ಕಾವೇರಿ ವಿವಾದದಲ್ಲಿ ಮಧ್ಯಪ್ರವೇಶಿಸಿ: ಪ್ರಧಾನಿಗೆ ಬೆಂಗಳೂರಿನ ಶಾಲಾ ವಿದ್ಯಾರ್ಥಿಗಳ ಮನವಿ

ಹೊಸದಿಲ್ಲಿ, ಸೆ.25: ಕರ್ನಾಟಕ ಮತ್ತು ತಮಿಳುನಾಡು ನಡುವೆ ಸುದೀರ್ಘ ಕಾಲದಿಂದ ವಿರಸಕ್ಕೆ ಕಾರಣವಾಗಿರುವ ಕಾವೇರಿ ವಿವಾದದಲ್ಲಿ ಮಧ್ಯಪ್ರವೇಶಿಸುವಂತೆ ಬೆಂಗಳೂರಿನ ಶಾಲಾ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ. ‘ಹಲವು ಜೀವಗಳು ಬಲಿಯಾಗಿವೆ. ಪ್ರತಿಭಟನೆಯ ಸಂದರ್ಭ ಹಲವು ಮಂದಿ ಗಾಯಗೊಂಡಿದ್ದಾರೆ. ಈ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಹಿಂಸೆಗೆ ಅವಕಾಶ ನೀಡಬಾರದು' ಎಂದು ಬೆಂಗಳೂರಿನ ಸುಮ ಪಬ್ಲಿಕ್ ಸ್ಕೂಲ್ನ ವಿದ್ಯಾರ್ಥಿಗಳು ಎಎನ್ಐಗೆ ತಿಳಿಸಿದ್ದಾರೆ. ಕಳೆದ ಕೆಲ ವಾರಗಳಲ್ಲಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಬಂದ್, ಪ್ರತಿಭಟನೆ ಮುಂತಾದ ಘಟನೆಗಳಲ್ಲಿ ಜೀವಹಾನಿಯ ಜೊತೆಗೆ ಆಸ್ತಿಪಾಸ್ತಿಗೂ ಅಪಾರ ಪ್ರಮಾಣದಲ್ಲಿ ಹಾನಿಯಾಗಿತ್ತು. ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶ ವಿರೋಧಿಸಿ ಕರ್ನಾಟಕದಲ್ಲಿ ಸೆ.12ರಂದು ಬಂದ್ ನಡೆಸಲಾಗಿತ್ತು. ಇದಾದ ಎರಡು ದಿನದ ಬಳಿಕ ಹೇಳಿಕೆ ನೀಡಿದ್ದ ಪ್ರಧಾನಿ ಮೋದಿ, ಕರ್ನಾಟಕ ರಾಜ್ಯದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಿಂದ ತುಂಬಾ ನೋವಾಗಿದೆ. ಉಭಯ ರಾಜ್ಯದ ಜನರು ಶಾಂತಿ ಮತ್ತು ಸೌಹಾರ್ದತೆಯನ್ನು ಉಳಿಸಿಕೊಳ್ಳಬೇಕು. ಕಾನೂನು ಉಲ್ಲಂಘನೆ ಪರ್ಯಾಯ ಮಾರ್ಗವಲ್ಲ. ಯಾವುದೇ ವಿವಾದವನ್ನೂ ಕಾನೂನಿನ ಅಡಿಯಲ್ಲೇ ಪರಿಹರಿಸಿಕೊಳ್ಳಬೇಕು ಎಂದಿದ್ದರು. ಬೆಂಗಳೂರು ಮತ್ತು ಕಾವೇರಿ ನದೀಪಾತ್ರದಲ್ಲಿ ಬರುವ ಗ್ರಾಮಗಳ ಜನರ ಉಪಯೋಗಕ್ಕೆ ಮಾತ್ರ ಕಾವೇರಿ ನೀರನ್ನು ಬಿಡುವ ಕುರಿತು ಕಳೆದ ಶುಕ್ರವಾರ ಕರ್ನಾಟಕದ ವಿಧಾನಸಭೆ ಮತ್ತು ವಿಧಾನ ಪರಿಷತ್ನಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು.





