ಶಿಕ್ಷಕರ ಕಾರ್ಯ ಪರಮೋಚ್ಚ ತಪಸ್ಸು: ಚಟ್ನಳ್ಳಿ ಮಹೇಶ್
ವಿಶೇಷ ಉಪನ್ಯಾಸ

ಚಿಕ್ಕಮಗಳೂರು, ಸೆ.29: ಶಿಕ್ಷಕರ ಕಾರ್ಯ ಪರಮೋಚ್ಚ ತಪಸ್ಸು. ಅನೀತಿಯ ಕಳೆಕಿತ್ತು, ಪ್ರೀತಿ, ಕಾರುಣ್ಯ, ವಿನಯ, ವಿಧೇಯತೆ, ನೈತಿಕ ವೌಲ್ಯಗಳನ್ನು ಭಿತ್ತಿ, ಸದ್ಭಾವನೆ ಬೆಳೆಸುವುದೇ ಗುರುವಿನ ಕಾರ್ಯ ಎಂದು ಸಾಹಿತಿ ಚಟ್ನಳ್ಳಿಮಹೇಶ್ ವಿಶ್ಲೇಷಿಸಿದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ನಗರದ ಮೊರಾರ್ಜಿ ದೇಸಾಯಿ ವಸತಿ ಪಿಯು ವಿಜ್ಞಾನ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಶಿಕ್ಷಣದ ಪ್ರಸ್ತುತತೆ ಕುರಿತಂತೆ ವಿಶೇಷ ಉಪನ್ಯಾಸ ನೀಡಿ ಅವರು ಸಂವಾದಿಸಿದರು. ಶಿಕ್ಷಣದಿಂದ ಬುದ್ಧಿ, ಭಾವಗಳು ಅರಳಿ ಸಮನ್ವಯಗೊಳ್ಳಬೇಕು. ಶಿಕ್ಷಣ ಅರಳಿಸಬೇಕೆ ಹೊರತು ಕೆರಳಿಸುವಂತಾಗಬಾರದು. ಲೋಕವೆಂಬ ವಿಶ್ವವಿದ್ಯಾಲಯದಲ್ಲಿ ಜೀವನವೇ ಪಾಠಶಾಲೆಯಾದರೆ ಗಟ್ಟಿಯಾಗಿ ಬೆಳೆಯಬಹುದೆಂದ ಮಹೇಶ್, ಸುತ್ತಲಿನ ಸಮಕಾಲೀನ ಸಮಸ್ಯೆಗಳು ನಮ್ಮನ್ನು ಕಾಡಿದಾಗ ಮಾತ್ರ ನಾಯಕರಾಗಿ ರೂಪುಗೊಳ್ಳಬಹುದು. ಸಮಾಜದ ಘನತೆಯನ್ನು ಎತ್ತರಿಸುವಂತೆ ಶಿಕ್ಷಕರು ಯುವ ಪೀಳಿಗೆಯನ್ನು ರೂಪಿಸಬೇಕು ಎಂದರು.
ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕವಿತಾ ಲಿಂಗರಾಜ್ ಸಮಾರಂಭವನ್ನು ಉದ್ಘಾಟಿಸಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿ, ‘ಗುರುವಿನ ಗುಲಾಮನಾಗುವವರೆಗೆ ಸಿಗದಯ್ಯ ಮುಕ್ತಿ’ ಎನ್ನುವಂತೆ ಗುರುವಿನ ಮಾರ್ಗದರ್ಶನ ಅಗತ್ಯ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು. ಗುರುಹಿರಿಯರನ್ನು, ಅನ್ನದಾತ ರೈತ, ದೇಶಕಾಯುವ ಸೈನಿಕರನ್ನು ಗೌರವಭಾವದಿಂದ ಕಾಣಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ, ಸದೃಢ, ಸಮೃದ್ಧ ಭಾರತ ನಿರ್ಮಾಣದ ಪ್ರಯತ್ನಕ್ಕೆ ಯುವಜನತೆ ಕೈಜೋಡಿಸಬೇಕೆಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ದೈಹಿಕಶಿಕ್ಷಕ ಎಸ್.ಈ.ಲೋಕೇಶ್ವರಾಚಾರ್ ಕೃತಜ್ಞತೆ ಸಲ್ಲಿಸಿ ಮಾತನಾಡಿ, ಹಲವರ ಸಹಕಾರ ಮತ್ತು ಸಹಾಯದಿಂದ ಚಿಕ್ಕ ಸಾಧನೆ ಮಾಡಲು ಸಾಧ್ಯವಾಗಿದೆ. ಪ್ರಶಸ್ತಿ ಹಾಗೂ ಗೌರವಗಳು ಜವಾಬ್ದಾರಿಯನ್ನು ಹೆಚ್ಚಿಸಿದೆ. ಉಳಿದಿರುವ ನಾಲ್ಕೈದು ವರ್ಷಗಳ ಸೇವಾವಧಿಯಲ್ಲಿ ಮತ್ತಷ್ಟು ಒಳ್ಳೆಯ ಕೆಲಸಮಾಡುವ ಆಶಯವಿದೆ ಎಂದು ಹೇಳಿದರು.
ಪ್ರಾಂಶುಪಾಲ ಕೆ.ಎಸ್.ಶಿವಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಧ್ಯಮಸಂಸ್ಕೃತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಪ್ರಾಸ್ತಾವಿಸಿದರು. ಯಶಸ್ವಿನಿ ಪ್ರಾರ್ಥಿಸಿದರು. ಉಪನ್ಯಾಸಕರಾದ ವಿಜಯ ಮತ್ತು ಪ್ರದೀಪ ಸಂವಾದ ನಡೆಸಿಕೊಟ್ಟರು. ಉಪನ್ಯಾಸಕರಾದ ಎಸ್.ಡಿ.ಸುಜಾತಾ ಸ್ವಾಗತಿಸಿ, ಎಂ.ಎನ್.ಭಾಸ್ಕರ್ ನಿರೂಪಿಸಿ, ಮಾ.ಸಂ.ಪ್ರ. ಕಾರ್ಯದರ್ಶಿ ಸುಮಿತ್ರಾ ಶಾಸ್ತ್ರಿ ವಂದಿಸಿದರು.







