ಕೇಂದ್ರ ಸರಕಾರದಿಂದ 8,293.28 ಕೋಟಿ ರೂ.ಬಿಡುಗಡೆ : ಸಂಸದ ನಳಿನ್

ಮಂಗಳೂರು, ಸೆ.28: ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಮಂಗಳೂರು ಮಹಾನಗರ ಪಾಲಿಕೆಯ ಅಭಿವೃದ್ಧಿಗೆ 959.21ಕೋಟಿ ರೂ. ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರಕಾರ 8,293.28 ಕೋಟಿ ರೂ. ಬಿಡುಗಡೆ ಮಾಡಿದೆ. ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವುದರಿಂದ ಮುಂದಿನ ಐದು ವರ್ಷದಲ್ಲಿ ಮಂಗಳೂರು ನಗರಕ್ಕೆ ಕೇಂದ್ರದಿಂದ 500 ಕೋಟಿ ಹಾಗೂ ರಾಜ್ಯ ಸರಕಾರದಿಂದ 500ಕೋಟಿ ಸೇರಿದಂತೆ 1,000ಕೋಟಿ ರೂ. ಬಿಡುಗಡೆಯಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸುದ್ದಿಗೊಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಂಗಳೂರು ನಗರವನ್ನು ಪ್ರಧಾನ ಮಂತ್ರಿಯವರ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಮಾಡಲು ಬೆಂಬಲ ನೀಡಿದ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಮಂಜೂರಾತಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಈ ಬಗ್ಗೆ ಸೂಕ್ತ ಸಲಹೆ ಸೂಚನೆ ನೀಡಿದ ಪಕ್ಷದ ಹಿರಿಯ ಮುಖಂಡರಾದ ಯೋಗೀಶ್ ಭಟ್, ಮಂಗಳೂರಿನ ಶಾಸಕ ಜೆ.ಆರ್.ಲೋಬೊ, ಹಿರಿಯ ಐಎಎಸ್ ಅಧಿಕಾರಿ ಪೊನ್ನುರಾಜ್ ಹಾಗೂ ಇತರ ಜನಪ್ರತಿನಿಧಿಗಳಿಗೆ ಸಾರ್ವಜನಿಕರಿಗೆ ಮನಪಾದ ಎಲ್ಲ ಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆ ಯಶಸ್ವಿಯಾಗಬೇಕಾಗಿದ್ದರೆ ಸ್ಥಳೀಯಾಡಳಿತ ಸಂಸ್ಥೆ, ರಾಜ್ಯ ಸರಕಾರ ಹಾಗೂ ಸಾರ್ವಜನಿಕರ ಸಹಕಾರದ ಅಗತ್ಯವಿದೆ. ರಾಜಕೀಯ ರಹಿತವಾದ ಅಭಿವೃದ್ಧಿಪರ ಚಿಂತನೆ ಬೇಕಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯನ್ನು ಅನುಷ್ಠಾನಗೊಳಿಸಲು ಹಿರಿಯ ಐಎಎಸ್ ಅಧಿಕಾರಿಗಳು ತಜ್ಞರನ್ನೊಳಗೊಂಡ ಪ್ರತ್ಯೇಕವಾದ ಮಂಡಳಿಯನ್ನು ರಚಿಸಲಾಗುವುದು. ಈ ಯೋಜನೆಯ ಮೂಲಕ ಮಂಗಳೂರಿನಲ್ಲಿ ವಿಶ್ವ ದರ್ಜೆಯ ಆಸ್ಪತ್ರೆ, ಶಿಕ್ಷಣ ಸಂಸ್ಥೆ, ಇತರ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸುವುದರೊಂದಿಗೆ ಜನರ ಜೀವನ ಮಟ್ಟ ಸುಧಾರಣೆಗೂ ಕ್ರಮ ಕೈಗೊಳ್ಳಲಾಗುವುದು. ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದಂತೆ 20ವರ್ಷಗಳ ಅವಧಿಯಲ್ಲಿ ವಿವಿಧ ಯೋಜನೆಗಳನ್ನು ಜೋಡಿಸಿ ಒಟ್ಟು 40 ಸಾವಿರ ಕೋಟಿ ರೂಪಾಯಿಯ ಯೋಜನೆಯನ್ನು ರೂಪಿಸಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಕೇಂದ್ರ ಸರಕಾರದಿಂದ ರೈಲ್ವೆ ಇಲಾಖೆಯ ಅಭಿವೃದ್ಧಿಗೆ 1,053.93 ಕೋಟಿ ರೂ., ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ 5,737 ಕೋಟಿ ರೂ., ದ.ಕ ಜಿಲ್ಲಾ ಪಂಚಾಯತ್ಗೆ 114 ಕೋಟಿ ರೂ., ಆರೋಗ್ಯ ಇಲಾಖೆಗೆ 22 ಕೋಟಿ ರೂ., ಮೀನುಗಾರಿಕಾ ಇಲಾಖೆಯ ಜಟ್ಟಿ ನಿರ್ಮಾಣಕ್ಕೆ 230 ಕೋಟಿ ರೂ., ಬಿ.