‘‘ಯೆತ್ನಳ್ಳ’’ ಎತ್ತಿನ ಹೊಳೆಯಾದ ಬಗೆ...

ಭಾಗ-3
ರಕ್ಷಿದಿ, ಅಗಲಟ್ಟಿ ಗ್ರಾಮಗಳಲ್ಲಿ ಹಾಗೂ ನಮ್ಮ ರಂಗಮಂದಿರದಲ್ಲಿ ಬಳಸುತ್ತಿರುವುದೂ ಎತ್ತಿನಹಳ್ಳದ ನೀರನ್ನೇ. ವೇದಿಕೆಗಳಿಂದ ಮಾತನಾಡುವಾಗೆಲ್ಲ ನಾವು ‘ನಮಗಿದೇ ಗಂಗೆ, ಕಾವೇರಿ, ಗೋದಾವರಿ’ ಎನ್ನುತ್ತೇವೆ.
ಇಷ್ಟೆಲ್ಲ ಇದ್ದರೂ ಗುಂಡ್ಯ ಜಲವಿದ್ಯುತ್ ಯೋಜನೆ ಅಥವಾ ಎತ್ತಿನಹೊಳೆ ತಿರುವು ಯೋಜನೆಗೆ ಸ್ಥಳೀಯರ ವಿರೋಧ ಕಡಿಮೆ. ಹೋರಾಟ-ಹಾರಾಟವೇನಿದ್ದರೂ ಹೊರಗಿನವರದ್ದು ಎಂಬ ಮಾತು ಆಗಾಗ, ಮಾಧ್ಯಮಗಳಲ್ಲಿ, ಮತ್ತು ಮುಖ್ಯವಾಗಿ ರಾಜಕಾರಣಿಗಳ ಮಾತಿನಲ್ಲಿ ಕೇಳಿಬರುತ್ತದೆ.
ಆದರೆ ಇವರೆಲ್ಲ ಹೇಳುತ್ತಿರುವಷ್ಟು ಸರಳವಾಗಿ ಈ ಸಮಸ್ಯೆ ಖಂಡಿತ ಇಲ್ಲ. ಮೊದಲನೆಯದಾಗಿ ಪರಿಸರವನ್ನು ಉಳಿಸಬೇಕೆನ್ನುವವರಲ್ಲೂ ಹಲವು ಅಭಿಪ್ರಾಯಗಳಿವೆ. ಇವರೆಲ್ಲರೂ ಪರಿಸರದ ಬಗ್ಗೆ ನಿಜವಾದ ಕಾಳಜಿಯನ್ನು ಇಟ್ಟುಕೊಂಡಿರುವವರೇ, ಆದರೆ ಆಧುನಿಕ ಜೀವನ ಕ್ರಮವನ್ನು ಒಪ್ಪಿಕೊಂಡ ಮೇಲೆ ಸ್ವಲ್ಪಮಟ್ಟಿನ ರಾಜಿ ಅನಿವಾರ್ಯ ಎನ್ನುವವರಿದ್ದಾರೆ. ನಮಗೆ ರಸ್ತೆ, ವಿದ್ಯುತ್, ಮುಂತಾದವು ಬೇಕೇಬೇಕು ಎಂದ ಮೇಲೆ ಅರಣ್ಯನಾಶವೂ ಅನಿವಾರ್ಯವಾದ್ದರಿಂದ ಮರಗಿಡಗಳನ್ನು ಬೆಳೆದರಾಯ್ತು ಎಂದುಕೊಂಡವರಿದ್ದಾರೆ. ನೀರಿಲ್ಲದವರಿಗೆ ನೀರು ನೀಡುವುದು,ಪುಣ್ಯಕಾರ್ಯ ಎನ್ನುವವರಿದ್ದಾರೆ. ಹಾಗೇ ಪರಿಸರದ ವಿಚಾರದಲ್ಲಿ ಯಾವುದೇರಾಜಿಗೂಸಿದ್ಧವಿಲ್ಲದವರೂ ಇದ್ದಾರೆ., ಎಲ್ಲ ವಿಚಾರಗಳನ್ನು ಬಿಟ್ಟು ಯೋಚನೆ ಮಾಡಿದರೂ ಕೂಡಾ ಈ ಜಲವಿದ್ಯುತ್ ಯೋಜನೆಗಳಿಗಾಗಲೀ, ನದಿ ತಿರುವು ಯೋಜನೆಗಳಿಗಾಗಲೀ, ಪಶ್ಚಿಮ ಘಟ್ಟಗಳ ಜೀವ ವೈವಿಧ್ಯವನ್ನು ನಾಶ ಮಾಡುವ ಯಾವುದೇ ಯೋಜನೆಗೆ ಸ್ಥಳೀಯ ಕೃಷಿಕರಿಂದ ಅಥವಾ ಕೃಷಿಕಾರ್ಮಿಕರಿಂದ ಯಾಕೆ ವ್ಯಾಪಕವಾದ ವಿರೋಧ ಬರುತ್ತಿಲ್ಲ?. ಇದಕ್ಕೆ ಹಲವು ಕಾರಣಗಳಿವೆ. ಪರಿಸರವಾದಿಗಳ ಸಂಘಟನಾತ್ಮಕ ಸಮಸ್ಯೆಗಳು ಸ್ವಲ್ಪಮಟ್ಟಿಗೆ ಕಾರಣವಿದ್ದರೆ, ಇನ್ನಿತರ ಕಾರಣಗಳು ಹಲವಿವೆ.
ಮುಖ್ಯವಾಗಿ ಇಲ್ಲಿನ ಕೃಷಿಕರು ಹಲವು ರೀತಿಗಳಿಂದ ಬಳಲಿಹೋಗಿದ್ದಾರೆ. ಯಾವ ಕೃಷಿಯೂ ನಿರಂತರ ಲಾಭದಾಯಕವಲ್ಲದೆ ಕೃಷಿಕ ಸಾಲದಲ್ಲಿ ಮುಳುಗಿ ಹೋಗಿದ್ದಾನೆ. ಎಲ್ಲ ಸರಕಾರಗಳು ಮೂಗಿಗೆ ತುಪ್ಪ ಸವರಿದಂತೆ ನೀಡಿದ ಯಾವುದೇ ‘ಪ್ಯಾಕೇಜ್’ ಅವನಿಗೆ ಭರವಸೆಯನ್ನು ತುಂಬಿಲ್ಲ. ಈಗಾಗಲೇ ಹಣದ ಆವಶ್ಯಕತೆಗಳಿಗಾಗಿಯೋ ಇನ್ನಾವುದೇ ಕಾರಣಕ್ಕೋ ತನ್ನ ಜಮೀನಿನಲ್ಲಿದ್ದ ಅಲ್ಪಸ್ವಲ್ಪಮರಗಳನ್ನು ಮಾರಾಟಮಾಡಿ, ಆ ಜಮೀನು ಕೂಡಾ ಭೂಸವಕಳಿಯಿಂದ ಬರಡಾಗಿದೆ. ಆ ಕಾರಣದಿಂದ ವರ್ಷಕ್ಕೆ ನೂರೈವತ್ತರಿಂದ ಇನ್ನೂರು ಇಂಚುಗಳಷ್ಟು ಮಳೆಯಾಗುವ ಆ ಪ್ರದೇಶದ ಪಾರಂಪರಿಕ ಬೆಳೆಗಳನ್ನು ಬೆಳೆಯಲಾರದ ಸ್ಥಿತಿ ತಲುಪಿದ್ದಾನೆ. ಇದರೊಂದಿಗೆ ಈಗಾಗಲೇ ಅನುಷ್ಠಾನಕ್ಕೆ ಬಂದಿರುವ ಹಲವು ಯೋಜನೆಗಳಿಂದಾಗಿ ನಡೆದ ಅರಣ್ಯಪ್ರದೇಶದ ಅತಿಕ್ರಮಣದಿಂದಾಗಿ ಆನೆಯೊಂದೇ ಅಲ್ಲ ಇತರ ಕಾಡು ಪ್ರಾಣಿಗಳೂ ಊರೊಳಗೆ ಬರಲಾರಂಭಿಸಿವೆ. ಇವೆಲ್ಲದರ ಜೊತೆ ಕೃಷಿಗೆ ಕೆಲಸಗಾರರು ಸಿಗದಿರುವುದರಿಂದ ಕೃಷಿಕ ಇನ್ನಷ್ಟು ಸೋತು ಹೋಗಿದ್ದಾನೆ. ಘಟ್ಟಪ್ರದೇಶದ ದುರ್ಗಮ ನೆಲೆಯಲ್ಲಿರುವ ತನ್ನ ಜಮೀನನ್ನು ಮಾರಾಟ ಮಾಡಿ ಹೋಗೋಣವೆಂದರೆ, ಜಮೀನನ್ನು ಕೊಳ್ಳುವವರಿಲ್ಲದೆ ಕೃಷಿಕ ನಿರಾಶನಾಗಿ ಕುಳಿತಿದ್ದಾನೆ. (ಈ ಭಾಗದ ಜಮೀನನ್ನು ಕಾರ್ಪೊರೇಟ್ ವಲಯದವರೂ ಸಹ ಖರೀದಿಸುತ್ತಿಲ್ಲ). ಇಂತಹ ಸಂದರ್ಭದಲ್ಲಿ ಅಲ್ಲಿಗೆ ಬರುವ ಯಾವುದೇ ಯೋಜನೆ ಅವನಿಗೆ ಹೊಸ ಆಸೆಗಳನ್ನು ತರುತ್ತದೆ. ಹೇಗೂ ಮಾರಲು ಅಸಾಧ್ಯವಾಗಿರುವ ತನ್ನ ಜಮೀನಿಗೆ ಒಳ್ಳೆಯ ಪರಿಹಾರಧನ ದೊರಕಿ ತಾನು ಇಲ್ಲಿಂದ ಮುಕ್ತಿಪಡೆಯಬಹುದು, ಇಲ್ಲವೇ ಯೋಜನೆಗಳಿಂದಾಗಿ ಇಲ್ಲಿಗೆ ಬರುವ ಜನರ ಸಂಖ್ಯೆ ಹೆಚ್ಚಾಗುವುದರಿಂದ ಬೇರೇನಾದರೂ ಕೆಲಸವೋ ವ್ಯಾಪಾರವೋ ಮಾಡಬಹುದೆಂಬ ಹವಣಿಕೆಯಲ್ಲಿದ್ದಾನೆ. ಇವರಲ್ಲಿ ಕೆಲವರ ಮಕ್ಕಳು ವಿದ್ಯಾಭ್ಯಾಸ ಮುಗಿಸಿ ಈಗಾಗಲೇ ಇಲ್ಲಿಂದ ದೂರವಾಗಿದ್ದಾರೆ. ಪ್ರತೀ ಬಾರಿಯೂ ಈ ಯೋಜನೆಗಳ ವಿಚಾರ ಜನಾಭಿಪ್ರಾಯ ಸಂಗ್ರಹ ಸಭೆಗಳಲ್ಲಿ ಮತ್ತು ಇನ್ನಿತರ ಮಾಧ್ಯಮಗಳಲ್ಲಿ ಇವರು ತಮ್ಮ ಅಸಹಾಯಕತೆ ಮತ್ತು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಸಾಧ್ಯವಿದ್ದವರು ಈಗಾಗಲೇ ತಮ್ಮ ಕಾಫಿ ತೋಟಗಳನ್ನು ಉದ್ಯಮಿಗಳಿಗೆ ಮಾರಿದ್ದಾರೆ. ಅಲ್ಲೆಲ್ಲ ರೆಸಾರ್ಟುಗಳು ಪ್ರಾರಂಭವಾಗಿವೆ. ಹೇಗಾದರೂ ಇಲ್ಲಿಂದ ಬಿಡುಗಡೆ ದೊರೆಯಲಿ ಎಂಬ ಹತಾಶ ಸ್ಥಿತಿಯಲ್ಲಿ, ಈ ಎಲ್ಲ ಪರಿಸರ ನಾಶದ ಯೋಜನೆಗಳನ್ನು ಪ್ರಬಲವಾಗಿ ಸಮರ್ಥಿಸುತ್ತಿರುವ ಇವರ ದೌರ್ಭಾಗ್ಯವನ್ನು ಅರ್ಥಮಾಡಿಕೊಂಡು, ಅವರಿಗೆ ಅತ್ಯಂತ ಹೆಚ್ಚಿನ ಪರಿಹಾರವನ್ನು ಕೊಟ್ಟು ಅವರು ಬೇರೆಡೆಗೆ ಹೋಗಲು ಅನುವು ಮಾಡಿಕೊಡಬೇಕು.
