ಭಾರತದ ಹಾಕಿ ತಂಡ ಆಯ್ಕೆ, ಶ್ರೀಜೇಶ್ ನಾಯಕ
ಏಷ್ಯನ್ ಚಾಂಪಿಯನ್ಸ್ ಟ್ರೋಫಿ

ಬೆಂಗಳೂರು, ಅ.6: ಮಲೇಷ್ಯಾದಲ್ಲಿ ನಡೆಯಲಿರುವ ನಾಲ್ಕನೆ ಆವೃತ್ತಿಯ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ 18 ಸದಸ್ಯರನ್ನು ಒಳಗೊಂಡ ಭಾರತೀಯ ಪುರುಷರ ಹಾಕಿ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು, ಗೋಲ್ಕೀಪರ್ ಪಿಆರ್ ಶ್ರೀಜೇಶ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಅ.20 ರಿಂದ 30ರ ತನಕ ನಡೆಯಲಿದೆ.
ಗ್ರೂಪ್ ಲೀಡರ್ಗಳನ್ನು ರಚಿಸುವ ಉದ್ದೇಶ ಹಾಕಿಕೊಂಡಿರುವ ಹಾಕಿ ಇಂಡಿಯಾ ಆಯ್ಕೆಗಾರರು ಈ ಟೂರ್ನಿಯಲ್ಲಿ ಕನ್ನಡಿಗ ಎಸ್ವಿ ಸುನೀಲ್ ಬದಲಿಗೆ ಮಿಡ್ ಫೀಲ್ಡರ್ ಮನ್ಪ್ರೀತ್ ಸಿಂಗ್ಗೆ ಉಪ ನಾಯಕನ ಜವಾಬ್ದಾರಿ ನೀಡಿದ್ದಾರೆ.
ಹಿರಿಯ ಆಟಗಾರ ವಿ.ಆರ್. ರಘುನಾಥ್ಗೆ ಟೂರ್ನಿಯಿಂದ ವಿಶ್ರಾಂತಿ ನೀಡಲಾಗಿದ್ದು, ಡಿಫೆಂಡರ್ ಜಸ್ಜೀತ್ ಸಿಂಗ್ ಕುಲಾರ್ ತಂಡಕ್ಕೆ ವಾಪಸಾಗಿದ್ದಾರೆ.
ಮಂಡಿನೋವಿನಿಂದಾಗಿ ರಿಯೋ ಒಲಿಂಪಿಕ್ಸ್ನಿಂದ ಹೊರಗುಳಿದಿದ್ದ ಬಿರೇಂದ್ರ ಲಾಕ್ರಾ ತಂಡಕ್ಕೆ ವಾಪಸಾಗಿದ್ದಾರೆ. ಈ ಮೂಲಕ ತಂಡದ ಡಿಫೆನ್ಸ್ ವಿಭಾಗ ಬಲಿಷ್ಠವಾಗಿದೆ. ಫಾರ್ವರ್ಡ್ ವಿಭಾಗ ಆಕಾಶ್ದೀಪ್ ಸಿಂಗ್ ಹಾಗೂ ರಮಣ್ದೀಪ್ ಸಿಂಗ್ ಸೇವೆಯಿಂದ ವಂಚಿತವಾಗಿದೆ. ಈ ಇಬ್ಬರ ಬದಲಿಗೆ ತಲ್ವಿಂದರ್ ಸಿಂಗ್ ಹಾಗೂ ಲಲಿತ್ ಕುಮಾರ್ ಉಪಾಧ್ಯಾಯ ಆಯ್ಕೆಯಾಗಿದ್ದಾರೆ.
ರಿಯೋ ಒಲಿಂಪಿಕ್ಸ್ನ ಬಳಿಕ ನಡೆಯುತ್ತಿರುವ ಪ್ರಮುಖ ಟೂರ್ನಿಯಾಗಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ, ಕೊರಿಯಾ, ಜಪಾನ್, ಚೀನಾ, ಆತಿಥೇಯ ಮಲೇಷ್ಯಾ ಹಾಗೂ ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡಗಳು ಭಾಗವಹಿಸಲಿವೆ.
ಭಾರತದ ಹಾಕಿ ತಂಡ:
ಗೋಲ್ಕೀಪರ್ಗಳು: ಪಿ.ಆರ್. ಶ್ರೀಜೇಶ್(ನಾಯಕ), ಆಕಾಶ್ ಚಿಕ್ಟೆ.
ಡಿಫೆಂಡರ್ಗಳು: ರೂಪಿಂದರ್ ಪಾಲ್ ಸಿಂಗ್, ಪ್ರದೀಪ್ ಮೊರ್, ಜಸ್ಜೀತ್ ಸಿಂಗ್, ಬಿರೇಂದ್ರ ಲಾಕ್ರ, ಕೊಥಜಿತ್ ಸಿಂಗ್, ಸುರೇಂದರ್ ಕುಮಾರ್.
ಮಿಡ್ಫೀಲ್ಡರ್ಗಳು: ಚಿಂಗ್ಲೆಸನಾ ಸಿಂಗ್, ಮನ್ಪ್ರೀತ್ ಸಿಂಗ್(ಉಪ-ನಾಯಕ), ಸರ್ದಾರ್ ಸಿಂಗ್, ಎಸ್ಕೆ ಉತ್ತಪ್ಪ, ದೇವೇಂದ್ರ ವಾಲ್ಮಿಕಿ.
ಫಾರ್ವರ್ಡ್ಗಳು: ತಲ್ವಿಂದರ್ ಸಿಂಗ್, ಎಸ್ವಿ ಸುನೀಲ್, ಲಲಿತ್ ಕುಮಾರ್ ಉಪಾಧ್ಯಾಯ, ನಿಕ್ಕಿನ್ ತಿಮ್ಮಯ್ಯ, ಅಫ್ಫಾನ್ ಯೂಸುಫ್.







