ಉಡುಪಿ ಚಲೋ ನಾನಾ ಕಾರಣಕ್ಕೆ ಮಹತ್ವದ ನಡೆ

ಉಡುಪಿ ಚಲೋ ನಾನಾ ಕಾರಣಕ್ಕೆ ಮಹತ್ವದ ನಡೆ. ಈ ಕಾರಣಕ್ಕಾಗಿ ನಾವೆಲ್ಲ ಅದರ ಆಶಯಗಳ ಜೊತೆಗೆ ಇರಲೇಬೇಕಾಗಿದೆ. ದಂಡಿಯಾತ್ರೆ ವೈ.ಕಂ. ಚಳುವಳಿಯಿಂದ ಮೊದಲುಗೊಂಡು ಇತ್ತೀಚಿನ ಊನಾ ಪ್ರತಿಭಟನೆಯವರೆಗೆ ಭಾರತದಲ್ಲಿ ಸಾಗಿ ಬಂದ ನಾನಾ ಪ್ರತಿಭಟನೆಗಳು, ಪ್ರತಿಪಾದನೆಗಳು ಆಯಾ ಕಾಲಘಟ್ಟದ ಜನರ ಧ್ವನಿಗಳೇ ಆಗಿವೆ. ಇಂತಹ ಲಕ್ಷಾಂತರ ಧ್ವನಿ ಪ್ರತಿಧ್ವನಿಗಳ ಸಾಕಾರ ರೂಪವಾಗಿಯೇ ಭಾರತ ಎಂಬ ಭೂಪಟ ರೂಪುಗೊಂಡು ಅದು ರಾಜಕೀಯ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಗಿರುವುದು.
ಇಲ್ಲಿನ ಭೌಗೋಳಿಕ- ಪ್ರಾಕೃತಿಕ ಶ್ರೀಮಂತಿಕೆಯ ಅನುಕೂಲಕರ ವಾತಾವರಣ ಈ ನೆಲದ ಸರ್ವರನ್ನೂ ಉತ್ತಮ ಬದುಕಿನೆಡೆಗೆ ಕೊಂಡೊಯ್ಯಲ್ಪಡುವ ಅವಕಾಶವನ್ನು ತೆರೆದಿದ್ದರೂ ಸ್ವತಂತ್ರ ಭಾರತದ ಎಪ್ಪತ್ತು ವರ್ಷಗಳ ಪ್ರಯಾಣ ಈ ಸಾಧ್ಯತೆಗಳ ದಾರಿಗಳನ್ನು ಇಲ್ಲಿನ ಬಹುಪಾಲು ಜನರಿಗೆ ಮುಚ್ಚಿರುವುದರಿಂದ “ಉಡುಪಿ ಚಲೋ”ದಂತಹ ನದಿಗಳು ಸಾಗರದೆಡೆಗೆ ಪಯಣಿಸಲೇಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.
ಉಡುಪಿ ಅಥವಾ ಈ ಹಿಂದಿನ ದ.ಕನ್ನಡ ಜಿಲ್ಲೆ, ಸಂಘಟಿತ-ಶ್ರಮಜೀವಿ ಬದುಕಿಗೆ, ಜಾಣ್ಮೆಗೆ, ಮೇಧಾವಿತನಕ್ಕೆ ಹೆಸರಾದ ಪ್ರದೇಶ. ರಾಜ್ಯಕ್ಕೆ ಮಾದರಿಯಾಗಬೇಕಿದ್ದ ಈ ಜಿಲ್ಲೆ ಇದೀಗ ಕರಾಳ ಕೋಮುವಾದಿಕರಣದ ಪ್ರಯೋಗ ಶಾಲೆಯಾಗಿ ರೂಪಾಂತರಗೊಂಡಿರುವುದು ದುರಂತ. ಈ ಹಿನ್ನಲೆಯಲ್ಲಿ ಉಡುಪಿ ಕಡೆ ಸಾಗಿರುವ ಜನಾಂದೋಲನ ಜಾಥಾ ರಾಜ್ಯದ ಎಚ್ಚೆತ್ತ ಮನಸ್ಸುಗಳ ಸಂದೇಶ ಯಾತ್ರೆಯಂತೆಯೇ ಕಂಡು ಬರುತ್ತದೆ. ನಾನಾ ಭಾಷೆ, ಧರ್ಮ, ಸಂಸ್ಕೃತಿಗಳ ತವರಾದ ಭಾರತದ ಏಕತೆ- ರಕ್ಷಣೆಗೆ ಭದ್ರ ಬುನಾದಿಯಂತೆ ಡಾ! ಬಿ.ಆರ್. ಅಂಬೇಡ್ಜರ್ ಅವರು ಸಂವಿಧಾನ ನೀಡಿದ್ದರೂ ದೇಶದ ರಾಜಕೀಯ, ಆರ್ಥಿಕ ನಡೆ ಇದರ ಆಶಯವನ್ನೇ ಬುಡಮೇಲು ಮಾಡುವಂತೆ ಕಂಡುಬರುತ್ತಿದೆ. ಇದಕ್ಕೆ ಇತ್ತಿಚಿಗೆ ಘಟಿಸುತ್ತಿರುವ ಘಟನೆಗಳೇ ಸಾಕ್ಷಿ.