ದೊಡ್ಡ ಕೈಗಾರಿಕೆಗಳಿಗೆ ಕೊಡುತ್ತಿರುವ ರಿಯಾಯಿತಿಗಳ ಮುಂದೆ ಈ ಮೊತ್ತ ನಗಣ್ಯವಾದುದು. ಯಾವುದೇ ಯೋಜನೆಯಲ್ಲಿ ಸ್ಥಳಾಂತರಿಸ ಬೇಕಾಗಿರುವ ಎಲ್ಲ ಜನರಿಗೆ ಕೊಡಬೇಕಾದ ಪರಿಹಾರದ ಮೊತ್ತ ಕೆಲವು ಕೋಟಿ ರೂಪಾಯಿಗಳು ಮಾತ್ರವಾಗಿರುತ್ತದೆ.
ಇನ್ನು ಇಲ್ಲಿರುವ ಹಳೆಯ ತಲೆಮಾರಿನ ಸ್ಥಳೀಯ ಕೂಲಿ ಕಾರ್ಮಿಕರಾದರೂ ಅಷ್ಟೆ, ಹೆಚ್ಚಿನವರು ಅಧಿಕ ಕೂಲಿ ದೊರೆಯುವ ಇತರ ಪ್ರದೇಶಗಳಿಗೋ ನಗರಗಳಿಗೋ ಹೋಗಿದ್ದಾರೆ. ಹೊಸ ಯೋಜನೆಗಳೇನಾದರೂ ಬಂದರೆ ಇನ್ನೂ ಉತ್ತಮ ಕೂಲಿ ದೊರೆಯುವ ನಿರೀಕ್ಷೆಯಲ್ಲಿ ಇವರಿದ್ದರೆ, ಸಣ್ಣ ಪುಟ್ಟ ವ್ಯಾಪಾರಿಗಳು ಟೀ ಅಂಗಡಿಗಳವರು ಇದೇ ಮನಸ್ಥಿತಿಯಲ್ಲಿದ್ದಾರೆ. ಇವರೆಲ್ಲ ಯಾವುದೇ ದೂರಗಾಮೀ ಪರಿಣಾಮಗಳ ಬಗ್ಗೆ ಯೋಚಿಸದೆ, ತಮ್ಮ ಬದುಕು ಉತ್ತಮಗೊಂಡೀತೆಂಬ ಮನುಷ್ಯ ಸಹಜ ಆಸೆಯಿಂದ ಈ ಯೋಜನೆಗಳನ್ನು ಸ್ವಾಗತಿಸುತ್ತ ಕುಳಿತಿದ್ದಾರೆ.
ಇದಕ್ಕಿಂತ ಶಕ್ತಿಶಾಲಿ, ಪ್ರಭಾವಶಾಲಿ ಗುಂಪೊಂದಿದೆ. ಇವರಲ್ಲಿ ಕೆಲವರು ನೇರವಾಗಿ ಅಭಿವೃದ್ಧಿಯ ಹರಿಕಾರರಂತೆ ಮಾತನಾಡುತ್ತ ಈ ಎಲ್ಲ ಯೋಜನೆಗಳನ್ನು ನೇರವಾಗಿ ಸಮರ್ಥಿಸುತ್ತ ಈ ಮೊದಲು ತಿಳಿಸಿದ, ಸ್ವಲ್ಪಮಟ್ಟಿಗೆ ರಾಜಿ ಅನಿವಾರ್ಯ ಎನ್ನುವ, ಪ್ರಗತಿಪರರ ಹಾಗೂ ಬುದ್ಧಿಜೀವಿಗಳ ಮಾತನ್ನು ತಮ್ಮ ಸಮರ್ಥನೆಗಾಗಿ ಬಳಸಿಕೊಳ್ಳುತ್ತಾರೆ. ಇನ್ನು ಕೆಲವರು ಇವರಿಗಿಂತಲೂ ಹೆಚ್ಚು ಅಪಾಯಕಾರಿಗಳು. ಇವರು ಈ ಯೋಜನೆಗಳನ್ನು ವಿರೋಧಿಸುವವರ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಾ, ಈ ಎಲ್ಲ ಯೋಜನೆಗಳ ಅನುಷ್ಠಾನವಾದರೆ ತಮಗೆ ದೊರೆಯಬಹುದಾದ ಲಾಭದ ಲೆಕ್ಕಾಚಾರದಲ್ಲಿರುತ್ತಾರೆ.
