ಲವಲವಿಕೆ ಕವಿತೆಯ ಮೂಲ ಉದ್ದೇಶ: ಹಿರೇಮಗಳೂರು ಕಣ್ಣನ್
ಕವನ ವಾಚನ ಕಾರ್ಯಕ್ರಮ

ಚಿಕ್ಕಮಗಳೂರು, ಅ.7: ಕಳೆದು ಹೋದ ಚೈತನ್ಯವನ್ನು ಒಂದು ಕವನ ತಂದು ಕೊಡುತ್ತದೆ. ಕವಿತೆಯ ಮೂಲ ಉದ್ದೇಶವೇ ಲವಲವಿಕೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ತಾಲೂಕು ಕಸಾಪ ರಾಯಭಾರಿ ಹಿರೇಮಗಳೂರು ಕಣ್ಣನ್ ಅಭಿಪ್ರಾಯ ಪಟ್ಟರು.
ನಗರದ ಎಸ್ಟಿಜೆ ಮಹಿಳಾ ಪದವಿ ಕಾಲೇಜಿನಲ್ಲಿ ಶುಕ್ರವಾರ ಚಿಕ್ಕಮಗಳೂರು ತಾಲೂಕು ಕಸಾಪ ವತಿಯಿಂದ ಆಯೋಜಿಸಿದ ವಿದ್ಯಾರ್ಥಿಗಳ ಸ್ವರಚಿತವಾದ ಕವನ ವಾಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್ಟಿಜೆ ಮಹಿಳಾ ಪದವಿ ಕಾಲೇಜು ಪ್ರಾಂಶುಪಾಲೆ ಪ್ರೊ.ಜೆ.ಕೆ. ಭಾರತಿ ಮಾತನಾಡಿ, ಜಗತ್ತಿನಲ್ಲಿ ಕಾಣುವ ಯಾವುದೇ ವಸ್ತುಗಳಿಗೆ, ಕಲ್ಪನೆಗಳಿಗೆ ರೂಪ, ಜೀವ ತುಂಬುವವರೇ ನಿಜವಾದ ಕವಿಗಳು. ನಿರ್ಜೀವ ವಸ್ತುಗಳೊಡನೆ ಸಂವಾದವನ್ನು ಕವಿಗಳು ನಡೆಸುತ್ತಾರೆ ಎಂಬುದಕ್ಕೆ ಕವಿಗಳ ಕವನಗಳು ಸಾಕ್ಷಿಯಾಗಿವೆ ಎಂದು ಉದಾಹರಣೆ ಸಹಿತ ವಿವರಿಸಿದರು.
ವಿದ್ಯಾರ್ಥಿನಿಯರು ರಚಿಸಿದ ಕವನಗಳನ್ನು ಕುರಿತು ವಿಮರ್ಶಿಸಿದ ನಿವೃತ್ತ ಉಪನ್ಯಾಸಕ ಹಾಗೂ ಕವಿ ಎ.ಜಿ. ವಿಶ್ವಮೂರ್ತಿ ಮಾತನಾಡಿ, ಒಂದು ಕವನ ಹೊರ ಬರಬೇಕುಎಂದರೆ ಮೊದಲು ಭಾವನೆಗಳನ್ನು ಮೆಲುಕು ಹಾಕಬೇಕಾಗುತ್ತದೆ. ಭಾವನೆಗಳು, ಘಟನೆಗಳು, ವಸ್ತುಗಳನ್ನು ನೋಡುವ ಆಸಕ್ತಿ ಬೆಳೆಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಪರಿಷತ್ತು ಆಯೋಜಿಸಿದ ಈ ಕಾರ್ಯಕ್ರಮಕ್ಕೆ ನಿರೀಕ್ಷೆ ಮೀರಿದ ಸ್ಪಂದನೆ ವಿದ್ಯಾರ್ಥಿಗಳಿಂದ ವ್ಯಕ್ತವಾಗಿರುವುದು ಮತ್ತಷ್ಟು ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲು ಸ್ಪೂರ್ತಿದೊರೆತಿದೆಂದರು. ಕಾಲೇಜಿನ 57 ವಿದ್ಯಾರ್ಥಿನಿಯರು ವಿವಿಧ ವಿಚಾರಗಳ ಕುರಿತು ಕವನಗಳನ್ನು ರಚಿಸಿದ್ದರು. 57 ಕವನಗಳಲ್ಲಿ ಉತ್ತಮವಾದ 15 ಕವನಗಳನ್ನು ವಾಚನ ಮಾಡಲು ವಿದ್ಯಾರ್ಥಿನಿಯರಿಗೆ ಅವಕಾಶ ಮಾಡಿಕೊಡಲಾಗಿತ್ತು.15 ಕವನಗಳಲ್ಲಿ ಅತ್ಯುತ್ತಮವಾದ ಮೂರು ಕವನಗಳನ್ನು ಆರಿಸಿ ಬಹುಮಾನಗಳನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ತರಳಬಾಳು ಶಿಕ್ಷಣ ಸಂಸ್ಥೆಯ ಕೇಂದ್ರ ಸಮಿತಿ ಸದಸ್ಯ ಎಲ್.ವಿ.ಬಸವರಾಜು ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ 57 ವಿದ್ಯಾರ್ಥಿನಿಯರು ವಿವಿಧ ವಿಚಾರಗಳ ಕುರಿತು ಕವನಗಳನ್ನು ರಚಿಸಿದ್ದರು.
57 ಕವನಗಳಲ್ಲಿ ಉತ್ತಮವಾದ 15 ಕವನಗಳನ್ನು ವಾಚನ ಮಾಡಲು ವಿದ್ಯಾರ್ಥಿನಿಯರಿಗೆ ಅವಕಾಶ ಮಾಡಿಕೊಡಲಾಗಿತ್ತು. ಅತ್ಯುತ್ತಮವಾದ ಮೂರು ಕವನಗಳಿಗೆ ಬಹುಮಾನಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಮಂಜುಳಾ ಹುಲ್ಲಹಳ್ಳಿ, ಪರಿಷತ್ ನಿಕಟ ಪೂರ್ವಅಧ್ಯಕ್ಷ ಬಿ.ಆರ್. ಜಗದೀಶ್, ಗೌರವ ಕೋಶಾಧ್ಯಕ್ಷ ಎಚ್.ಎಸ್. ಜಗದೀಶ್, ನೆಹರು ಯುವ ಕೇಂದ್ರದ ಸಂಯೋಜಕ ಮಂಜುನಾಥ ರಾವ್, ಉಪನ್ಯಾಸಕ ನಾಗೇಶ್, ಸಿದ್ದೇಗೌಡ, ಕೆ.ವಿ.ಶಿವರಾಜ್, ಎಲ್.ಜೆ.ಮಂಜುನಾಥ್, ಜಾಗರ ಹೋಬಳಿ ಅಧ್ಯಕ್ಷ ಕೆ.ವಿ. ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಶಿಲ್ಪಾ ಪ್ರಾರ್ಥಿಸಿದರು. ಉಪನ್ಯಾಸಕ ಹೇಮರಾಜ್ ಸ್ವಾಗತಿಸಿದರು. ವಿದ್ಯಾ ವಂದಿಸಿದರು. ಗೀತಾ ಮತ್ತು ಮಮತ ನಿರೂಪಿಸಿದರು.







