ರಾಜ್ಯಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆ
ಕೀರ್ತಿರಾಜ್, ವಂದನಾಗೆ ಅಗ್ರಸ್ಥಾನ

ಚಿಕ್ಕಮಗಳೂರು, ಸೆ.26: ಪಶ್ಚಿಮಘಟ್ಟ ಸಂರಕ್ಷಣೆಗಾಗಿ ಗಾಲ್ಫ್ ಕ್ಲಬ್ ಆಯೋಜಿಸಿದ್ದ ರಾಜ್ಯಮಟ್ಟದ ಗುಡ್ಡಗಾಡು ಓಟದ ಪುರುಷರ ವಿಭಾಗದಲ್ಲಿ ಕೀರ್ತಿರಾಜ್ ಮತ್ತು ಮಹಿಳಾ ವಿಭಾಗದಲ್ಲಿ ವಂದನಾ ಅಗ್ರಸ್ಥಾನಗಳಿಸಿದ್ದು, ಇಬ್ಬರೂ ಸೇರಿದಂತೆ ಹೆಚ್ಚಿನ ಬಹುಮಾನಗಳು ಚಿಕ್ಕಮಗಳೂರಿನ ಜಿಲ್ಲೆಯ ಪಾಲಾಗಿವೆೆ.
ಇಂದು ಚಿಕ್ಕಮಗಳೂರು ಗಾಲ್ಫ್ ಕ್ಲಬ್ನಿಂದ ಆರಂಭಗೊಂಡ ಗುಡ್ಡಗಾಡು ಓಟವನ್ನು ಎಸ್ಪಿ ಅಣ್ಣಾಮಲೈ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು. 10 ಕಿ.ಮೀ.ದೂರದ ಪುರುಷರ ವಿಭಾಗದ ಮೊದಲ ತಂಡದ ಸ್ಪರ್ಧಿಗಳು ಕ್ಲಬ್ ಆವರಣದಲ್ಲೇ 1.5 ಕಿ.ಮೀ.ಓಡಿ ನಂತರ ಅಲ್ಲಂಪುರ, ಕೈಮರ ಮೂಲಕ ಗಿರಿರಸ್ತೆಯಲ್ಲಿ ಹಾದು ತಿಪ್ಪನಹಳ್ಳಿ ಎಸ್ಟೇಟಿನ ಪ್ರಕೃತಿ ಮನೆಯಂಗಳವನ್ನು ತಲುಪಿದರು. ಮೊದಲ ಸ್ಪರ್ಧಿ ಕಲ್ಲತ್ತಿಪುರದ ಗ್ರಾಮೀಣ ಪ್ರತಿಭೆ ಕೀರ್ತಿರಾಜ್ ಕೇವಲ 41ನಿಮಿಷದಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ ಪಡೆದರು. ಒಂದು ನಿಮಿಷ ತಡವಾಗಿ ತಲುಪಿದ ಪ್ರಥಮ ಬಿ.ಎ. ವಿದ್ಯಾರ್ಥಿ ರುದ್ರಪ್ಪ ದ್ವಿತೀಯ ಸ್ಥಾನ ಗಳಿಸಿದರೆ, 43 ನಿಮಿಷಗಳಲ್ಲಿ ಗುರಿತಲುಪಿದ ಉಜಿರೆ ಎಸ್ಡಿಎಂ ಕಾಲೇಜಿನ ಎಚ್.ಎಸ್.ಅಭಿಷೇಕ್ ತೃತೀಯಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದ 10ಕಿ.