ಉಪ್ಪಿನಂಗಡಿ: ಮೆಸ್ಕಾಂ ಅವ್ಯವಸ್ಥೆಗೆ ಗ್ರಾಹಕರ ಪರದಾಟ
.jpg)
ಉಪ್ಪಿನಂಗಡಿ, ಸೆ.27: ಮೆಸ್ಕಾಂನವರು ಈ ಬಾರಿ ಉಪ್ಪಿನಂಗಡಿ ಸುತ್ತಮುತ್ತಲಿನ ಹೆಚ್ಚಿನ ಗ್ರಾಹಕರಿಗೆ ವಿದ್ಯುತ್ ಬಿಲ್ ಅನ್ನು ಪಾವತಿ ಅವಧಿ ಮುಗಿದ ಬಳಿಕ ನೀಡಿರುವುದರಿಂದ ವಿದ್ಯುತ್ ಗ್ರಾಹಕರು ಬಿಲ್ನ ಮೂಲ ಮೊತ್ತಕ್ಕಿಂತ ಹೆಚ್ಚುವರಿ ಬಡ್ಡಿ ಕಟ್ಟಬೇಕಾದ ಅನಿವಾರ್ಯತೆ ಎದುರಾಗಿದ್ದು, ವಿದ್ಯುತ್ ಬಿಲ್ ಕಟ್ಟಲು ಪುತ್ತೂರಿಗೆ ತೆರಳಬೇಕಾದ ಸ್ಥಿತಿ ಎದುರಾಗಿದೆ. ಈ ಭಾಗದಲ್ಲಿ ವಿದ್ಯುತ್ ಮಾಪಕ ಓದುವವರು ನೀಡಿದ ಬಿಲ್ನಲ್ಲಿ ವಿದ್ಯುತ್ ಬಿಲ್ ಗ್ರಾಹಕರ ಕೈ ಸೇರುವ ಮೊದಲೇ ಬಿಲ್ ಕಟ್ಟುವ ಅವಧಿ ಮುಗಿದಿರುವುದು ಕಂಡು ಬಂದಿದೆ. ಉದಾಹರಣೆಗೆ ರಾಮನಗರದ ಮಹೇಶ್ ಮಸ್ಕರೇನ್ಹಸ್ ಎಂಬವರಿಗೆ ಸೆ.26ರಂದು ಮಾಪಕ ಓದುವವರು ಮನೆಗೆ ಬಂದು ವಿದ್ಯುತ್ ಬಿಲ್ ನೀಡಿದ್ದು, ಅದರಲ್ಲಿ ಮಾಪಕ ಓದಿದ ದಿನಾಂಕ ಸೆ.26 ಎಂದು ನಮೂದಾಗಿದ್ದರೆ, ಬಿಲ್ ಪಾವತಿ ಮಾಡುವ ಕೊನೆಯ ದಿನಾಂಕ ಸೆ.24 ಎಂದು ನಮೂದಾಗಿದೆ.
ಗಾಂಧಿಪಾರ್ಕ್ ಬಳಿಯ ವಿದ್ಯುತ್ ಗ್ರಾಹಕಿ ಜಾಸ್ಪೀನ್ ಮಿನೇಜಸ್ ಎಂಬವರಿಗೆ ನೀಡಿದ ವಿದ್ಯುತ್ ಬಿಲ್ನಲ್ಲೂ ದೋಷ ಕಂಡು ಬಂದಿದ್ದು, ಅವರಿಗೆ ಸೆ.26ಕ್ಕೆ ಬಿಲ್ ಸಿಕ್ಕಿದರೆ, ಬಿಲ್ ಪಾವತಿ ಮಾಡುವ ಕೊನೆಯ ದಿನಾಂಕವನ್ನು ಸೆ.25 ಎಂದು ನಮೂದಿಸಲಾಗಿದೆ. ಇನ್ನೂ ಯು.ಟಿ.ಆಸೀಯಮ್ಮ ಎಂಬವರಿಗೆ ಸೆ.27ರಂದು ವಿದ್ಯುತ್ ಬಿಲ್ ಸಿಕ್ಕಿದ್ದು, ಅದರ ಬಿಲ್ ಪಾವತಿ ಕೊನೆಯ ದಿನಾಂಕ ಸೆ.25 ಎಂದು ನಮೂದಾಗಿದೆ.
