ಕೆಲಸ ಮಾಡಲಾಗದ ಅಧಿಕಾರಿಗಳು ನಮಗೆ ಬೇಡವೆಂದ ಮೇಯರ್!
ಮಂಗಳೂರಿನ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳ ನಿರ್ಲಕ್ಷಕ್ಕೆ ತೀವ್ರ ಆಕ್ಷೇಪ

ಮಂಗಳೂರು, ಸೆ.29: ಮಳೆಗಾಲದಲ್ಲೂ ನಗರದ ಹಲವು ವಾರ್ಡ್ಗಳಲ್ಲಿ ಕಾಡುತ್ತಿರುವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆಂಬ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರನೇಕರ ಆಕ್ಷೇಪಕ್ಕೆ ಮೇಯರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಅಧಿಕಾರಿಗಳನ್ನು ಎಚ್ಚರಿಸಿದ ಪ್ರಸಂಗ ಸಾಮಾನ್ಯ ಸಭೆಯಲ್ಲಿಂದು ನಡೆಯಿತು.
ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಪಕ್ಷ ಸದಸ್ಯ ದಿವಾಕರ್ ನೀರಿನ ಸಮಸ್ಯೆ ಬಗ್ಗೆ ವಿಷಯ ಪ್ರಸ್ತಾಪಿಸಿದರು. 24x7 ನೀರು ಕೊಡುವ ಭರವಸೆ ನೀಡಿದ ಮಂಗಳೂರಿನ ದಂಬೇಲ್ ವಾರ್ಡ್ನಲ್ಲಿ 2 ದಿನಗಳಿಗೊಮ್ಮೆಯೂ ನೀರು ಬರುತ್ತಿಲ್ಲ ಎಂದು ಆಕ್ಷೇಪಿಸಿದರು.
ಸುರತ್ಕಲ್ ವಾರ್ಡ್ನಲ್ಲಿಯೂ ನೀರಿನ ಸಮಸ್ಯೆ ಬಗ್ಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸದಸ್ಯ ಅಯಾಝ್ ಆಕ್ಷೇಪಿಸಿದರು. ವೆಲೆನ್ಶಿಯಾ ಸೇರಿದಂತೆ ನಗರದ ಹಲವು ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಕಾಡುತ್ತಿರುವುದಾಗಿ ಸಭೆಯಲ್ಲಿ ಸದಸ್ಯರನೇಕರು ಅಸಮಾಧಾನ ವ್ಯಕ್ತಪಡಿಸಿದರು.
ಸದಸ್ಯ ವಿನಯ್ರಾಜ್ ಮಾತನಾಡಿ, ಪ್ರಸಕ್ತ ಸಾಲಿನ ಬಜೆಟ್ನಲ್ಲಿ ನೀರಿನ ಶುಲ್ಕದಿಂದ ಶೇ. 45 ಕೋಟಿರೂ. ಆದಾಯ ಸಂಗ್ರಹ ಹಾಗೂ ಹೊಸ ಸಂಪರ್ಕಗಳಿಂದ 75 ಲಕ್ಷ ರೂ.ಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಆದರೆ ಈವರೆಗೆ ನೀರಿನ ಶುಲ್ಕ ಶೇ. 18ರಷ್ಟು ಮಾತ್ರವೇ ಸಂಗ್ರಹವಾಗಿದೆ ಎಂದು ಆಕ್ಷೇಪಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್, ನಗರದಲ್ಲಿ ನೀರಿನ ಶುಲ್ಕ ಶೇ. 18ರಷ್ಟು ಮಾತ್ರವೇ ಸಂಗ್ರಹವಾಗಿರುವುದು ವಿಷಾದನೀಯ ಎಂದು ಹೇಳುತ್ತಾ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೈದರು. ನೀರಿನ ಶುಲ್ಕ ಸಂಗ್ರಹಿಸುತ್ತಿಲ್ಲ, ನೀರೂ ಬರುತ್ತಿಲ್ಲ. ಕಿಂಡಿಅಣೆಕಟ್ಟಿನ ಸಮಸ್ಯೆ ಪರಿಹರಿಸಲಾಗುತ್ತಿಲ್ಲ. 300 ಜನ ವಾಲ್ ಅಪರೇಟರ್ಗಳಿದ್ದು, ಅವರಿಗೆ ವೇತನ ನೀಡಲಾಗುತ್ತಿದೆ. ಹಾಗಿದ್ದರೂ, ಕುಡಿಯುವ ನೀರಿಗೆ ಸಂಬಂಧಿಸಿ ಸದಸ್ಯರಿಂದ ಹಲವಾರು ದೂರುಗಳಿದ್ದರೂ ಅವುಗಳನ್ನು ಸರಿಪಡಿಸದೆ ಕಚೇರಿಯಲ್ಲಿ ಕುಳಿತಿರುತ್ತೀರಾ. ನೀರು ಕೊಡಲು ಆಗದ ಇಂಜಿನಿಯರ್ ನಮಗೆ ಬೇಕಿಲ್ಲ ಎಂದು ಎಚ್ಚರಿಕೆ ನೀಡಿದರು.
