ಸಾಹಿತ್ಯದಿಂದ ಸಮಾಜದಲ್ಲಿ ಸಮನ್ವಯತೆ ಸಾಧ್ಯ: ನಾ.ಡಿಸೋಜ

ಉಡುಪಿ, ಅ.6: ಇಂದು ಸಮಾಜದಲ್ಲಿ ಅಸಹಿಷ್ಣುತೆ, ಅಸಹನೆ ಸಿಡಿದು ಏಳುತ್ತಿದೆ. ಈ ನಿಟ್ಟಿನಲ್ಲಿ ಸಾಹಿತ್ಯದ ಮೂಲಕ ಸಮಾಜದಲ್ಲಿ ಬದಲಾವಣೆ ಹಾಗೂ ಪರಿವರ್ತನೆ ತಂದು ಸಮನ್ವಯತೆ ಸಾಧಿಸಬೇಕಾಗಿದೆ ಎಂದು ಹಿರಿಯ ಸಾಹಿತಿ, ಕಥೆಗಾರ, ವಿಮರ್ಶಕ ನಾ.ಡಿಸೋಜ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ಶರನ್ನವರಾತ್ರಿ ವಿಶೇಷ ಸಾಹಿತ್ಯ ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ ಇಂದು ‘ಸಾಹಿತ್ಯ ಮತ್ತು ಸಮನ್ವಯತೆ’ ಎಂಬ ವಿಷಯದ ಕುರಿತು ಅವರು ಮಾತನಾಡುತಿದ್ದರು.
ಎಲ್ಲ ಕಲೆಗಳು ತನ್ನ ಪಾಡಿಗೆ ತಾನು ಮಾತನಾಡುತ್ತದೆ. ಆದರೆ ಸಾಹಿತ್ಯ ಎಂಬುದು ಕೇವಲ ಮಾತನಾಡುವುದು ಮಾತ್ರವಲ್ಲ ಅದು ಹೃದಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ನಮಗೆ ಗೊತ್ತಿಲ್ಲದ ಸತ್ಯವನ್ನು ಸಾಹಿತ್ಯ ಹೇಳಿಕೊಡುತ್ತದೆ ಎಂದರು.
ನಮ್ಮ ನಡುವೆ ಇರುವ ಹಲವು ಕಲೆಗಳ ಮಧ್ಯೆ ಸಾಹಿತ್ಯ ಮಾತ್ರ ನಮಗೆ ಬಹಳ ಮುಖ್ಯವಾಗಿ ಕಾಣುತ್ತದೆ. ಯಾವುದೇ ಕಲೆಗೆ ನೀಡದ ಹೆಚ್ಚಿನ ಸ್ಥಾನ ವನ್ನು ಸಾಹಿತ್ಯಕ್ಕೆ ನೀಡಿದ್ದೇವೆ. ಇದಕ್ಕೆ ಕಾರಣ ಅದರಲ್ಲಿರುವ ಭಾಷೆ ಮತ್ತು ಬದುಕು. ಸಾಹಿತ್ಯವು ಭಾಷೆಯನ್ನು ಅವಲಂಬಿಸಿಕೊಂಡಿದೆ. ನಮ್ಮ ಅನುಭವ ಗಳನ್ನು ಭಾಷೆಯ ರೂಪದಲ್ಲಿ ಶಾಶ್ವತವಾಗಿ ಬದುಕಿಸುವುದೇ ಸಾಹಿತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಮಾತನ್ನು ಬದುಕಿಸುವುದು ಸಾಹಿತ್ಯದ ವಿಶೇಷತೆಯಾಗಿದೆ. ನೋವು ಮತ್ತು ಸಂತೋಷವನ್ನು ಹಂಚಿಕೊಳ್ಳುವದಕ್ಕಾಗಿ ನಾವು ಸಾಹಿತ್ಯವನ್ನು ಹೆಚ್ಚು ಹೆಚ್ಚು ಪ್ರೀತಿಸುತ್ತ ಹೋಗುತ್ತೇವೆ. ಬದುಕಿಗೆ ಪ್ರಿಯವಾದ ವಸ್ತುವೇ ಸಾಹಿತ್ಯ. ಯಾವುದರ ಸಹವಾಸದಿಂದ ನಮ್ಮ ಮನಸ್ಸಿಗೆ ಹಿತವಾಗುತ್ತದೆಯೋ ಅದುವೇ ನಿಜವಾದ ಸಾಹಿತ್ಯ ಎಂದು ಅವರು ತಿಳಿಸಿದರು.
ಆಧುನಿಕತೆಗೆ ನಾವು ಸಾಕಷ್ಟು ಆವರಿಸಿಕೊಂಡು ಬಿಟ್ಟಿದ್ದೇವೆ. ಇದರಿಂದ ಸಮನ್ವಯತೆಗೆ ಧಕ್ಕೆ ಬರುತ್ತಿದೆ. ಅದನ್ನು ಒಪ್ಪಿಕೊಳ್ಳಲೇ ಬೇಕಾದ ಪರಿಸ್ಥಿತಿ ಯಲ್ಲಿ ಇದ್ದೇವೆ. ನಾವು ಪ್ರೀತಿಸುವ ಸಾಹಿತ್ಯದಲ್ಲಿ ಸಮನ್ವಯತೆಯನ್ನು ಕಾಪಾಡುವುದು ಮುಖ್ಯ ಎಂದು ಅವರು ಹೇಳಿದರು.
ಪ್ರವಚನಕಾರ ಆದರ್ಶ ಗೋಖಲೆ ‘ಸಾಹಿತ್ಯ ಮತ್ತು ರಾಷ್ಟ್ರೀಯತೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ, ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀವರ್ಚನ ನೀಡಿದರು. ಪರ್ಯಾಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿದರು. ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿದರು.







