ವಿಶ್ವವಿಖ್ಯಾತ ದಸರೆಗೆ ನಾಳೆ ಚಾಲನೆ

ಮೈಸೂರು, ಸೆ.30: ರಾಜ್ಯಕ್ಕೆ ಬಂದೊದಗಿರುವ ಹಲವು ಸಂಕಷ್ಟಗಳ ನಡುವೆ ದಸರಾ ಸಂಭ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಹೆಸರಿಗೆ ಸರಳ ದಸರೆ ಎಂದು ಹೇಳಲಾಗುತ್ತಿದ್ದರೂ ಸರಕಾರ 11 ಕೋಟಿ ರೂ. ವ್ಯಯಿಸಿದೆ. ಅ.1ರಂದು ಬೆಳಗ್ಗೆ 11:40ಕ್ಕೆ ಚಾಮುಂಡಿಬೆಟ್ಟದ ಮೇಲೆ ನಡೆಯುವ ಸಮಾರಂಭದಲ್ಲಿ ನಾಡದೇವಿ ಶ್ರೀ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದಸರೆಗೆ ಚಾಲನೆ ದೊರೆಯಲಿದೆ.
ಏತನ್ಮಧ್ಯೆ, ವಿಶ್ವವಿಖ್ಯಾತ ದಸರಾ ಉತ್ಸವ ಉದ್ಘಾಟನೆಗೆ ಈಗಾಗಲೇ ಖ್ಯಾತ ಸಾಹಿತಿ, ನಾಡೋಜ ಚನ್ನವೀರ ಕಣವಿ ಅವರು ಕಳೆದ ಗುರುವಾರವೇ ಸಾಂಸ್ಕೃತಿಕ ನಗರಿಗೆ ಆಗಮಿಸಿದ್ದಾರೆ. ಈ ಬಾರಿ ರಾಜ ಮಾರ್ಗಕ್ಕೆ ಮೆರಗು ನೀಡಲು ವಿಶೇಷ ದೀಪಾಲಂಕಾರಕ್ಕೆ ಆದ್ಯತೆ ನೀಡಲಾಗಿದೆ.
ಕಾವೇರಿ ಸಂಘರ್ಷದಿಂದ ಮೈಸೂರಿಗೆ ಆಗಮಿಸಬೇಕಾದ ಪ್ರವಾಸಿಗರ ಸಂಖ್ಯೆ ಈಗಾಗಲೇ ಕ್ಷೀಣಿಸಿದ್ದು, ವಿಶೇಷವಾಗಿ ತಮಿಳುನಾಡಿನಿಂದ ಯಾವುದೇ ಪ್ರವಾಸಿ ವಾಹನ ಮೈಸೂರಿಗೆ ಆಗಮಿಸುತ್ತಿಲ್ಲ. ಈಗಾಗಲೇ ಭರ್ತಿಯಾಗಬೇಕಿದ್ದ ಹೊಟೇಲ್ ರೂಮ್ಗಳು ಖಾಲಿ ಹೊಡೆಯುತ್ತಿವೆ. ಪ್ಯಾಕೇಜ್ ಟೂರ್ಗಳನ್ನು ದೇಶ-ವಿದೇಶಿ ಪ್ರವಾಸಿಗರು ರದ್ದುಪಡಿಸಿದ್ದಾರೆ. ಮತ್ತೊಂದೆಡೆ ದಸರಾ ಕಾಮಗಾರಿಗಳು ಅಪೂರ್ಣಗೊಂಡಿದ್ದು, ದಸರಾ ವಸ್ತು ಪ್ರದರ್ಶನದಲಿ್ಲ ಮಳಿಗೆಗಳು ಖಾಲಿ ಹೊಡೆಯುತ್ತಿದೆ.
ದಸರಾ ಉದ್ಘಾಟನಾ ವೇದಿಕೆ: ನಾಡಹಬ್ಬ ದಸರಾ ಉದ್ಘಾಟನೆಗೆ ಚಾಮುಂಡಿಬೆಟ್ಟದ ನಾಡದೇವಿಯ ಸನ್ನಿಧಿಯಲ್ಲಿ ವಿಶೇಷ ವೇದಿಕೆ ಸಜ್ಜಾಗಿದೆ. ವೇದಿಕೆಯ ಎಡ ಭಾಗದ ಬೆಳ್ಳಿ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಧಾರ್ಮಿಕ ಕೈಂಕರ್ಯಗಳನ್ನು ದೇವಸ್ಥಾನದ ಮುಖ್ಯ ಅರ್ಚಕ ಶಶಿಶೇಖರ ದಿಕ್ಷೀತ್ ನೇತೃತ್ವದಲ್ಲಿ ಕೈಗೊಳ್ಳಲಾಗಿದೆ.
ಅ.1ರಂದು ಬೆಳಗ್ಗೆ 11:40ಕ್ಕೆ ಕವಿ, ನಾಡೋಜ ಚನ್ನವೀರ ಕಣವಿ ನಾಡಹಬ್ಬವನ್ನು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಮೇಯರ್ ಬಿ.ಎಲ್.ಬೈರಪ್ಪ, ಜಿಪಂ ಅಧ್ಯಕ್ಷ ನಯೀಮಾ ಸುಲ್ತಾನ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಭಾಗವಹಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ ವಹಿಸಲಿದ್ದಾರೆ.