ಮೀ. ಗುಡ್ಡಗಾಡು ಓಟವನ್ನು ವಿಶ್ರಾಂತ ಜಿಲ್ಲಾಧಿಕಾರಿ ಚನ್ನಪ್ಪಗೌಡ ಉದ್ಘಾಟಿಸಿದರು. ನಗರದ ರಾಮಹಳ್ಳಿವಾಸಿ ವಂದನಾ 58 ನಿಮಿಷಗಳಲ್ಲಿ ಗುರಿತಲುಪಿ ಮೊದಲ ಸ್ಥಾನ ಗಳಿಸಿದರು. ಪ್ರಸ್ತುತ ಶಿವಮೊಗ್ಗದಲ್ಲಿ ಸಿಪಿಎಡ್ ವ್ಯಾಸಂಗ ಮಾಡುತ್ತಿರುವ ವಂದನಾ ಈವರೆಗೆ ಏಳುರಾಷ್ಟ್ರೀಯ ಬಹುಮಾನಗಳನ್ನು ಗಳಿಸಿರುವ ಅಥ್ಲಿಟ್. ಬೆಂಗಳೂರಿನ ಪ್ರಿಯಾಂಕಾಮಲ್ಲೇಗೌಡ ದ್ವಿತೀಯಸ್ಥಾನ ಗಳಿಸಿದರೆ ಶೃಂಗೇರಿಯ ಗಾನವಿ ತೃತೀಯ ಬಹುಮಾನ ಗಳಿಸಿದರು. ಮಹಿಳೆಯರ 5ಕಿ.ಮೀ.ಓಟದಲ್ಲಿ ನಗರದ ಶಿಶಿರಗೌಡ ಪ್ರಥಮ, ಬೆಂಗಳೂರಿನ ಸುಧಾಭಟ್ ದ್ವಿತೀಯ ಹಾಗೂ ಶಾನ್ಸಿ ತೃತೀಯಬಹುಮಾನ ಗಳಿಸಿದರು. ಮುಳ್ಳಯ್ಯನಗಿರಿ ತಪ್ಪಲಿನ ಹಸಿರು ವನಸಿರಿನಡುವಿನ ಪ್ರಕೃತಿ ಮನೆಯಂಗಳದಲ್ಲಿ ಬಹುಮಾನಗಳನ್ನು ಮಹಿಳಾ ಜಾಗೃತಿಸಂಘದ ಅಧ್ಯಕ್ಷೆ ಗೌರಮ ್ಮಬಸವೇಗೌಡ, ಗಾಲ್ಫ್ ಕ್ಲಬ್ ಅಧ್ಯಕ್ಷ ಎ.ಬಿ.ಸುದರ್ಶನ್ ಮತ್ತಿತರ ಗಣ್ಯರು ವಿತರಿಸಿದರು. ಪ್ರಥಮ ಸ್ಥಾನಗಳಿಸಿದವರಿಗೆ 15,000 ರೂ., ದ್ವಿತೀಯ 10,000ರೂ., ತೃತೀಯ 5,000ರೂ.ನಗದುಬಹುಮಾದೊಂದಿಗೆ ಆಕರ್ಷಕ ಶೀಲ್ಡ್ ನೀಡಿ ಗೌರವಿಸಲಾಯಿತು. ಪ್ರಾಯೋಜಕ ಲೆಗಸಿ ಮುಖ್ಯಸ್ಥ ಕೃಷ್ಣಮೂರ್ತಿ, ಗಾಲ್ಫ್ ಕ್ಲಬ್ ಪದಾಧಿಕಾರಿಗಳಾದ ಎ.ಬಿ.ಮಲ್ಲಿಕಾರ್ಜುನ, ಬಿ.ಎಚ್.ನರೇಂದ್ರ, ಟಿ.ಎಂ.ಜಯದೇವ್, ಸತ್ಯನಾರಾಯಣ, ವಿಜಯಕುಮಾರ್, ಗೋಪಾಲಕೃಷ್ಣ ಮತ್ತಿತರರು ಪದಕ ವಿತರಿಸಿದರು.
ಪಶ್ಚಿಮಘಟ್ಟದ ಜಾಗೃತಿಗಾಗಿ ಆಯೋಜನೆಗೊಂಡ ಓಟದಲ್ಲಿ ಬೆಂಗಳೂರು ವಿವಿಧೆಡೆಯಿಂದ ಆಗಮಿಸಿದ್ದ 90ಕ್ಕೂಹೆಚ್ಚು ಮಂದಿಪಾಲ್ಗೊಂಡಿದ್ದರು. ಹಿರಿಯ ನಾಗರಿಕರಾದ ಹಿರೇಕೊಳಲೆಯ ಲೇಖಾ ಚಂದ್ರಶೇಖರ್, ಮೈಸೂರಿನ ಕೃಷ್ಣಮೂರ್ತಿ ಗುರಿ ತಲುಪಿ ಗಮನಸೆಳೆದರು. ಬೆಂಗಳೂರಿನ ಅಥ್ಲೆಟಿಕ್ ತರಬೇತುದಾರ ಧರ್ಮೇಂದರ್, ಐಎನ್ಎಸ್ ಕೋಚ್ಗಳಾಗಿದ್ದ ಭಾಸ್ಕರ್, ಫ್ರಾಂಕಿ ಮತ್ತಿತರರು ಸ್ಪರ್ಧೆಯನ್ನು ನಡೆಸಿಕೊಟ್ಟರು.