ಅವರುಗಳು ಮಾತ್ರವಲ್ಲ, ಈ ಎಲ್ಲ ಯೋಜನೆಗಳಿಂದ ಲಾಭಪಡೆಯುವವರು, ಇನ್ನೂ ಅನೇಕರಿದ್ದಾರೆ. ಇವರಲ್ಲಿ ಗುತ್ತಿಗೆದಾರರು, ಮರದ ವ್ಯಾಪಾರಿಗಳು, ಮರಳು ದಂಧೆಯವರು, ಗ್ರಾನೈಟ್ ಗಣಿಗಾರಿಕೆಯವರು, ರಿಯಲ್ ಎಸ್ಟೇಟ್ ದಳ್ಳಾಳಿಗಳು, ಮತ್ತು ಇವರಿಂದ ಲಾಭ ಪಡೆಯುತ್ತಿರುವ ಅನೇಕ ಸ್ಥಳೀಯರು ಮತ್ತು ಕೆಲವು ಪತ್ರಕರ್ತರೂ ಇದ್ದಾರೆ. ಇವರಿಗೆ ಜಲವಿದ್ಯುತ್ ಯೋಜನೆಯಾಗಲೀ, ನದಿ ತಿರುವು ಯೋಜನೆಯಾಗಲೀ, ರಸ್ತೆ ನಿರ್ಮಾಣವಾಗಲೀ ಯಾವ ವ್ಯತ್ಯಾಸವೂ ಇಲ್ಲ. ಯಾವುದೇ ಯೋಜನೆ ಇವರ ಪಾಲಿಗೆ ಹಿಂಡುವ ಹಸುವಾಗಬಲ್ಲದು. ಇವರು ಬಹಳ ಸಮರ್ಥವಾಗಿ ಸ್ಥಳೀಯ ಜನರಲ್ಲಿ ಹೊಸ ಆಸೆ-ಆಕಾಂಕ್ಷೆಗಳನ್ನು ತುಂಬಬಲ್ಲರು. ಈ ಕಾರಣಗಳಿಂದಾಗಿ ಈ ಎಲ್ಲ ಯೋಜನೆಗಳ ವಿರೋಧವಾಗಿ ಸಭೆ, ಜಾಥಾ, ಸತ್ಯಾಗ್ರಹ, ಜನಾಭಿಪ್ರಾಯ ಸಂಗ್ರಹ ಸಭೆ ಏನೇ ನಡೆಯಲಿ, ಸ್ಥಳೀಯ ಕೃಷಿಕ-ಕಾರ್ಮಿಕರಿಂದ ದೊಡ್ಡ ಪ್ರಮಾಣದ ಬೆಂಬಲ ಸಿಗುತ್ತಿಲ್ಲ, ಆದ್ದರಿಂದ ಈ ಕಾರ್ಯಕ್ರಮಗಳಲ್ಲಿ ಹೊರಗಿನವರ ಸಂಖ್ಯೆಯೇ ಹೆಚ್ಚಾಗಿ ಕಾಣಸಿಗುತ್ತದೆ ಇದರಿಂದಾಗಿ ಈ ಯೋಜನೆಗಳಿಗೆ ಸ್ಥಳೀಯರ ವಿರೋಧವಿಲ್ಲ, ಈ ಪರಿಸರವಾದಿಗಳು ಹೊರಗಿನವರು, ಹೊಟ್ಟೆ ತುಂಬಿದ ಸುಶಿಕ್ಷಿತರು, ಮೇಲ್ವರ್ಗದ ಜನ, ಇತ್ಯಾದಿ ವಾದಗಳು ಹುಟ್ಟಿಕೊಳ್ಳುತ್ತಿವೆ.
