ಉಪ್ಪಿನಂಗಡಿ : ಗಾಂಜಾ ಸಹಿತ ಓರ್ವನ ಬಂಧನ

ಉಪ್ಪಿನಂಗಡಿ,ಸೆ.24: ಅಕ್ರಮವಾಗಿ ಗಾಂಜಾವನ್ನು ಸಾಗಿಸುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಉಪ್ಪಿನಂಗಡಿ ಪೊಲೀಸರು, ಗಾಂಜಾ ಸಹಿತ ಓರ್ವ ಆರೋಪಿಯನ್ನು ಬಂಧಿಸಿದ್ದು, ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಉಪ್ಪಿನಂಗಡಿಯ ಗಾಂಧಿಪಾರ್ಕ್ ನಿವಾಸಿ ಉದಯ (35) ಬಂಧಿತ ಆರೋಪಿ. ಬಂಧಿತನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 3 ಪ್ಯಾಕೇಟ್ ಗಾಂಜಾ, 650 ರೂಪಾಯಿ ನಗದು, 6 ಸಣ್ಣ ಪ್ಲಾಸ್ಟಿಕ್ ಕವರ್ನೊಂದಿಗೆ ಸಾಗಾಟಕ್ಕೆ ಬಳಸಿದ ಅಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ಶನಿವಾರ ಬೆಳಗ್ಗೆ ಖಚಿತ ಮಾಹಿತಿಯ ಮೇರೆಗೆ ಅಟೋ ರಿಕ್ಷಾವೊಂದನ್ನು ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಜಂಕ್ಷನ್ ಬಳಿ ತಡೆದು ನಿಲ್ಲಿಸಿದ ಪೊಲೀಸರು, ತಪಾಸಣೆ ನಡೆಸಿದಾಗ ಅದರಲ್ಲಿ ಮೂರು ಪ್ಯಾಕೇಟ್ನಲ್ಲಿ ಒಟ್ಟು 186 ಗ್ರಾಂ ಗಾಂಜಾ ಪತ್ತೆಯಾಗಿದೆ. ಈ ಸಂದರ್ಭ ಅಟೋದಲ್ಲಿದ್ದ ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಇವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಉಪ್ಪಿನಂಗಡಿ ಪಿಎಸ್ಐ ತಿಮ್ಮಪ್ಪ ನಾಯ್ಕ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ದೇವದಾಸ್ ಗೌಡ, ಶ್ರೀಧರ್, ಸಚಿನ್, ದೀಪಕ್ ಭಾಗವಹಿಸಿದ್ದರು.





