ಸರಕಾರಿ ಜಮೀನನ್ನು ಡಿಸಿ ಮನ್ನಾ ಜಮೀನನ್ನಾಗಿ ಪರಿವರ್ತಿಸಲು ಕ್ರಮ: ಎಸಿ

ಬಂಟ್ವಾಳ, ಸೆ.29: ತಾಲೂಕಿನಲ್ಲಿ ಡಿಸಿ ಮನ್ನಾ ಜಮೀನನ್ನು ಅತಿಕ್ರಮಣಗೊಳಿಸಿರುವುದಕ್ಕೆ ಪರ್ಯಾಯವಾಗಿ ಸರಕಾರಿ ಜಮೀನನ್ನು ಗುರುತಿಸಿ ಡಿಸಿ ಮನ್ನಾ ಜಮೀನನ್ನಾಗಿ ಪರಿವರ್ತಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮಂಗಳೂರು ಸಹಾಯಕ ಕಮಿಷನರ್ ಡಾ.ಅಶೋಕ್ ಭರವಸೆ ನೀಡಿದ್ದಾರೆ.
ಗುರುವಾರ ತಾಲೂಕು ಪಂಚಾಯತ್ನ ಸಾಮರ್ಥ್ಯ ಸಭಾಭವನದಲ್ಲಿ ನಡೆದ ಪರಿಶಿಷ್ಟ ಜಾತಿ, ಪಂಗಡದ ಉಪಯೋಜನೆಯ ಎಲ್ಲಾ ಅಭಿವೃದ್ಧಿ ಇಲಾಖೆಗಳ ಉಪವಿಭಾಗ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಿಸಿ ಮನ್ನಾ ಜಮೀನನ್ನು ಅತಿಕ್ರಮಿಸಿರುವುದು ನಮ್ಮ ಗಮನಕ್ಕೂ ಬಂದಿದೆ. ಆದರೆ ಈಗ ಅತಿಕ್ರಮಣಕಾರರನ್ನು ತೆರವುಗೊಳಿಸುವ ಸಾಧ್ಯತೆ ಇಲ್ಲದಿದ್ದು ಇದಕ್ಕೆ ಪರ್ಯಾಯವಾಗಿ ಸರಕಾರಿ ಜಮೀನನ್ನು ಗುರುತಿಸಿ ಡಿಸಿ ಮನ್ನಾ ಜಮೀನನ್ನಾಗಿ ಪರಿವರ್ತಿಸಲು ಕ್ರಮಕೈಗೊಳ್ಳುವ ಮೂಲಕ ಸಮಸ್ಯೆನ್ನು ಪರಿಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಈ ನಿಟ್ಟಿನಲ್ಲಿ ಮುಂದಡಿ ಇಡುವಂತೆ ತಹಶೀಲ್ದಾರ್ರಿಗೆ ಸಹಾಯಕ ಕಮಿಷನರ್ ನಿರ್ದೇಶಿಸಿದರು.