ಸಿ ರೋಡು ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ -75ರ ಅಭಿವೃದ್ಧಿಗೆ 2,373 ಕೋಟಿ ರೂ. ಬಿಡುಗಡೆಯಾಗಿದೆ. ಕುಲಶೇಖರ-ಮೂಡುಬಿದಿರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 297 ಕೋಟಿ ರೂ., ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 101.13ಕೋಟಿ ರೂ., ಪಿಲಿಕುಳ ನಿಸರ್ಗ ಧಾಮ ಅಭಿವೃದ್ಧಿಗೆ 5 ಕೋಟಿ ರೂ., ಬೀಚ್ ಅಭಿವೃದ್ಧಿಗೆ 13.72 ಕೋಟಿ ರೂ., ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ಧಿ ಯೋಜನೆಯಡಿ 12.50 ಕೋಟಿ ರೂ., ಕದ್ರಿ ದೇವಸ್ಥಾನದ ಮೂಲಸೌಕರ್ಯ ಅಭಿವೃದ್ಧಿಗೆ 95ಲಕ್ಷ ರೂ., ನಬಾರ್ಡ್ ಯೋಜನೆಯ ಮೂಲಕ 25.63 ಕೋಟಿ ರೂ., ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ 54 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 24.75 ಕೋಟಿ ರೂ., ತೋಟಗಾರಿಕಾ ಇಲಾಖೆಗೆ 4.36 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಬಳ್ಪ ಗ್ರಾಮದಲ್ಲಿ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯಗಳ ಅಭಿವೃದ್ಧಿ
ಸಂಸದರ ಮಾದರಿ ಗ್ರಾಮವಾಗಿ ಆಯ್ಕೆ ಮಾಡಿರುವ ಬಳ್ಪ ಗ್ರಾಮದಲ್ಲಿ ಜನರ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಥಮ ಹಂತವಾಗಿ ವಿದ್ಯುತ್ ಸೌಲಭ್ಯಗಳಿಲ್ಲದ 36 ಪ್ರದೇಶಗಳಿಗೆ ಸೋಲಾರ್ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈ ಗೆತ್ತಿಕೊಳ್ಳಲಾಗಿದೆ. ಎರಡು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. 6 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗಿದೆ.ಒಂದು ಬ್ಯಾಂಕ್, ಸಹಕಾರಿ ಸಂಘ ಸ್ಥಾಪಿಸಲಾಗಿದೆ. ಮಾದರಿ ಗ್ರಾಮದ ಜನರ ವೈಯಕ್ತಿಕ ಅಭಿವೃದ್ಧಿಯ ಕಡೆಗೆ ಗಮನಹರಿಸಲಾಗಿದೆ. 60ಜನರಿಗೆ ಕಂಪ್ಯೂಟರ್ ತರಬೇತಿ, 160 ಜನರಿಗೆ ಟೈಲರಿಂಗ್ ತರಬೇತಿ, ಜೇನು ಕೃಷಿಯ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಪ್ರತಿ ಕುಟುಂಬದ ಸದಸ್ಯರ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಕಾಯಿಲೆಗಳ ಬಗ್ಗೆ ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯ. ಜನರ ಮಾನಸಿಕ ಶಾಂತಿ ವಿಕಸನಕ್ಕೆ ಪೂರಕವಾಗಿ ಮದ್ಯವರ್ಜನ ಶಿಬಿರ ನಡೆಸಲಾಗಿದೆ. ಭಜನಾ ತರಬೇತಿಯನ್ನು ನೀಡಲಾಗಿದೆ. 5 ಉತ್ತಮ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಈ ನಿಲ್ದಾಣದಲ್ಲಿ ಉತ್ತಮ ಮಾದರಿಯ ಶೌಚಾಲಯ ಇರುತ್ತದೆ. ಅದನ್ನು ನಿರ್ವಹಣೆ ಮಾಡಲು ಸ್ಥಳೀಯರಿಗೆ ಜವಾಬ್ದಾರಿ ನೀಡಲಾಗುವುದು. ತೋಟಗಾರಿಕಾ ಇಲಾಖೆಯಿಂದ ಬೋಗಯ್ಯನ ಕೆರೆ ಬಳಿ ಉದ್ಯಾನವನ, ಗ್ರಂಥಾಲಯ ನಿರ್ಮಿಸಲಾಗುವುದು. ಪ್ರತಿ ಕುಟುಂಬದ ಬಗ್ಗೆ ಗಮನಹರಿಸಲು ಸ್ವಯಂಸೇವಕರ ತಂಡವನ್ನು ರಚಿಸಲಾಗುವುದು. ಮುಂದಿನ ಹಂತದಲ್ಲಿ ಗೋ ಸಾಕಣೆ ಹಾಗೂ ಗೋ ಆಧಾರಿತ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವ ಯೋಜನೆ ಇದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಉಪ ಸಭಾಪತಿ ಯೋಗೀಶ್ ಭಟ್,ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ನಿಕ್, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಉಪ ಮೇಯರ್ ಸುಮಿತ್ರಾ ಕೆ., ಮನಪಾ ವಿಪಕ್ಷ ನಾಯಕಿ ರೂಪಾ ಡಿ.ಬಂಗೇರಾ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ., ಬಿಜೆಪಿ ಮುಖಂಡರಾದ ವೇದವ್ಯಾಸ ಕಾಮತ್, ಪ್ರೇಮನಾಥ್, ಸುಧೀರ್, ರಾಜೇಶ್, ನಿತಿನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.







