ಆರೆಸ್ಸೆಸ್ ಮುಖಂಡನನ್ನು ಬಂಧಿಸಿದ್ದಕ್ಕೆ ಪೊಲೀಸರ ವಿರುದ್ಧವೇ ಕಳವು, ಕೊಲೆಯತ್ನ ಪ್ರಕರಣ!

ಬಲಘಾಟ್, ಅ.4: ಮಧ್ಯ ಪ್ರದೇಶದ ಬಲಘಾಟ್ ನ ಆರೆಸ್ಸೆಸ್ ನಾಯಕ ಸುರೇಶ್ ಯಾದವ್ ಅವರನ್ನು ಬಂಧಿಸಿದ ತಪ್ಪಿಗೆ ಪೊಲೀಸರ ವಿರುದ್ಧವೇ ಕಳವು, ಕೊಲೆಯತ್ನ ಪ್ರಕರಣಗಳು ದಾಖಲಾದ ಘಟನೆ ನಡೆದಿದೆ.
ಬಲಘಾಟ್ ಹೆಚ್ಚುವರಿ ಎಸ್ಪಿ ರಾಜೇಶ್ ಶರ್ಮ ಹಾಗೂ ಬೈಹಾರ್ ಪೊಲೀಸ್ ಠಾಣೆಯಅಧಿಕಾರಿ ಝಿಯಾವುಲ್ ಹಖ್ ಸೇರಿದಂತೆ ಎಂಟು ಪೊಲೀಸ್ ಸಿಬ್ಬಂದಿ ಭೂಗತರಾಗುವ ಪ್ರಮೇಯ ಬಂದಿತ್ತು. ಅವರೆಲ್ಲರ ಮೇಲೆ ಸೆಪ್ಟೆಂಬರ್ 26ರಂದು ಎಫ್ಐಆರ್ ದಾಖಲಾಗಿದೆ. ಇತ್ತೀಚಿಗಿನ ಬೆಳವಣಿಗೆಯಂತೆ ಬಲಘಾಟ್ ಎಸ್ಪಿ ಅಸಿತ್ ಯಾದವ್ ಹಾಗೂಬಲಘಾಟ್ ವಲಯ ಐಜಿಡಿ ಸಿ.ಸಾಗರ್ ಅವರನ್ನು ವರ್ಗಾವಣೆ ಮಾಡಲಾಗಿದೆಯೆಂದು ಕ್ಯಾಚ್ ನ್ಯೂಸ್ ವರದಿ ಮಾಡಿದೆ.
ಸುರೇಶ್ ಯಾದವ್ ಅವರನ್ನು ಧಾರ್ಮಿಕ ಭಾವನೆಗಳನ್ನು ಹಾಗೂ ಎರಡು ಸಮುದಾಯಗಳ ನಡುವೆ ದ್ವೇಷ ಭಾವನೆ ಬೆಳೆಸಲು ಯತ್ನಿಸಿದ್ದಾರೆಂಬ ಆರೋಪದ ಮೇರೆಗೆ ಸೆಪ್ಟೆಂಬರ್ 26ರಂದು ಬಂಧಿಸಲಾಗಿತ್ತು.ಆದರೆಅವರಿಗೆ ಕೂಡಲೇ ಜಾಮೀನು ದೊರೆತಿತ್ತಾದರೂ ಪೊಲೀಸ್ ಠಾಣೆಯಿಂದ ಅವರು ಹೊರಬರಲು ನಿರಾಕರಿಸಿದ್ದ ಕಾರಣ ಹೊರಗೆ ಆರೆಸ್ಸೆಸ್ ಬೆಂಬಲಿಗರು ಗುಂಪುಗೂಡಿದ್ದರಲ್ಲದೆ ಯಾದವ್ ಠಾಣೆಯೊಳಗೆ ಪೊಲೀಸರನ್ನು ಬೆದರಿಸಲು ಆರಂಭಿಸಿದ್ದರು ಎಂದು ಹೇಳಲಾಗಿದೆ.
ಈ ಬೆಳವಣಿಗೆಯ ನಂತರ ತನ್ನ ಮೇಲೆ ಠಾಣೆಯಲ್ಲಿ ದೌರ್ಜನ್ಯ ನಡೆಸಲಾಗಿದೆಯೆಂದು ಆರೋಪಿಸಿ ಸುರೇಶ್ ಯಾದವ್ ಪೊಲೀಸರ ಮೇಲೆ ಎರಡುದೂರು ದಾಖಲಿಸಿದ್ದರು. ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ಬೆದರಿದ ಪೊಲೀಸರು ಭೂಗತರಾಗಿದ್ದರು. ಪೊಲೀಸರ ಪ್ರಕಾರ ಯಾದವ್ ಅವರು ಇಸ್ಲಾಂ ವಿರುದ್ಧ ಅವಹೇಳನಕಾರಿ ಸಂದೇಶಗಳನ್ನುವಾಟ್ಸಪ್ ಗ್ರೂಪ್ ಒಂದರಲ್ಲಿ ಪೋಸ್ಟ್ ಮಾಡಿದ್ದರು. ಸ್ಥಳೀಯ ಯುವಕ ನವಾಬ್ ಖಾನ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ ನಂತರ ಯಾದವ್ ಬಂಧನವಾಗಿತ್ತು. ಪೊಲೀಸರ ಪ್ರಕಾರ ಯಾದವ್ ಅವರನ್ನು ಬಂಧಿಸಿ ಕರೆತರಲಾಗುತ್ತಿದ್ದಂತೆಯೇ ಅವರು ತಪ್ಪಿಸಿಕೊಂಡು ಮೆಡಿಕಲ್ ಸ್ಟೋರ್ ಒಂದರಲ್ಲಿ ಅವಿತಿದ್ದರೂ ಅವರನ್ನು ಪತ್ತೆ ಹಚ್ಚಿ ಅಲ್ಲಿಂದ ಪೊಲೀಸರು ವಶಪಡಿಸಿಕೊಳ್ಳಲಾಗಿತ್ತು.
ರಾಜ್ಯ ಸರಕಾರ ಈ ಪ್ರಕರಣದ ಸಿಐಡಿ ತನಿಖೆಗೆ ಆದೇಶಿಸಿದೆ.





