ಅ.7ರಿಂದ 18ರ ತನಕ ಪ್ರತಿದಿನ 2,000 ಕ್ಯೂಸೆಕ್ ನೀರು ಬಿಡಲು ಕರ್ನಾಟಕ ಸರಕಾರಕ್ಕೆ ಸುಪ್ರೀಂ ಆದೇಶ
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಸುಪ್ರೀಂ ತಡೆ * ಮುಂದಿನ ವಿಚಾರಣೆ ಅ.18ಕ್ಕೆ ಮುಂದೂಡಿಕೆ

ಹೊಸದಿಲ್ಲಿ, ಅ. 4: ತಮಿಳುನಾಡಿಗೆ ಅ.7ರಿಂದ ಅ.18ರ ತನಕ ಪ್ರತಿದಿನ 2,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕ ಸರಕಾರಕ್ಕೆ ಇಂದು ಸುಪ್ರೀಂ ಕೋರ್ಟ್ ನ ದ್ವಿಸದಸ್ಯ ಪೀಠ ಆದೇಶ ನೀಡಿದೆ.
ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಉದಯ್ ಲಲಿತ್ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ಇಂದು ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ಕೇಂದ್ರ ಹಾಗೂ ರಾಜ್ಯ ಸರಕಾರ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿ ಆದೇಶ ನೀಡಿತು.
ಅ.1ರಿಂದ 6ರ ತನಕ ನೀರು ಬಿಡುವ ಜವಾಬ್ದಾರಿ ನಿಮ್ಮದು. ಅ.7ರಿಂದ 18ರ ತನಕ ಏನು ಮಾಡುತ್ತೀರಾ ?. ನೀರು ಬಿಡಲು ಸಾಧ್ಯವೆ ಕರ್ನಾಟಕ ಸರಕಾರದೊಂದಿಗೆ ಚರ್ಚಿಸಿ ಮಾಹಿತಿ ಕೊಡಿ ಎಂದು ಸುಪ್ರೀಂ ಕೋರ್ಟ್ ಇಂದು ಕರ್ನಾಟಕ ಪರ ವಕೀಲ ಫಾಲಿ ಎಸ್ ನಾರಿಮನ್ ಅವರಿಗೆ ಸೂಚನೆ ನೀಡಿದಾಗ ಅವರು ಕರ್ನಾಟಕದ ಸರಕಾರ 1,500 ಕ್ಯೂಸೆಕ್ ನೀರುವ ನಿರ್ಧಾರವನ್ನು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ನ್ಯಾಯಾಲಯವು 2,000 ಕ್ಯೂಸೆಕ್ ನೀಡುವಂತೆ ಸೂಚನೆ ನೀಡಿತ್ತು.
ತಾಂತ್ರಿಕ ಉನ್ನತಾಧಿಕಾರ ತಂಡಕ್ಕೆ ಅಸ್ತು:ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ತಡೆಯಾಜ್ಞೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಅ.18ಕ್ಕೆ ಮುಂದೂಡಲಾಗಿದೆ.
ಎರಡೂ ರಾಜ್ಯಗಳ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ತಾಂತ್ರಿಕ ಉನ್ನತ ಅಧಿಕಾರಿಗಳ ತಂಡ ರಚನೆಗೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಜಿ.ಎಸ್. ಝಾ ಅಧ್ಯಕ್ಷರಾಗಿರುವ ತಂಡದಲ್ಲಿ ಕೇಂದ್ರ ಜಲ ಮಂಡಳಿಯ ಸದಸ್ಯ .ಸೈಯದ್ ಮಸೂದ್ ಹುಸೈನ್ , ಕೇಂದ್ರ ಚೀಫ್ ಇಂಜಿನಿಯರಿಂಗ್ ವಿಭಾಗದ ಆರ್ .ಕೆ. ಗುಪ್ತಾ ಸೇರಿದಂತೆ ನಾಲ್ಕು ರಾಜ್ಯಗಳ ಮುಖ್ಯ ಇಂಜಿನಿಯರ್ ಗಳು ಸಮಿತಿಯಲ್ಲಿ ಇದ್ದಾರೆ. ಈ ತಂಡ ಅ.7ರಿಂದ ಕರ್ನಾಟಕ ಮತ್ತು ತಮಿಳುನಾಡಿಗೆ ಪ್ರವಾಸ ಕೈಗೊಂಡು ಎರಡೂ ರಾಜ್ಯಗಳ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿ ಅ.17ರೊಳಗಾಗಿ ವರದಿ ಸಲ್ಲಿಸಲಿದೆ.
ಕೇಂದ್ರ ಮತ್ತು ರಾಜ್ಯ ಸರಕಾರ ಸಲ್ಲಿಸಿರುವ ಆದೇಶ ಮಾರ್ಪಾಡು ಅರ್ಜಿಯ ವಿಚಾರಣೆ ಇಂದು ಮಧ್ಯಾಹ್ನ ಸುಪ್ರೀಂ ಕೋರ್ಟ್ನಲ್ಲಿ ಆರಂಭಗೊಂಡಾಗ, 36 ಸಾವಿರ ಕ್ಯೂಸೆಕ್ ನೀರು ಬಿಡುತ್ತೇವೆ ಎಂದು ಸುಪ್ರೀಂಕೋರ್ಟ್ಗೆ ಕರ್ನಾಟಕ ಸರಕಾರ ಮಾಹಿತಿ ನೀಡಿತು.
