ಪಾಕ್ ನ ದಾಳಿ ಸಾಧ್ಯತೆ ;ಭಾರತದ ಗಡಿಯಲ್ಲಿ ಕಟ್ಟೆಚ್ಚರ, ಆಂತರಿಕ ಭದ್ರತೆಯ ಬಗ್ಗೆ ಸಭೆ

ಹೊಸದಿಲ್ಲಿ, ಸೆ.30:ಭಾರತದ ಯೋಧರು ಗಡಿ ನಿಯಂತ್ರಣಾ ರೇಖೆಯನ್ನು ದಾಟಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರತಿ ದಾಳಿ ನಡೆಸುವ ಸಾಧ್ಯತೆ ಇದ್ದು, ಭಾರತದ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆಂತರಿಕ ಭದ್ರತೆಯ ಬಗ್ಗೆ ಇಂದು ಸಭೆ ಕರೆಯಲಾಗಿದೆ.
ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸೇನೆಯ ಉನ್ನತಾಧಿಕಾರಿಗಳು ಭಾಗವಹಿಸಲಿದ್ದಾರೆ.
ಭಾರತೀಯ ಸೇನೆ ಗುರುವಾರ ಮುಂಜಾನೆ ಗಡಿ ನಿಯಂತ್ರಣಾ ರೇಖೆ ಮೀರಿ ಪಾಕ್ ನೆಲದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕೇವಲ 4 ಗಂಟೆಗಳ ಅವಧಿಯಲ್ಲಿ 38 ಉಗ್ರರು ಹಾಗೂ ಅವರ ರಕ್ಷಣೆಗೆ ಬಂದ 6 ಮಂದಿ ಪಾಕಿಸ್ತಾನಿ ಸೈನಿಕರು ಸೇರಿದಂತೆ 44 ಮಂದಿಯನ್ನು ಹೊಡೆದುರುಳಿಸಿದ್ದರು.
18ರಂದು ಉರಿ ಸೆಕ್ಟರ್ ನಲ್ಲಿ ನಡೆದ ಭೀಕರ ಉಗ್ರರ ದಾಳಿಯಲ್ಲಿ 18 ಮಂದಿ ಭಾರತೀಯ ಯೋಧರು ಹುತಾತ್ಮರಾದಾಗಿದ್ದರು. ಇದಕ್ಕೆ ಪ್ರತಿಕಾರವಾಗಿ ಭಾರತ ಸೀಮಿತ ದಾಳಿ ನಡೆಸಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಭಾರತೀಯ ಸೇನೆಯ ಅನಿರೀಕ್ಷಿತ ದಾಳಿಯ ಹಿನ್ನೆಲೆಯಲ್ಲಿ ಪಾಕ್ಗೆ ಆಘಾತ ಉಂಟಾಗಿದೆ. ಪಾಕಿಸ್ತಾನ ಇದನ್ನು ಬಹಿರಂಗಪಡಿಸದಿದ್ದರೂ,ಪ್ರಧಾನ ಮಂತ್ರಿ ನವಾಝ್ ಶರೀಫ್ ಇಂದು ಸಭೆ ಕರೆದಿದ್ದಾರೆ ಎಂದು ತಿಳದು ಬಂದಿದೆ.