ಕೆಲವು ತಿಂಗಳ ಹಿಂದೆ ತುಮಕೂರಿನ ಶಾಲೆಯೊಂದರ ಮಕ್ಕಳು ಎತ್ತಿನಹೊಳೆ ಯೋಜನೆಯ ಬಗ್ಗೆ ಮತ್ತು ಎತ್ತಿನಹೊಳೆ ಪರಿಸರದ ಅಧ್ಯಯನಕ್ಕಾಗಿ ಬಂದಿದ್ದರು ಮೂರುದಿನಗಳ ಕಾಲ ನಮ್ಮ ರಂಗ ಮಂದಿರದಲ್ಲಿ ಉಳಿದು, ಎತ್ತಿನಹಳ್ಳ ಹುಟ್ಟುವಲ್ಲಿಂದ ಕೆಂಪೊಳೆ ಸೇರುವ ತನಕದ ಒಟ್ಟು ಜಲಾನಯನ ಪ್ರದೇಶದಲ್ಲಿ ತಿರುಗಾಡಿದರು. ಜೀವ ವೈವಿಧ್ಯವನ್ನೆಲ್ಲ ನೋಡಿದರು. ದಾಖಲಿಸಿದರು. ಫೋಟೊ ತೆಗೆದುಕೊಂಡರು. ಇಲ್ಲಿಯ ನೆಲದ ವಿಸ್ತೀರ್ಣ, ಹಾಗೂ ಅದೇ ಸ್ಥಳದ ಮೇಲ್(ಏರಿಯಲ್)ವಿಸ್ತೀರ್ಣ, ಮಳೆಮಾಪನ ವಿಧಾನಗಳು, (ಕಾಫಿ ತೋಟಗಳಲ್ಲಿ ಪ್ರತಿದಿನ ಮಳೆಮಾಪನ ಮಾಡುವುದು ಬ್ರಿಟಿಷರ ಕಾಲದಿಂದಲೂ ನಡೆದು ಬಂದಿದೆ). ಒಂದು ಟಿ.ಎಂ.ಸಿ ನೀರೆಂದರೆ ಎಷ್ಟು?. ವರ್ಷಕ್ಕೆ ಸರಾಸರಿ ನೂರರಿಂದ ನೂರಿಪ್ಪತ್ತು ಇಂಚುಗಳಷ್ಟು ಮಳೆಬೀಳುವ ಈ ಜಲಾನಯನ ಪ್ರದೇಶದಲ್ಲಿ ಒಂದು ಮಳೆಗಾಲದಲ್ಲಿ ಭೂಮಿಗೆ ಬೀಳುವ ನೀರಿನ ಒಟ್ಟು ಮೊತ್ತ. ಅದರಲ್ಲಿ ಆವಿಯಾಗುವ ಪ್ರಮಾಣ, ಭೂಮಿಯಲ್ಲಿ ಇಂಗುವ ಪ್ರಮಾಣ, ಈ ಪ್ರದೇಶದ ಜೀವರಾಶಿಗೆ ಬಳಕೆಗೆ ಬೇಕಾದ ನೀರು ಇವೆಲ್ಲವನ್ನೂ ಕಳೆದು, ಹೆಚ್ಚುವರಿಯಾಗಿ ಸಿಗಬಹುದಾದ ನೀರು ಹೀಗೆ ಎಲ್ಲವನ್ನೂ ತಾವೇ ಪ್ರಾಯೋಗಿಕವಾಗಿ ನೋಡಿ ಕಲಿತು, ಕೊಳವೆಗಳ ಮೂಲಕ ಸಾಗಿಸಬಹುದಾದ ನೀರು ಎತ್ತಿನ ಹಳ್ಳದಲ್ಲಿ ದೊರಕುವುದು ಕೇವಲ ಮೂರರಿಂದ ಮೂರೂವರೆ ಟಿ.ಎಂ.ಸಿ. ಮಾತ್ರ ಎಂದು ಲೆಕ್ಕಹಾಕಿದರು. ಎತ್ತಿನಹಳ್ಳವಲ್ಲದೆ, ಸರಕಾರ ಹೇಳುವ ಕಾಡುಮನೆಹಳ್ಳ, ಕೆಂಕೇರಿಹಳ್ಳ, ಮಂಜನಹಳ್ಳ ಸೇರಿದರೂ ಒಟ್ಟು ನೀರಿನ ಮೊತ್ತ ಎಂಟರಿಂದ ಒಂಬತ್ತು ಟಿ.