ಕೊಡಗು: ಅಲ್ಪಸಂಖ್ಯಾತರ ಅಭಿವೃದ್ಧಿಗೆ ಜಿಲ್ಲಾ ಮುಸ್ಲಿಮ್ ಐಕ್ಯ ವೇದಿಕೆ ರಚನೆ

ಸಿದ್ದಾಪುರ:ಸೆ 28 ಜಿಲ್ಲೆಯಲ್ಲಿ ಮುಸಲ್ಮಾನರು ಅನುಭವಿಸುತ್ತಿರುವ ದೌರ್ಜನ್ಯದ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಲು ಕೊಡಗು ಜಿಲ್ಲಾ ಮುಸ್ಲಿಮ್ ಐಕ್ಯ ವೇದಿಕೆ ರಚಿಸಲಾಯಿತು.
ಸುಂಟಿಕೊಪ್ಪಖದೀಜ ಉಮ್ಮ ಸಭಾಂಗಣದಲ್ಲಿ ಕೆ.ಎಂ ಇಬ್ರಾಹೀಂ ಮಾಸ್ಟರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳಲ್ಲಿನ ಮುಸ್ಲಿಮ್ ಮುಖಂಡರು, ರಾಜಕೀಯ ರಹಿತ ಸಂಘಟನೆಗಳ ನೇತಾರರು ಮತ್ತು ಧಾರ್ಮಿಕ ಮುಖಂಡರು ಒಗ್ಗಟ್ಟಿನ ಮೂಲಕ ಒಂದಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು ಜಿಲ್ಲೆಯಿಂದ 400ಕ್ಕೂ ಹೆಚ್ಚು ಮಂದಿ ಸಭೆಯಲ್ಲಿ ಪಾಲ್ಗೊಂಡು ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿದರು
ಸರಕಾರ ಕೊಡಲೇ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸ್ವಂದಿಸದಿದ್ದಲ್ಲಿ ಬೃಹತ್ ಸಮಾವೇಶ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯ ಹಕ್ಕೊತ್ತಾಯ ನಿರ್ಣಯ: ಕಳೆದ ಒಂದು ವರ್ಷದಲ್ಲಿ ಮುಸ್ಲಿಮರ ಮೇಲೆ ಜಿಲ್ಲೆಯಲ್ಲಿ ನಡೆದ ಹಲ್ಲೆ, ದೌರ್ಜನ್ಯಗಳು ಮತ್ತು ಈ ವಿಚಾರವಾಗಿ ಜಿಲ್ಲಾಡಳಿತ ಮತ್ತು ಪೊಲೀಸರು ತೆಗೆದುಕೊಂಡ ಕಾನೂನು ಕ್ರಮಗಳ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಸರಕಾರ ಆದೇಶಿಸಬೇಕು. ಅಲ್ಪ ಸಂಖ್ಯಾತರ ಸಮಸ್ಯೆಗಳ ಪರಿಹಾರಕ್ಕಾಗಿ ಮೂರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಬೇಕು. ಅಲ್ಪಸಂಖ್ಯಾತರು ಅಧಿಕ ಇರುವ ಹೋಬಳಿಗಳಲ್ಲಿ ಅಲ್ಪ ಸಂಖ್ಯಾತರ ವಸತಿ ಶಾಲೆ ಮತ್ತು ಕಾಲೇಜು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು. ಎಸ್ಸ್ಪಿ, ಟಿಸಿಪಿ ಮಾದರಿಯಲ್ಲಿ ಮುಸ್ಲಿಮರು ವಾಸಿಸುವ ಪ್ರದೇಶದಲ್ಲಿ ವಿಶೇಷ ಅನುದಾನ ಮೀಸಲಿಡಬೇಕು. ರಾಜ್ಯದಲ್ಲಿ ಎರಡನೆ ಅತೀ ದೊಡ್ಡ ಜನ ಸಂಖ್ಯೆ ಹೊಂದಿರುವ ಮುಸ್ಲಿಮರನ್ನೊಳಗೊಂಡ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಪ್ರಸಕ್ತ ರೂ. 1 ಸಾವಿರ ಕೋಟಿ ರೂ.ವನ್ನು ಮುಂದಿನ ಬಜೆಟ್ನಲ್ಲಿ 10 ಸಾವಿರ ಕೋಟಿ ರೂ.ಗೆ ಏರಿಸಬೇಕು. ಜಿಲ್ಲೆಯಲ್ಲಿ ಕಳೆದ ಒಂದು ವರ್ಷಗಳ ಹಿಂದೆ ಅಮಾಯಕ ಮುಸ್ಲಿಮರ ಮೇಲೆ ದಾಖಲಾದ ಪ್ರಕರಣಗಳನ್ನ್ನು ಹಿಂಪಡೆಯಬೇಕು. ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ರಂಗನಾಥ್ ಮಿಶ್ರಾ ಆಯೋಗ ರೂಪಿಸಿದ ಅಲ್ಪಸಂಖ್ಯಾತರ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿಯನ್ನು ಸಿದ್ದರಾಮಯ್ಯ ಸರಕಾರ ಜಾರಿ ಮಾಡಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಮೂರು ತಾಲೂಕುಗಳಿಂದ ಒಟ್ಟು 45 ಜನರ ಸಮಿತಿ ರಚಿಸಲಾಯಿತು.
ಸಭೆಯಲ್ಲಿ ಉಸ್ಮಾನ್ ಹಾಜಿ, ಅಬ್ದುಲ್ ಮಜೀದ್ ಕೊಡ್ಲಿಪೇಟೆ, ವಕೀಲರಾದ ಅಬೂಬಕರ್, ಅಮೀನ್ ಮೊಹ್ಸಿನ್, ಕುಂಞಿ ಅಬ್ದುಲ್ಲಾ, ಪ್ರಮುಖರಾದ ಕಾಸಿಂ ನಾಪೋಕ್ಲು, ನಿಸಾರ್ ಮಕ್ಕಿ, ಆರ್.ಕೆ ಸಲಾಂ, ಎ.ಕೆ ಹಕೀಂ, ಯಾಕೂಬ್ ,ಕೆ ಆದಮ್, ಎ ಬಿ ಉಮರ್ , ಬಶೀರ್ ಹಾಜಿ, ಸೇರಿದಂತೆ ಮಾಜಿ ಹಾಗೂ ಹಾಲಿ ಜಿಲ್ಲಾ ,ತಾಲೂಕು ಮತ್ತು ಗ್ರಾಮ ಪಂಚಾಯತ್ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.