ತಿಂಗಳ ಮೊದಲ ದಿನಾಂಕದಿಂದ 6ನೆ ತಾರೀಕಿನಂದು ಮೆಸ್ಕಾಂನವರು ಉಪ್ಪಿನಂಗಡಿ ಪಂಚಾಯತ್ ಕಚೇರಿಯಲ್ಲಿ ವಿದ್ಯುತ್ ಬಿಲ್ ವಸೂಲು ಮಾಡುವ ವ್ಯವಸ್ಥೆ ಕಲ್ಪಿಸಿದ್ದಾರೆ. ಅಲ್ಲದೆ ತಿಂಗಳ 25ನೆ ತಾರೀಕಿನಂದು ರಾಮನಗರ ಬಳಿಯ ಲಕ್ಷ್ಮೀನಗರದ ಮೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ಬಿಲ್ ವಸೂಲಿ ಮಾಡಲಾಗುತ್ತದೆ. ಉಳಿದ ದಿನಗಳಲ್ಲಿ ಕಚೇರಿ ಅವಧಿಯಲ್ಲಿ ಉಪ್ಪಿನಂಗಡಿಯ ಅಂಚೆ ಕಚೇರಿಯಲ್ಲಿ ಬಿಲ್ ಪಾವತಿಸುವ ಸೌಲಭ್ಯವಿದೆ.
ಆದರೆ ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಬಿಲ್ ಪಾವತಿಯ ಅವಧಿ ಮುಗಿದ ಬಳಿಕ ಅಂಚೆ ಕಚೇರಿಯಲ್ಲಿ ವಿದ್ಯುತ್ ಬಿಲ್ ಸ್ವೀಕರಿಸುವುದಿಲ್ಲ. ಒಂದು ಮೆಸ್ಕಾಂನವರು ತಿಂಗಳಲ್ಲಿ ಎರಡು ಬಾರಿ ಪಂಚಾಯತ್ನಲ್ಲಿ ಬಿಲ್ ವಸೂಲು ಮಾಡುವ ಸಂದರ್ಭ ಅಲ್ಲಿಗೆ ತೆರಳಬೇಕು. ಇಲ್ಲದಿದ್ದಲ್ಲಿ ತಿಂಗಳಲ್ಲಿ ಒಂದು ಬಾರಿ ಬಿಲ್ ಪಾವತಿ ವ್ಯವಸ್ಥೆ ಇರುವ ರಾಮನಗರ ಬಳಿಯ ಲಕ್ಷ್ಮೀನಗರಕ್ಕೆ ತೆರಳಬೇಕು. ಇದು ಸಾಧ್ಯವಾಗದಿದ್ದರೆ ಪುತ್ತೂರಿಗೆ ತೆರಳಬೇಕಾದ ಸ್ಥಿತಿ ಎದುರಾಗಿದೆ.
ಈ ತಿಂಗಳು ಮೆಸ್ಕಾಂನವರು ಬಿಲ್ ವಸೂಲಿಗೆ ಪಂಚಾಯತ್ಗೆ ಹಾಗೂ ಮೆಸ್ಕಾಂ ಕಚೇರಿಗೆ ಬಂದು ಹೋಗಿಯಾಗಿದ್ದು, ಮುಂದೆ ಅವರು ಬರುವುದು ಮುಂದಿನ ತಿಂಗಳಾಗಿದೆ. ಆದ್ದರಿಂದ ಪಾವತಿ ಅವಧಿ ಮುಗಿದ ಬಳಿಕ ವಿದ್ಯುತ್ ಮಾಪನ ಓದುವವರು ಬಿಲ್ ನೀಡಿದ್ದರಿಂದ ಈ ಗ್ರಾಹಕರಿಗೆ ವಿದ್ಯುತ್ ಬಿಲ್ ಪಾವತಿಸಲು ದೂರದ ಪುತ್ತೂರಿಗೆ ತೆರಳಬೇಕಾಗಿದ್ದು, ಇದಕ್ಕಾಗಿ ಅನಗತ್ಯ ಶ್ರಮ, ಸಮಯವನ್ನು ವ್ಯರ್ಥ ಮಾಡಬೇಕಾಗಿದೆ. ಅಲ್ಲದೆ ಅವಧಿ ಮುಗಿದ ಬಳಿಕ ವಿದ್ಯುತ್ ಬಿಲ್ ಪಾವತಿಗೆ ಬಡ್ಡಿಯನ್ನು ಕಟ್ಟಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.





