ವಿಶೇಷ ಓದುವಿಕೆ ಕಲಾಪದಲ್ಲಿ ಲಕ್ಷಕ್ಕೂ ಹೆಚ್ಚು ಮಕ್ಕಳು ಭಾಗಿ
ಹೊಸದಿಲ್ಲಿ, ಸೆ.25: ಗ್ರಾಮೀಣ ಭಾರತದ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳು ಸೌರ ದೀಪಗಳ ಸೌಮ್ಯ ಬೆಳಕಿನ ಸುತ್ತ ಸೇರಿ, ಓದುವ ಹವ್ಯಾಸವನ್ನು ಬೆಳೆಸುವ ಕಾರ್ಯಕ್ರಮವೊಂದರ ಭಾಗವಾಗಿ, ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಿದ್ದಾರೆ.
ಎಳೆಯ ಮನಸ್ಸುಗಳನ್ನು ಬೆಳಗುವ ಈ ಸೆಪ್ಟಂಬರ್ 8 ಕಾರ್ಯಕ್ರಮವನ್ನು 'ಧರ್ಮ ಲೈಫ್' ಹೆಸರಿನ ಸಾಮಾಜಿಕ ಸಂಸ್ಥೆ ಆಯೋಜಿಸಿತ್ತು. ಗ್ರಾಮೀಣ ಉದ್ಯಮದ ಮೂಲಕ ಸೌರ ದೀಪಗಳಂತಹ ತನ್ನ ಉತ್ಪನ್ನಗಳ ಮಾರಾಟ ಹಾಗೂ ಶಿಕ್ಷಣದ ಮೂಲಕ ಸಬಲೀಕರಣದ ಅವಳಿ ಗುರಿಗಳ ಸಾಧನೆ ಅದರ ಉದ್ದೇಶವಾಗಿತ್ತು.
ಆ ದಿನ ಸುಮಾರು 1,400 ಗ್ರಾಮಗಳಲ್ಲಿ 8-15ರ ನಡುವಿನ ಹರೆಯದ 1.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗಾಗಿ ಓದುವಿಕೆಯ ಕಲಾಪಗಳನ್ನು ನಡೆಸಲಾಯಿತೆಂದು ಧರ್ಮಲೈಫ್ನ ಸ್ಥಾಪಕ ಹಾಗೂ ಸಿಇಒ ಗೌರವ್ ಮೆಹ್ತಾ ತಿಳಿಸಿದ್ದಾರೆ.
50ನೆ ವರ್ಷದ ಅಂತಾರಾಷ್ಟ್ರೀಯ ಸಾಕ್ಷರತಾ ದಿನದ ಯುನೆಸ್ಕೊ ಘೋಷ ವಾಕ್ಯ 'ಭೂತವನ್ನು ಓದುವುದು-ಭವಿಷ್ಯವನ್ನು ಬರೆಯುವುದು' ಎಂದಾಗಿದೆ.
ಪಾರಂಪರಿಕವಾಗಿ ಗುಣಮಟ್ಟದ ಶಿಕ್ಷಣ ಲಭ್ಯವಾಗದ ಮಕ್ಕಳಿಗೆ ಸ್ವಯಂ ಸಬಲೀಕರಣದ ಆಯುಧವೊಂದನ್ನು ನೀಡಲು ತಾವು ಬಯಸಿದ್ದೆವು. ಈ ಅಭಿಯಾನದ ಮೂಲಕ ಸ್ವಚ್ಛ ಇಂಧನದ ಸೌರ ಕಂದೀಲುಗಳ ಪ್ರಾತ್ಯಕ್ಷಿಕೆಗೂ ತಾವು ಇಚ್ಛಿಸಿದ್ದೆವು. ಅವುಗಳಿಂದ ಸೂರ್ಯಾಸ್ತದ ಬಳಿಕವೂ ದೀರ್ಘ ಸಮಯ ಗ್ರಾಮೀಣ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುತ್ತದೆಂದು ಮೆಹ್ತಾ ಹೇಳಿದ್ದಾರೆ.
ಪುಸ್ತಕಗಳ ಲಭ್ಯತೆ ಹಾಗೂ ಓದುವಿಕೆ ಯನ್ನು ವಿನೋದವನ್ನಾಗಿಸುವ ಈ ಅಭಿಯಾನ ವರ್ಷವಿಡೀ ಮುಂದು ವರಿಯಲಿದ್ದು, ಮುಂದಿನ ವರ್ಷದ ಅಂತಾರಾಷ್ಟ್ರೀಯ ಸಾಕ್ಷರತಾ ದಿನದಂದು ಸಮಾರೋಪಗೊಳ್ಳಲಿದೆ.
ಧರ್ಮಲೈಫ್, ಬಿಹಾರ, ಉತ್ತರಪ್ರದೇಶ, ರಾಜಸ್ಥಾನ, ಗುಜರಾತ್, ಕರ್ನಾಟಕ , ಮಹಾರಾಷ್ಟ್ರ, ಛತ್ತೀಸ್ಗಡ ಸಹಿತ ರಾಜ್ಯಗಳಲ್ಲಿ 4,295 ಗ್ರಾಮೀಣ ಉದ್ದಿಮೆಗಳನ್ನು ನಡೆಸುತ್ತಿದೆಯೆಂದು ಮೆಹ್ತಾ ತಿಳಿಸಿದ್ದಾರೆ.