ಎಂ.ಸಿ ಮೀರಲಾರದೆಂದು ತೀರ್ಮಾನಿಸಿದರು. ಅಂದರೆ ಈಗಾಗಲೇ ತಯಾರಿಸಿಟ್ಟಿರುವ ಬೃಹತ್ ಗಾತ್ರದ ಕೊಳವೆಗಳಿಗೂ ಇಲ್ಲಿರುವ ನೀರಿನ ಪ್ರಮಾಣಕ್ಕೂ ತಾಳೆಯಾಗುವುದಿಲ್ಲವೆಂದು ಅವರಿಗೂ ಅರಿವಾಯ್ತು. ಇಪ್ಪತ್ತನಾಲ್ಕು ಟಿ.ಎಂ.ಸಿ. ನೀರು ದೊರೆಯಬೇಕಾದರೆ ಘಟ್ಟದ ಕೆಳಗಿನ ನೇತ್ರಾವತಿಯನ್ನೋ ಕುಮಾರಧಾರೆಯನ್ನೋ ತಿರುಗಿಸುವುದು ಅನಿವಾರ್ಯವೆಂದು, ಅದರಿಂದ ಅಲ್ಲಿನ ಪರಿಸರಕ್ಕೆ ಇನ್ನೂ ಹೆಚ್ಚಿನ ಹಾನಿ ಆಗಲಿದೆ ಎಂದು ಮಕ್ಕಳು ಅಭಿಪ್ರಾಯಪಟ್ಟರು.ಮಕ್ಕಳೆಲ್ಲ ಎತ್ತಿನಹೊಳೆ ಯೋಜನೆಯ ಫಲಾನುಭವಿ ಪ್ರದೇಶಗಳ ಮಕ್ಕಳು, ಇವರೊಂದಿಗೆ ನವ್ಮೂರ ಶಾಲೆಯ ಅದೇ ವಯಸ್ಸಿನ ಮಕ್ಕಳೊಂದಿಗೆ ಮಾತನಾಡಲು ಬಿಟ್ಟೆವು. ಮಕ್ಕಳು ಅವರವರೇ ಮಾತಾಡಿ ಕೊನೆಗೆ ತೀರ್ಮಾನಿಸಿದ್ದೆಂದರೆ ‘‘ತುಮಕೂರಿನ ನೀರಿನ ಸಮಸ್ಯೆಯನ್ನು ಅಲ್ಲಿಯ ಜನರು ಅಲ್ಲೇ ಪರಿಹಾರ ಕಂಡುಕೊಳ್ಳಬೇಕು...ಹಾಗೇ ಮಲೆನಾಡಿನ ಜನ ತಮ್ಮ ಪ್ರಾಣಿಗಳ ಕಾಟ ಇತ್ಯಾದಿ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳಬೇಕು’’ಎಂದು.
ಇವರೆಲ್ಲ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು. ಆ ಮಕ್ಕಳಿಗಿರುವ ಅರಿವು-ಕಾಳಜಿ ನಮಗಿದ್ದಿದ್ದರೆ....
ಕೇಂದ್ರ ಸರಕಾರವೀಗ ಹಸಿರುನಾಶಕ್ಕೆ ಹಸಿರು ನಿಶಾನೆ ತೋರಿದೆ. ನಮ್ಮ ರಂಗತಂಡ ‘‘ಎತ್ತಿನ ಹೊಳೆ’’ ಎಂಬ ನಾಟಕವನ್ನು ರಚಿಸಿಕೊಂಡು ತಾಲೀಮಿನಲ್ಲಿ ತೊಡಗಿದೆ.