ಒಂದು ತಿಂಗಳೊಳಗೆ ನೀರಿನ ಶುಲ್ಕ ವಸೂಲಾತಿಗೆ ಕ್ರಮ
ಆಯುಕ್ತ ಮುಹಮ್ಮದ್ ನಝೀರ್ ಈ ಬಗ್ಗೆ ಪ್ರತಿಕ್ರಿಯಿಸಿ, ಇಂಜಿನಿಯರ್ಗಳು ಜೂನಿಯರ್ ಇಂಜಿನಿಯರ್ಗಳನ್ನು ಸೇರಿಸಿ ಒಂದು ತಿಂಗಳೊಳಗೆ ನೀರಿನ ಶುಲ್ಕ ವಸೂಲು ಮಾಡಲು ಸೂಚಿಸಲಾಗಿದೆ. ನೀರಿನ ಸಂಪರ್ಕಕ್ಕೆ ಡಿಜಿಟಲ್ ಮೀಟರ್ ಅಳವಡಿಸುವ ಬಗ್ಗೆ ನಗರ ಯೋಜನೆ ಸ್ಥಾಯಿ ಸಮಿತಿಯಡಿ ಚರ್ಚಿಸಿ ಪ್ರಾಯೋಗಿಕವಾಗಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಗೊಂದಲ!
ಮಂಗಳೂರು ನಗರ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಕುರಿತಂತೆ 20 ವರ್ಷಗಳಲ್ಲಿ 40,000 ಕೋಟಿ ರೂ.ಗಳ ಹೂಡಿಕೆ ಎಂಬ ಹೇಳಿಕೆಯ ಮೂಲಕ ಗೊಂದಲ ಸೃಷ್ಟಿಸಲಾಗಿದೆ. 1996ರಿಂದ ಮಂಗಳೂರು ಮಹಾನಗರ ಪಾಲಿಕೆ ಆರಂಭವಾದಾಗಿನಿಂದ ಮಹಾನಗರ ಪಾಲಿಕೆ ಐದು ಬಾರಿ ರಾಜ್ಯದ ಅತ್ಯುತ್ತಮ ನಗರವಾಗಿ ಪ್ರಶಸ್ತಿ ಪಡೆದಿದೆ. ಆದರೆ ಸ್ಮಾರ್ಟ್ ಸಿಟಿ ಆಯ್ಕೆಯ ಪ್ರಥಮ ಹಂತದಲ್ಲಿ ಮಂಗಳೂರು ನಗರ ಕೈತಪ್ಪಿ ಹೋಗಿತ್ತು. ಇದೀಗ ಸ್ಥಳೀಯ ಸಂಸದರ ಒತ್ತಡದ ಮೇರೆಗೆ ಸ್ಮಾಟ್ ಸಿಟಿಗೆ ಆಯ್ಕೆಯಾಗಿದ್ದೇವೆ ಎಂಬ ಮಾತುಗಳು ಕೇಳಿ ಬರುತ್ತವೆ ಎಂದು ಮಾಜಿ ಮೇಯರ್ ಮಹಾಬಲ ಮಾರ್ಲ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.
ಇದನ್ನು ವಿಪಕ್ಷದ ಸದಸ್ಯರು ಆಕ್ಷೇಪಿಸಿದಾಗ ಕೆಲ ನಿಮಿಷ ಸಭೆಯಲ್ಲಿ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.
ಬಳಿಕ ವಿಧಾನ ಪರಿಷತ್ನ ಮುಖ್ಯ ಸಚೇತಕ ಐವನ್ ಡಿಸೋಜ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರದ ಸಮಪಾಲಿನ ಅನುದಾನದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ರೂಪುಗೊಳ್ಳಲಿದೆ. ಈ ಯೋಜನೆಯಲ್ಲಿ ಎಲ್ಲಾ ಜನಪ್ರತಿನಿಧಿಗಳು ಅಭಿವೃದ್ದಿ ಪರವಾಗಿ ಕೆಲಸ ಮಾಡಬೇಕಿದೆ ಎಂದರು.
ಸ್ಮಾರ್ಟ್ ಸಿಟಿಯಾಗುತ್ತಿರುವ ನಗರದಲ್ಲಿ ಟ್ರಾಫಿಕ್ ಸಮಸ್ಯೆಯನ್ನು ವ್ಯವಸ್ಥಿತವಾಗಿ ಬಗೆಹರಿಸಬೇಕು ಎಂದು ಐವನ್ ಸಲಹೆ ನೀಡಿದರು.
ಅಕ್ಟೋಬರ್ 15ರಂದು ಟ್ರಾಫಿಕ್ ಸಮಸ್ಯೆ ಬಗ್ಗೆ ವಿಶೇಷ ಸಭೆ
ನಗರದಲ್ಲಿ ಟ್ರಾಫಿಕ್ ಸಮಸ್ಯೆ ಕುರಿತಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ಅಕ್ಟೋಬರ್ 15ರಂದು ನಿಗದಿಪಡಿಸಲಾಗಿದೆ ಎಂದು ಮೇಯರ್ ಹರಿನಾಥ್ ಈ ಸಂದರ್ಭ ತಿಳಿಸಿದರು.
ಸಭೆಯಲ್ಲಿ ಉಪ ಮೇಯರ್ ಸುಮಿತ್ರಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕವಿತಾ ಸನಿಲ್, ಅಪ್ಪಿಲತಾ, ಲ್ಯಾನ್ಸಿಲೋಟ್ ಪಿಂಟೋ, ಬಶೀರ್ ಅಹ್ಮದ್ ಉಪಸ್ಥಿತರಿದ್ದರು.