ಹಣ-ಅಧಿಕಾರ ಇವು ಕೇವಲ ಕೆಲವು ಮೇಲ್ವರ್ಗದವರ ಸ್ವತ್ತಾಗಿ ಬಹುಪಾಲು ಜನರು ತುತ್ತು ಅನ್ನಕ್ಕೂ ಪರದಾಡುವಂತಾಗಿರುವುದೇ ಆಕ್ರೋಶಕ್ಕೆ ದಾರಿ ಮಾಡಿರುವುದರಲ್ಲಿ ಅನುಮಾನವಿಲ್ಲ. ಪರಿಸ್ಥಿತಿ ಕೈ ಮೀರುವುದನ್ನು ಅರಿತ ಆಳುವ ವರ್ಗ ಸಮಸ್ಯೆ ಪರಿಹಾರಕ್ಕೆ ಮುಂದಾಗುವ ಬದಲು ಜನರನ್ನು ಭಾವನಾತ್ಮಕವಾಗಿ, ಭ್ರಮಾಲೋಕದಲ್ಲಿ ತೇಲಾಡುವ ಕನಸಿನ ಲೋಕಕ್ಕೆ ಕರೆದೊಯ್ಯುವ ನಾನಾ ಕಸರತ್ತು ನಡೆಸಿದೆ. ನೊಂದ-ಬೆಂದ ದಮನಿತ ಜನಸಮುದಾಯದ ಐಕ್ಯತೆಯನ್ನು ಮುರಿಯಲೆಂದೇ ನಾನಾ ಒಳಮಾರ್ಗಗಳನ್ನು ರೂಪಿಸುತ್ತಿದೆ. ಅದರ ಭಾಗವಾಗಿಯೇ ಈ ನೆಲದ ಮೂಲವಾಸಿ , ಶೂದ್ರ-ದಲಿತ ಸಮುದಾಯದ ಭಾಷೆ-ಸಂಸ್ಕೃತಿ-ಆಹಾರ-ನಂಬಿಕೆಗಳ ಮೇಲೆ ನೇರ ದಾಳಿ ನಡೆಸಿದೆ. ಸಹಜವಾಗಿಯೇ ನೊಂದ ಜನರೊಂದಿಗೆ ಗುರುತಿಸಿಕೊಂಡಿರುವ ಅಲ್ಪಸಂಖ್ಯಾತ ಸಮುದಾಯವನ್ನು ‘ದೇಶದ್ರೋಹಿ’ ಗಳಂತೆ ಪ್ರತಿಬಿಂಬಿಸಲಾಗುತ್ತಿದೆ. ಇಲ್ಲಿನ ಮಾಧ್ಯಮ, ಪ್ರಚಾರ ಸಾದನೆಗಳನ್ನು ಯಶಸ್ವಿಯಾಗಿಯೇ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಹೌದು! ಸುತ್ತಿಬಳಸಿ ಮಾತನಾಡುವ ಅಗತ್ಯವೇ ಇಲ್ಲ. ‘ಉಡುಪಿ ಚಲೋ’ ಶೂದ್ರಾತಿಶೂದ್ರ ಜನರ ಮೇಲೆ ನಡೆಸುತ್ತಿರುವ ಹಲ್ಲೆ, ದೌರ್ಜನ್ಯ ಕೊನೆಗೊಳಿಸುವ ನಮ್ಮ ಆಹಾರ ಸಂಸ್ಕೃತಿ ರಕ್ಷಣೆಯ ನಮ್ಮ ಐಕ್ಯತೆಯನ್ನು ಮುರಿಯುವ ಪಿತೂರಿಯನ್ನು ಬಯಲುಮಾಡುವ ಜಾಗೃತಿಯ ನಡೆಯೆಂದೇ ಬಹಿರಂಗವಾಗಿ ಸಾರಬೇಕಾಗಿದೆ. ಇದು ಭುಮಿಯವರೆಗೆ ಬಾಗಿದ ನೊಂದ ಜನರು ಸೆಟೆದು ನಿಲ್ಲುವ ಪ್ರಯತ್ನದ ಭಾಗ. ಬಹುಪಾಲು ಜನರ ಆಹಾರ, ಬದುಕು ರಕ್ಷಣೆಗೆ ಮೊಳಗಿರುವ ಜಾಗೃತಿ ಜನರ ಸ್ವಾಭಿಮಾನಿ ಹೆಜ್ಜೆಯೆಂದೇ ಹೇಳಬಹುದು. ನೊಂದವರ ಒಗ್ಗಟ್ಟು ಸಾಕಾರವಾಗಲು ಅವರ ರಾಜಕೀಯ-ಆರ್ಥಿಕ ಸ್ಥಿತಿ ಬದಲಾಗಲು ಸ್ವಾಭಿಮಾನಿ ಧ್ವನಿಗಳು ಗಟ್ಟಿಯಾಗುವುದು ಅನಿವಾರ್ಯ. ಅಂತಿಮವಾಗಿ ಇದು ನಿಜವಾದ ಸಂವಿಧಾನದ ರಕ್ಷಣೆಯೂ ಹೌದು.
-ಡಾ. ಲೀಲಾ ಸಂಪಿಗೆ.
(ಮಾಹಿತಿ ಸಂಗ್ರಹ: ರುಕ್ಮಿಣಿ ಎನ್.)







