲೈನ್ ಮೂಲಕ ಸ್ಕಾಲರ್ಷಿಪ್ ನಮೂದಿಸುವಿಕೆಗೆ ತೊಂದರೆಯಾಗುತ್ತಿದೆ ಎಂಬುದನ್ನು ಬಿಸಿಎಂ ಅಧಿಕಾರಿಗಳ ಗಮನಕ್ಕೆ ತಂದರು. ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತರಿದ್ದರು. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಸ್ವಾಗತಿಸಿ, ಸಭೆಯನ್ನು ನಡೆಸಿಕೊಟ್ಟರು.
ಮೊಬೈಲ್ನಲ್ಲಿ ಪಡಿತರ ಕೂಪನ್
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 1,60,284 ಆದ್ಯತಾ ಕುಟುಂಬಗಳಿಗೆ ಪಡಿತರ ಆಹಾರ ಹಂಚಿಕೆ ಮಾಡಿದ್ದು, ಈ ತಿಂಗಳ 29ರವ ರೆಗೆ ಪಡಿತರ ಕೂಪನ್ ವಿತರಿಸಲಾಗುವುದು ಎಂದು ಇಲಾಖೆ ಉಪನಿರ್ದೇಶಕ ಯೋಗೇಶ್ವರ್ ತಿಳಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 1,60,284 ಆದ್ಯತಾ ಕುಟುಂಬಗಳಿಗೆ ಪಡಿತರ ಆಹಾರ ಹಂಚಿಕೆ ಮಾಡಿದ್ದು, ಈ ತಿಂಗಳ 29ರವ ರೆಗೆ ಪಡಿತರ ಕೂಪನ್ ವಿತರಿಸಲಾಗುವುದು ಎಂದು ಇಲಾಖೆ ಉಪನಿರ್ದೇಶಕ ಯೋಗೇಶ್ವರ್ ತಿಳಿಸಿದರು. ಗ್ರಾಹಕರು ಸ್ವತ: ತಾವೇ ಕೂಪನ್ ಪಡೆಯಲು ಆಧಾರ್ಗೆ ಜೋಡಣೆ ಮಾಡಿರುವ ಮೊಬೈಲ್ನಿಂದ 161 ಡಯಲ್ ಮಾಡಿ 4 ಪ್ರೆಸ್ ಮಾಡಿ ಸ್ಟಾರ್ ಒತ್ತಿದಲ್ಲಿ ಕೂಪನ್ ಕೋಡ್ ದೊರೆಯಲಿದೆ. ಇದನ್ನು ಪಡಿತರ ಅಂಗಡಿಯಲ್ಲಿ ತೋರಿಸಿದರೆ ರೇಷನ್ ದೊರೆಯಲಿದೆ. ಇಕೂಪನ್ನಿಂದ ಪಡಿತರ ದೊರೆಯ ಲಿದೆ ಎಂದವರು ತಿಳಿಸಿದರು.
ಅಕ್ಟೋಬರ್ ತಿಂಗಳಿನಿಂದ 3 ತಿಂಗಳ ಕೂಪನ್ ಒಟ್ಟಿಗೆ ದೊರೆಯಲಿದೆ ಎಂದ ಅವರು ಮುಂದಿನ ದಿನಗಳಲ್ಲಿ 6 ತಿಂಗಳ ಕೂಪನ್ ಒಟ್ಟಿಗೆ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ. ಇಲಾಖೆಯು ಕೂಪನ್ ಪಡೆಯುವ ಬಗ್ಗೆ ಎಲ್ಲ ಪಡಿತರ ಅಂಗಡಿಗಳ ಮುಂದೆ, ಸಮೂಹ ಮಾಧ್ಯಮಗಳ ಮುಖಾಂತರ, ಮಾಹಿತಿ ಪಲಕಗಳ ಮೂಲಕ ಜನಸಾಮಾನ್ಯರಿಗೆ ಮಾಹಿತಿ ನೀಡಲಾಗುತ್ತಿದೆ ಎಂದೂ ಯೋಗೇಶ್ವರ್ ವಿವರಿಸಿದರು.







