ಪ್ರಧಾನ ಮಂತ್ರಿ ಮಧ್ಯ ಪ್ರವೇಶಕ್ಕೆ ನರೇಂದ್ರ ಮೋದಿ ವಿಚಾರ್ ಮಂಚ್ ಆಗ್ರಹ
ಕಾವೇರಿ ಜಲ ವಿವಾದ
ಪುತ್ತೂರು, ಸೆ.27: ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳು ಮಧ್ಯ ಪ್ರವೇಶಿಸಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಸಮರ್ಪಕ ನ್ಯಾಯ ಒದಗಿಸುವಂತೆ ನರೇಂದ್ರ ಮೋದಿ ವಿಚಾರ್ ಮಂಚ್ನ ಕರ್ನಾಟಕ ಶಾಖೆಯ ಪದಾಧಿಕಾರಿಗಳು ಪ್ರಧಾನ ಮಂತ್ರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಕಾವೇರಿ ಜಲ ವಿವಾದವು ಸ್ವಾತಂತ್ರ್ಯ ಪೂರ್ವದಿಂದಲೇ ಪ್ರಾರಂಭವಾಗಿದ್ದು, ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಈತನಕ ಸಮಸ್ಯೆಯನ್ನು ಪರಿಹಾರ ಮಾಡಲು ಸಾಧ್ಯವಾಗಿಲ್ಲ. ಇದೀಗ ಈ ವಿವಾದವು ಕೇವಲ ನೀರಿಗೆ ಸೀಮಿತವಾಗಿರದೆ ಎರಡು ರಾಜ್ಯಗಳ ಜನಜೀವನದ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತಿದೆ. ಮಾತ್ರವಲ್ಲದೆ ಕೋಟ್ಯಾಂತರ ಮಕ್ಕಳ ಶಿಕ್ಷಣಕ್ಕೆ ಅಡತಡೆಯಾಗುವುದರ ಜೊತೆಗೆ ಮಕ್ಕಳ ಬದುಕಿನ ಮೇಲೆ ಅಸಂವಿಧಾನಿಕ ಅಂಶಗಳು ಬೆಳೆಯಲು ಕಾರಣವಾಗುತ್ತಿದೆ. ರಾಜ್ಯ ರಾಜ್ಯದೊಳಗೆ ದ್ವೇಷದ ಕಿಡಿ ಬೆಳೆದು ದೊಂಬಿ ಗಲಾಟೆಗೆ ಕಾರಣವಾಗುತ್ತಿದೆ.
ಈ ಸಮಸ್ಯೆ ಬಗೆಹರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾವೇರಿ ಜಲವಿವಾದದ ಮಧ್ಯಸ್ಥಿಕೆ ವಹಿಸಿ ಎರಡೂ ರಾಜ್ಯಗಳಿಗೆ ಸಮರ್ಪಕ ನ್ಯಾಯ ಒದಗಿಸಬೇಕು ಎಂದು ನರೇಂದ್ರ ಮೋದಿ ವಿಚಾರ ಮಂಚ್ನ ರಾಷ್ಟ್ರಾಧ್ಯಕ್ಷ ರವಿ ಚಾಣಕ್ಯ, ರಾಷ್ಟ್ರ ಯುವ ಶಾಖಾ ಅಧ್ಯಕ್ಷ ಯೋಗೀಶ್ ಭಂಡಾರಿ, ಹಿರಿಯ ರಾಷ್ಟ್ರೀಯ ಉಪಾಧ್ಯಕ್ಷ ನಿಲೇಶ್ ಭಂಡಾರಿ, ದಕ್ಷಿಣ ಭಾರತ ಪ್ರಭಾರಿ ದಯಾನಂದ ಕೆ., ಕರ್ನಾಟಕ ರಾಜ್ಯ ಅಧ್ಯಕ್ಷ ಬಿ.ಎಲ್. ಮಂಜುನಾಥ್, ರಾಜ್ಯ ಕಾರ್ಯನಿರತ ಅಧ್ಯಕ್ಷ ಮುಹಮ್ಮದ್ ವಸೀಂ ಮತ್ತು ರಾಜ್ಯ ಕಾನೂನು ಸಲಹೆಗಾರ್ತಿ ಕಸ್ತೂರಿ ಪ್ರಧಾನಿಯವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.