ಈಗಾಗಲೇ ಮಹಿಷಾಸುರನ ಪ್ರತಿಮೆಯಿಂದ ಕಾರ್ಯಕ್ರಮಗಳು ನಡೆಯುವ ವೇದಿಕೆಯವರೆಗೆ ಹಸಿರು ತೋರಣ, ರಂಗೋಲಿ ಚಿತ್ತಾರಗಳನ್ನು ಬಿಡಿಸಲಾಗಿದ್ದು, ದೇವಸ್ಥಾನವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿದೆ.
ಎಲ್ಲಿ, ಯಾವ ಕಾರ್ಯಕ್ರಮ ಉದ್ಘಾಟನೆ ? ದಸರೆಯ ಮೊದಲ ದಿನ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರಕಲಿದೆ. ಅಂದು ಸಂಜೆ ಅರಮನೆಯ ಆವರಣದಲ್ಲಿ ಸಜ್ಜಾಗಿರುವ ಸುಂದರ ವೇದಿಕೆಯಲ್ಲಿ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು. ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ.ಸೋಮಶೇಖರ್ ಅಧ್ಯಕ್ಷತೆ ವಹಿಸುವರು. ದಸರಾ ಉದ್ಘಾಟನೆಯ ಸಂದರ್ಭದಲ್ಲಿ ಮಧ್ಯಾಹ್ನ 12:30ಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಪೊಲೀಸ್ ಸಹಾಯವಾಣಿಯನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12:40ಕ್ಕೆ ಚಾಮುಂಡೇಶ್ವರಿ ದೇವಸ್ಥಾನದ ಎದುರು ದಸರಾ ಕ್ರೀಡಾ ಜ್ಯೀತಿಯನ್ನು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಬರಮಾಡಿಕೊಳ್ಳುವರು. ಮಧ್ಯಾಹ್ನ 1 ಗಂಟೆಗೆ ಕಲಾಮಂದಿರದಲ್ಲಿ ದಸರಾ ಚಲನಚಿತ್ರೋತ್ಸವಕ್ಕೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಾಲನೆ ನೀಡುವರು.
ಮಧ್ಯಾಹ್ನ 1.15ಕ್ಕೆ ಮೈಸೂರು ತಾಲೂಕಿನ ವರುಣಾ ಕೆರೆ ಆಂಗಳದಲ್ಲಿ ಸಾಹಸ ಕ್ರೀಡೋತ್ಸವ ಆರಂಭಗೊಳ್ಳಲಿದೆ. ಜೆ.ಕೆ.ಮೈದಾನದಲ್ಲಿ ಹಿರಿಯರ ದಸರಾ, 1:30ಕ್ಕೆ ಮಹಿಳಾ ದಸರಾವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಮಾಶ್ರೀ ಉದ್ಘಾಟಿಸುವರು. ಜಿಲ್ಲಾಧಿಕಾರಿ ಕಛೇರಿ ಹಿಂಬಾಗವಿರುವ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಆಹಾರ ಮೇಳವನ್ನು ಆಹಾರ ಸಚಿವ ಯು.ಟಿ.ಖಾದರ್ ಉದ್ಘಾಟಿಸುವರು. ಮಧ್ಯಾಹ್ನ 3ಕ್ಕೆ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿ ಉದ್ಘಾಟಿಸುವರು. ಸಂಜೆ 4 ಗಂಟೆಗೆ ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಕುಪ್ಪಣ ಪಾರ್ಕ್(ನಿಶಾದ್ಬಾಗ್)ನಲ್ಲಿ ಪಲಪುಷ್ಪ ಪ್ರದರ್ಶನ ಉದ್ಘಾಟಿಸುವರು. ಸಂಜೆ 4 ಗಂಟೆಗೆ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರು ರಂಗಾಯಣದಲ್ಲಿ ರಂಗಾಯಣ ನಾಟಕೋತ್ಸವಕ್ಕೆ ಚಾಲನೆ ನೀಡುವರು.
ಸಂಜೆ 4:30ಕ್ಕೆ ಸಚಿವರಾದ ಪ್ರಿಯಾಂಕ್ ಖರ್ಗೆ, ಜಾರಕಿಹೊಳಿ ರಮೇಶ್ ಲಕ್ಷ್ಮಣರಾವ್ ಅವರು ದಸರಾ ವಸ್ತುಪ್ರದರ್ಶನ ಆವರಣದಲ್ಲಿ ವಸ್ತುಪ್ರದರ್ಶನ ಉದ್ಘಾಟಿಸುವರು. ಸಂಜೆ 6:30ಕ್ಕೆ ಸಚಿವ ಡಿ.ಕೆ. ಶಿವಕುಮಾರ್ ಅವರು ಸಯಾ್ಯಜಿರಾವ್ ರಸ್ತೆಯಲ್ಲಿ ಹಸಿರು ಮಂಟಪ ದಸರಾ ದೀಪಾಲಂಕಾರ ಉದ್ಘಾಟಿಸುವರು.