ಕರ್ನಾಟಕ ಸರಕಾರ ಪರವಾಗಿ ನ್ಯಾಯಾಲಯಕ್ಕೆ ಕಾವೇರಿಯ ನೀರು ಬಿಡುವ ಬಗ್ಗೆ ವಕೀಲ ಫಾಲಿ ಎಸ್ ನಾರಿಮನ್ ವಾದಿಸಿದರು.
ಸೆ.30ರಿಂದ ನೀಡಿರುವ ಆದೇಶವನ್ನು ಕರ್ನಾಟಕ ಸರಕಾರ ಪಾಲಿಸುತ್ತಿದ್ದು, ಅ.3ರಿಂದ6 ತನಕ ಒಟ್ಟು 36 ಸಾವಿರ ಕ್ಯೂಸೆಕ್ ನೀಡಲಿದೆ ಈಗಾಗಲೇ 9 ಸಾವಿರ ಕ್ಯೂಸೆಕ್ ನೀರು ನೀಡಲಾಗಿದೆ. ಇಂದು ಮತ್ತು ನಾಳೆ ಎರಡು ಪಟ್ಟು ನೀರು ಬಿಡುತ್ತೇವೆ. ಮತ್ತೆ 24 ಸಾವಿರ ನೀರು ಬಿಡುತ್ತೇವೆ ಎಂದು ವಕೀಲ ಫಾಲಿ ಎಸ್ ನಾರಿಮನ್ ಮಾಹಿತಿ ನೀಡಿದರು.
"ನೀವು ಮತ್ತೆ ಮತ್ತೆ ಈ ರೀತಿಯ ತೀರ್ಪನ್ನು ದಯವಿಟ್ಟು ನೀಡಬೇಡಿ ಟೀಕೆಯನ್ನು ಎದುರಿಸಬೇಕಾಗುತ್ತದೆ "ಎಂದು ನಾರಿಮನ್ ಮನವಿ ಮಾಡಿದರು. ಆದರೆ ನಾವು ನಮ್ಮ ಲೆಕ್ಕಾಚಾರದಂತೆ ಆದೇಶ ನೀಡಿದ್ದೇವೆ ಎಂಬ ನ್ಯಾಯಮೂರ್ತಿ ದೀಪಕ್ ಮಿಶ್ರ ಹಾಗೂ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೀಡಿದ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ನಾರಿಮನ್ ಅವರು " ನೀರು ಬಿಡುಗಡೆ ಆದೇಶಕ್ಕೆ ಲೆಕ್ಕಾಚಾರವೇ ಮುಖ್ಯವಲ್ಲ. ವಾಸ್ತವ ಸ್ಥಿತಿಯನ್ನು ಅರಿತುಕೊಂಡು ಆದೇಶ ನೀಡಬೇಕಿತ್ತು" ಎಂದರು.
ಸುಪ್ರೀಂ ಕೋರ್ಟ್ ಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಲು ಕೇಂದ್ರ ಸರಕಾರಕ್ಕೆ ಆದೇಶ ನೀಡುವ ಅಧಿಕಾರ ಇಲ್ಲ. ಉಭಯ ಸದನಗಳಲ್ಲಿ ಚರ್ಚಿಸಿದ ಬಳಿಕ ಮಂಡಳಿ ರಚಿಸುವ ಅಧಿಕಾರ ಸಂಸತ್ತಿನದ್ದಾಗಿದೆ. ಮಂಡಳಿ ರಚಿಸುವಂತೆ ನಿರ್ದೇಶನ ನೀಡುವ ಅಧಿಕಾರ ಕೋರ್ಟ್ ವ್ಯಾಪ್ತಿಗೆ ಸೇರದ್ದರಿಂದ ಆದೇಶ ಮಾರ್ಪಾಡು ಮಾಡಬೇಕು. ಮಂಡಳಿಯ ರಚನೆಯ ಆದೇಶವನ್ನು ಮುಂದೂಡಬೇಕು ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಕೋರ್ಟ್ ಗೆ ಮನವಿ ಮಾಡಿದರು.
ಹೈಲೈಟ್ಸ್
*ಮಂಡಳಿ ರಚನೆಗೆ ತಮಿಳುನಾಡು ವಕೀಲರ ಪಟ್ಟು ಹಿಡಿದರು. ವಕೀಲರಾದ ಶೇಖರ ನಫಾಡೆ ನ್ಯಾಯಾಲಯದ ಮನವೊಲಿಸುವ ಪ್ರಯತ್ನ ನಡೆಸಿದರು.
*ನಮ್ಮ ಸಂವಿಧಾನದಲ್ಲಿ ಎಲ್ಲವೂ ಅಂತಿಮವಲ್ಲ :ವಕೀಲ ನಾರಿಮನ್ ಹೇಳಿದರು.
*ಕಾವೇರಿ ಮೇಲುಸ್ತುವಾರಿ ಸಮಿತಿ ಅವಧಿ ಮುಗಿದಿಲ್ಲ: ಎಂದು ನ್ಯಾ.ದೀಪಕ್ ಮಿಶ್ರಾ