ದಲಿತ ಮುಖಂಡ ಜನಾರ್ದನ ಚೆಂಡ್ತಿಮಾರ್ರವರು ದಲಿತರಿಗೆ ಮೀಸಲಿಟ್ಟಿರುವ ಡಿಸಿ ಮನ್ನಾ ಜಮೀನನ್ನು ಜಿಲ್ಲೆಯಲ್ಲೇ ಅತೀ ಹೆಚ್ಚಾಗಿ ಬಂಟ್ವಾಳ ತಾಲೂಕಿನಲ್ಲಿ ಅತಿಕ್ರಮಿಸಲಾಗಿದೆ. ಡಿ.ಸಿ. ಮನ್ನಾ ಜಮೀನಿನಲ್ಲಿ ಶಾಲೆ, ಪಂಚಾಯತ್ ಕಟ್ಟಡ, ಸಬ್ಸ್ಟೇಷನ್, ಅಂಗನವಾಡಿ, ಪಶುಸಂಗೋಪನೆ ಸೇರಿದಂತೆ ಸರಕಾರಿ ಕಚೇರಿಗಳು ನಿರ್ಮಾಣಗೊಂಡಿವೆ. ಚೆನ್ನೈತ್ತೋಡಿ ಗ್ರಾಮ ಪಂಚಾಯತ್ನ ಹಿಂಭಾಗದಲ್ಲೇ ಸುಮಾರು 10ರಿಂದ 15 ಎಕ್ರೆ ಜಮೀನಿನಲ್ಲಿ ಮನೆ ನಿರ್ಮಿಸಲಾಗಿದೆ. ಇವರಿಗೆ ಯಾವ ಮಾನದಂಡದಲ್ಲಿ ಹಕ್ಕುಪತ್ರವನ್ನು ನೀಡಲಾಗಿದೆ. ಗ್ರಾಮ ಕರಣಿಕ, ಕಂದಾಯ ನಿರೀಕ್ಷಕ ಸೇರಿದಂತೆ ತಹಶೀಲ್ದಾರವರೆಗೂ ಈ ವಿಚಾರ ಗೊತ್ತಿದ್ದರೂ ಅವರು ವೌನವಾಗಿದ್ದಾರೆ. ವಿಶೇಷವೆಂದರೆ ಚೆನ್ನೈತ್ತೋಡಿ ಗ್ರಾ.ಪಂ. ಕಚೇರಿಯೇ ಡಿಸಿ ಮನ್ನಾ ಜಮೀನಿನಲ್ಲಿದೆ. ಇವರನ್ನೆಲ್ಲಾ ತೆರವುಗೊಳಿಸಲು ಸಾಧ್ಯವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕಮೀಶನರ್ ಅಶೋಕ್, ಇಂತಹ ಪ್ರಕರಣ ನಮ್ಮ ಗಮನಕ್ಕೂ ಬಂದಿದೆ. ಆದರೆ ಈಗ ಅವುಗಳನ್ನು ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ. ಈಗ ಉಳಿದಿರುವಂತಹ ಡಿಸಿ ಮನ್ನಾ ಜಮೀನನ್ನಾದರೂ ಉಳಿಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.
ಬೆಂಜನಪದವು ಬಸ್ಸು ತಂಗುದಾಣದ ಬಳಿ ಇರುವ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮದ್ಯಮಾರಾಟ ಮಾಡಲಾಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಜನಾರ್ದನ ಚೆಂಡ್ತಿಮಾರ್ ಸಭೆಯ ಗಮನ ಸೆಳೆದರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅಬಕಾರಿ ಇಲಾಖಾಧಿಕಾರಿ ಈಗಾಗಲೇ ಈ ಅಂಗಡಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಹಾಗೂ ರಾಷ್ಟ್ರೀಯ ಹೆದ್ದಾರಿ, ಶಾಲಾ ಕಾಲೇಜುಗಳ 100 ಮೀಟರ್ ದೂರದಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆಯನ್ನು ನಡೆಸಿದ್ದಾರೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಸರಕಾರದಿಂದ ಮಂಜೂರಾಗುವ ಎಲ್ಲಾ ಯೋಜನೆಗಳ ಬಗ್ಗೆ ಗ್ರಾ.ಪಂ. ಮಟ್ಟದಲ್ಲಿ ಜಾಗೃತಿ ಮೂಡಿಸುವಂತೆ ಎಸಿ ಅಶೋಕ್ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಉಪವಿಭಾಗಮಟ್ಟದ ಎಲ್ಲಾ ಅಧಿಕಾರಿಗಳು ಹಾಜರಿದ್ದು ಪರಿಶಿಷ್ಟ ಜಾತಿ, ಪಂಗಡದ ಸಮುದಾಯಕ್ಕೆ ಮಂಜೂರಾಗಿರುವ ಸವಲತ್ತುಗಳ ವಿತರಣೆ ಹಾಗೂ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು.
ತಹಶೀಲ್ದಾರ್ ಪುರಂದರ ಹೆಗ್ಡೆ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮೋಹನ್ ವೇದಿಕೆಯಲ್ಲಿದ್ದರು.







