ಅರ್ಚಕನಿಂದ ಬಾಲಕಿಯ ಅತ್ಯಾಚಾರ

ಶಿವಮೊಗ್ಗ, ಅ.1: ಪೂಜೆ ಮಾಡಿಸಲೆಂದು ಆಗಮಿಸಿದ್ದ 15 ವರ್ಷದ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ್ದ ಕಿರಾತಕ ಅರ್ಚಕನೋರ್ವನನ್ನು ಶಿವಮೊಗ್ಗ ಮಹಿಳಾ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಶನಿವಾರ ನಡೆದಿದೆ.
ಬಂಧಿತನನ್ನು ಜೈಲ್ ಸರ್ಕಲ್ ಸಮೀಪದ ಕುವೆಂಪು ರಸ್ತೆಯ ಬಳಿಯ ದುರ್ಗಾ ಚೌಡೇಶ್ವರಿ ದೇವಾಲಯದ ಅರ್ಚಕನಾಗಿರುವ ಕುಮಾರ ಯಾನೆ ತೊದ್ಲ ಕುಮಾರ (52) ಎಂದು ಗುರುತಿಸಲಾಗಿದೆ.
ಆರೋಪಿ ಕುಮಾರ ಮನೆಯ ಬಳಿಯೇ ದೇವಾಲಯವೊಂದನ್ನು ನಿರ್ಮಿಸಿಕೊಂಡು ಅಲ್ಲೇ ಅರ್ಚಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ಕೆಲ ದಿನಗಳ ಹಿಂದೆ ಆತನ ಮನೆಯಲ್ಲಿಯೇ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಆರೋಪಿಯ ವಿರುದ್ಧ ಮಹಿಳೆಗೆ ಲೈಂಗಿಕ ಕಿರುಕುಳ ಹಾಗೂ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಎರಡು ಪ್ರತ್ಯೇಕ ಪ್ರಕರಣಗಳು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆಪಾದಿತನನ್ನು ನ್ಯಾಯಾಂಗ ವಶಕ್ಕೆ ಪೊಲೀಸರು ಒಪ್ಪಿಸಿದ್ದಾರೆ. ಪೊಲೀಸ್ ಉಪ ನಿರೀಕ್ಷಕಿ ಅನಿತಾ ಕುಮಾರಿ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬೆಳಕಿಗೆ ಬಂದ ಪ್ರಕರಣ
ಇತ್ತೀಚೆಗೆ ಮಹಿಳೆಯೋರ್ವರು ಪೂಜಾರಿ ಕುಮಾರನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ದೂರೊಂದನ್ನು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡ ಪಿಎಸ್ಸೈ ಅನಿತಾ ಕುಮಾರಿ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಆಪಾದಿತನು ಬಾಲಕಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ್ದ ಮಾಹಿತಿ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಆಪಾದಿತ ನೀಡಿದ ಮಾಹಿತಿಯ ಆಧಾರದ ಮೇಲೆ ಸಂತ್ರಸ್ತ ಬಾಲಕಿಯನ್ನು ಪಿಎಸ್ಸೈ ಅನಿತಾಕುಮಾರಿಯವರು ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು. ಈ ವೇಳೆ ಅರ್ಚಕ ಕುಮಾರ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಬಾಲಕಿ ತಿಳಿಸಿದ್ದಾಳೆ. ತಾಯತ ಕಟ್ಟುವುದಾಗಿ ನಂಬಿಸಿ ಪೂಜಾರಿ ಆತನ ಮನೆಯಲ್ಲಿಯೇ ತನ್ನ ಮೇಲೆ ಅತ್ಯಾಚಾರ ಎಸಗಿದ್ದ. ಬಳಿಕ ಯಾರಿಗೂ ವಿಷಯ ತಿಳಿಸದಂತೆ ಜೀವ ಬೆದರಿಕೆ ಹಾಕಿದ್ದ. ಇದರಿಂದ ಈ ವಿಷಯ ಯಾರಿಗೂ ತಿಳಿಸಿರಲಿಲ್ಲ ಎಂದು ಬಾಲಕಿ ಪೊಲೀಸರಿಗೆ ಮಾಹಿತಿ ನೀಡದ ಕಾರಣ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ವೇಳೆ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದನ್ನು ಹೇಳಿದ್ದಾಳೆ. ತದನಂತರ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿತು. ಇದರ ಆಧಾರದ ಮೇಲೆ ಪೊಲೀಸರು ಆರೋಪಿಯ ವಿರುದ್ಧ ಅತ್ಯಾಚಾರದ ಮತ್ತೊಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಂಚನೆ
ಆಪಾದಿತ ಕುಮಾರ ಮೊದಲು ಗ್ಯಾರೇಜ್ವೊಂದನ್ನು ನಡೆಸುತ್ತಿದ್ದ. ಕಳೆದ ಹಲವು ವರ್ಷಗಳ ಹಿಂದೆ ತನ್ನ ಮೇಲೆ ಚೌಡೇಶ್ವರಿ ದೇವಿ ಬರುತ್ತಾಳೆ ಎಂದು ನಂಬಿಸಿ, ಭಕ್ತರ ಸಂಕಷ್ಟ ಪರಿಹರಿಸುತ್ತೇನೆ ಎಂದು ಹೇಳಿಕೊಂಡು ಗ್ಯಾರೇಜ್ ಕೆಲಸ ನಿಲ್ಲಿಸಿ ತನ್ನ ಮನೆಯ ಬಳಿಯೇ ದುರ್ಗಾ ಚೌಡೇಶ್ವರಿ ದೇವಾಲಯ ನಿರ್ಮಾಣ ಮಾಡಿ ಅರ್ಚಕನಾಗಿ ಕಾರ್ಯನಿರ್ವಹಿಸುತ್ತಿದ್ದ. ನೂರಾರು ಭಕ್ತರು ತಮ್ಮ ಸಂಕಷ್ಟ ಪರಿಹಾರಕ್ಕಾಗಿ ಈತನ ದೇವಾಲಯ ಮತ್ತು ಮನೆಗೆ ಬಂದು ಹೋಗುತ್ತಿದ್ದರು. ಈ ವೇಳೆ ಅಮಾಯಕ ಮಹಿಳೆಯರನ್ನು ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಳ್ಳುತ್ತಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.
ದೂರು ನೀಡಲು ಮಹಿಳೆಯರ ಹಿಂದೇಟು...?!
ಪೊಲೀಸರ ವಿಚಾರಣೆಯ ವೇಳೆ ಆರೋಪಿ ಹಲವು ಮಹಿಳೆಯರನ್ನು ತನ್ನ ಕಾಮತೃಷೆಗೆ ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆದರೆ, ಕೆಲ ಸಂತ್ರಸ್ತ ಮಹಿಳೆಯರು ಈತನ ವಿರುದ್ಧ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಪತ್ರಿಕೆಗೆ ಮಾಹಿತಿ ನೀಡಿದೆ. ಪ್ರಕರಣ ಬಯಲಾಗುತ್ತಿದ್ದಂತೆಯೇ ದೌರ್ಜನ್ಯಕ್ಕೊಳಗಾದ ಕೆಲವು ಮಹಿಳೆಯರು ಪೂಜಾರಿಯ ವಿರುದ್ಧ ದೂರು ನೀಡಲು ಮುಂದೆ ಬಂದಿದ್ದಾರೆ ಎನ್ನಲಾಗಿದ್ದು, ಇನ್ನಷ್ಟೆ ಇದು ದೃಢವಾಗಬೇಕಾಗಿದೆ.







