ಘಾನಾದಲ್ಲಿ ಗಾಂಧಿ ಪ್ರತಿಮೆ ವಿವಾದ:ತೆರವುಗೊಳಿಸಲು ಸರಕಾರದ ಚಿಂತನೆ

ಅಕ್ರಾ, ಅ.7: ಮಹಾತ್ಮಾ ಗಾಂಧಿಯವರನ್ನು ಟೀಕಾಕಾರರು ‘ಜನಾಂಗೀಯವಾದದ ಅಸ್ಮಿತೆ’ ಎಂದು ದೂಷಿಸಿದ ಹಿನ್ನೆಲೆಯಲ್ಲಿ ಘಾನಾ, ತನ್ನ ರಾಜಧಾನಿಯ ವಿಶ್ವವಿದ್ಯಾನಿಲಯವೊಂದರಿಂದ ಗಾಂಧಿಜಿಯ ವಿಗ್ರಹವೊಂದನ್ನು ತೆರವುಗೊಳಿಸುವ ಇಚ್ಛೆಯನ್ನು ವ್ಯಕ್ತಪಡಿಸಿದೆ.
ಆದರೆ, ಪ್ರತಿಮೆಯ ಸುರಕ್ಷೆಯ ದೃಷ್ಟಿಯಿಂದ ಅದನ್ನು ತೆರವುಗೊಳಿಸುತ್ತಿದ್ದೇವೆಂದು ಸ್ಪಷ್ಟಪಡಿಸಿರುವ ಘಾನಾ ಸರಕಾರ, ಜನರು ವಿಕಾಸಗೊಳ್ಳಬೇಕೆಂಬುದನ್ನು ತಾವು ನೆನಪಿಟ್ಟುಕೊಳ್ಳಬೇಕೆಂದು ಟೀಕಾಕಾರರಿಗೆ ಹೇಳಿದೆ.
ಘಾನಾ ವಿವಿಯಲ್ಲಿ ಮಹಾತ್ಮಾ ಗಾಂಧಿಯವರ ವಿಗ್ರಹವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಜೂನ್ನಲ್ಲಿ ಅನಾವರಣಗೊಳಿಸಿದ್ದರು. ಅದನ್ನು ತೆರವುಗೊಳಿಸುವಂತೆ ಅಲ್ಲಿನ ಪ್ರೊಫೆಸರ್ಗಳು ಕಳೆದ ತಿಂಗಳು ಮನವಿಯೊಂದನ್ನು ನೀಡಿದ್ದರು.
ವಿಗ್ರಹದ ಸುರಕ್ಷೆಗಾಗಿ ಅದನ್ನು ವಿವಿ ಆವರಣದಿಂದ ತೆರವುಗೊಳಿಸಿ ಬೇರೆಡೆ ಸ್ಥಾಪಿಸ ಬಯಸಿದೆಯೆಂದು ಘಾನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ವಿಗ್ರಹವನ್ನು ಘಾನಾದಿಂದ ಬೇರೆಡೆಗೆ ಸಾಗಿಸಿದರೆ ಸಾಲದು. ಅದನ್ನು ಭಾರತಕ್ಕೆ ಮರಳಿ ಕಳುಹಿಸಬೇಕು. ಘಾನಾದಲ್ಲೆಲ್ಲೂ ಗಾಂಧಿ ಪ್ರತಿಮೆಗೆ ಉತ್ತಮ ಸ್ವಾಗತ ದೊರೆಯಬಹುದೆಂದು ತಾವು ಭಾವಿಸಿಲ್ಲವೆಂದು ಅರ್ಜಿಯ ಸಂಘಟಕರಲ್ಲೊಬ್ಬರಾಗಿರುವ ಒಬಾಡೆಲ್ ಕಂಬೊನ್ ಎಂಬವರು ತಿಳಿಸಿದ್ದಾರೆ.





