ಸಾಹಿತಿಗಳ ಹೋರಾಟದ ಹಾದಿ ಯುವಜನಾಂಗ ಅರ್ಥ ಮಾಡಿಕೊಳ್ಳಲಿ: ಸಾಹಿತಿ ಡಾ. ನಾ.ಡಿಸೋಜಾ
ಪುಣ್ಯಸ್ಮರಣೆ
.jpg)
ಸಾಗರ, ಸೆ.30: ಡಾ.ಎಚ್.ಗಣಪತಿಯಪ್ಪ, ಅನಂತಮೂರ್ತಿ, ಲಂಕೇಶ್ರಂತಹ ಅನೇಕರನ್ನು ಕಳೆದುಕೊಂಡ ನಾವು ಒಂದರ್ಥದಲ್ಲಿ ಶೂನ್ಯದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾಹಿತಿ ಡಾ. ನಾ.ಡಿಸೋಜಾ ಹೇಳಿದರು.
ತಾಲೂಕಿನ ವಡ್ನಾಲ ಗ್ರಾಮದಲ್ಲಿ ಶುಕ್ರವಾರ ಡಾ. ಎಚ್.ಗಣಪತಿಯಪ್ಪ ಸೇವಾ ಟ್ರಸ್ಟ್ ಹಾಗೂ ಕುಟುಂಬಸ್ಥರ ಆಶ್ರಯದಲ್ಲಿ ಕಾಗೋಡು ಸತ್ಯಾಗ್ರಹ ರೂವಾರಿ ಡಾ. ಎಚ್.ಗಣಪತಿಯಪ್ಪ ಅವರ ಎರಡನೆ ಪುಣ್ಯಸ್ಮರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗಣಪತಿಯಪ್ಪಅವರು ತಮ್ಮ ವೈಚಾರಿಕ, ವೈಜ್ಞಾನಿಕ ಚಿಂತನೆಯಿಂದಾಗಿ ಅನೇಕ ಹೋರಾಟಗಳನ್ನು ಯಶಸ್ಸಿನ ಪಥದತ್ತ ಸಾಗಲು ಶ್ರಮಿಸಿದ್ದಾರೆ. ಸ್ವಾತಂತ್ರಾನಂತರ ನಡೆದ ಪ್ರಥಮ ರೈತ ಚಳವಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕಾಗೋಡು ಚಳವಳಿಯನ್ನು ಅಹಿಂಸಾ ಮಾರ್ಗದ ಮೂಲಕ ಯಶಸ್ಸಿನತ್ತ ಕೊಂಡು ಹೋದವರು. ಇಲ್ಲವಾದಲ್ಲಿ ಜಮೀನುದಾರರು ನಡೆಸಿದ ಅಂದಿನ ದೌರ್ಜನ್ಯದ ವಿರುದ್ಧ ರೈತರು ಸಿಡಿದೆದ್ದಿದ್ದರೇ, ಅನೇಕ ದುಷ್ಪರಿಣಾಮಗಳು ಸಂಭವಿಸುವ ಸಾಧ್ಯತೆ ಇತ್ತು. ಆದರೆ ಗಣಪತಿಯಪ್ಪಅದಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ ಎಂದರು. ಗಾಂಧೀಜಿ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ಅದನ್ನು ಕೊನೆ ತನಕ ಪಾಲಿಸಿದವರು ಡಾ.ಎಚ್.ಗಣಪತಿಯಪ್ಪ. ಅವರ ವ್ಯಕ್ತಿತ್ವ ಹಾಗೂ ಹೋರಾಟದ ಮಾರ್ಗ ಮಲೆನಾಡಿನ ಯುವಜನಾಂಗಕ್ಕೆ ತಿಳಿದಿಲ್ಲ. ಗೇಣಿ ಹೋರಾಟ, ಅದರಿಂದ ರೈತ ಸಮುದಾಯಕ್ಕೆ ಆಗಿರುವ ಲಾಭ, ಹೋರಾಟದ ಮಹತ್ವವನ್ನು ಯುವಜನಾಂಗಕ್ಕೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು. ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ.ರಾಘವೇಂದ್ರ ಮಾತನಾಡಿ, ಬಹಳ ಹಿಂದೆಯೇ ಗಣಪತಿಯಪ್ಪಅವರು, ಮತದಾನದ ಹಕ್ಕು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗೂ ಕನಿಷ್ಠ ಒಂದು ಎಕರೆ ಭೂಮಿ ಕೊಡಬೇಕು ಎಂಬ ಹಕ್ಕೊತ್ತಾಯವನ್ನು ಮಂಡಿಸಿದವರು. ತಮ್ಮ ನೇರ ನಿಲುವು ಹಾಗೂ ವೈಚಾರಿಕ, ವೈಜ್ಞ್ಞಾನಿಕ ಸಿದ್ಧಾಂತದ ಮೂಲಕ ಸಮಸ್ಯೆಯೊಂದಿಗೆ ಮುಖಾಮುಖಿಯಾಗುತ್ತಿದ್ದ ಅವರದು ವಿಶಿಷ್ಟ ವ್ಯಕ್ತಿತ್ವವಾಗಿತ್ತು. ಅವರ ಹೋರಾಟದ ಹಾದಿಯನ್ನು ಯುವಜನಾಂಗ ಅರ್ಥ ಮಾಡಿಕೊಳ್ಳಬೇಕು. ವೈಪರೀತ್ಯಗಳ ನಡುವೆ ಬದುಕುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಗಣಪತಿಯಪ್ಪಅವರ ವೈಚಾರಿಕ ಚಿಂತನೆ ನಮಗೆ ಮಾರ್ಗದರ್ಶನವಾಗಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಎನ್.ಟಿ.ಧರ್ಮೋಜಿರಾವ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಗಣಪತಪ್ಪ, ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಎಂ.ರಾಮಪ್ಪ, ದಲಿತ ಸಂಘರ್ಷ ಸಮಿತಿಯ ಪರಮೇಶ್ವರ ದೂಗೂರು, ಮಂಜಮ್ಮ ಗಣಪತಿಯಪ್ಪ, ಕಲಸೆ ಚಂದ್ರಪ್ಪ, ರವಿ, ದೇವರಾಜ್, ಕೃಷ್ಣ ಗಾಡಿಗ, ಪುಟ್ಟಪ್ಪ, ಕಬಸೆ ಅಶೋಕಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.







