ಸ್ವಾರ್ಥರಹಿತ ಜನನಾಯಕ ಕಾಮರಾಜ್
![ಸ್ವಾರ್ಥರಹಿತ ಜನನಾಯಕ ಕಾಮರಾಜ್ ಸ್ವಾರ್ಥರಹಿತ ಜನನಾಯಕ ಕಾಮರಾಜ್](https://www.varthabharati.in/sites/default/files/images/articles/2016/10/10/kamaraj.jpg)
60ರ ದಶಕದಲ್ಲಿ ಭಾರತ ಎದುರಿಸಿದ ಮೂರು ಯುದ್ದಗಳ ಸಂದರ್ಭಗಳಲ್ಲೂ ಕಾಮರಾಜರು ರಾಷ್ಟ್ರರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ನಿಧನರಾದಾಗ ಸಹಜವಾಗಿ ದೇಶದ ಪ್ರಮುಖ ಹುದ್ದೆಗೆ ಕಾಮರಾಜರ ಹೆಸರು ಕೇಳಿ ಬಂದಿತ್ತು. ಆದರೆ ಅಧಿಕಾರದ ಬೆನ್ನು ಹತ್ತಿ ಹೋದವರಲ್ಲ ಕಾಮರಾಜರು. ಪ್ರಧಾನಿ ಹುದ್ದೆಗೆ ಲಾಲ್- ಬಹಾದ್ದೂರ್ ಶಾಸ್ತ್ರಿಯವರ ಹೆಸರನ್ನು ಸೂಚಿಸಿದರು. ಶಾಸ್ತ್ರಿಯವರು ನಿಧನರಾದಾಗಲೂ ಕಾಮರಾಜರಿಗೆ ಪ್ರಧಾನಿಯಾಗುವ ಅವಕಾಶ ಒದಗಿ ಬಂದಿತ್ತು. ಆದರೆ ಈ ಸಂದರ್ಭವೂ ಕಾಮರಾಜರು ಇಂದಿರಾ ಗಾಂಧಿಯವರ ಹೆಸರು ಸೂಚಿಸಿದರು. ಹೀಗೆ ಸದಾ ‘ಕಿಂಗ್ಮೇಕರ್’ ಆಗಿಯೇ ಉಳಿದರು.
ಬಡ ಕುಟುಂಬದಲ್ಲಿ ಜನನ, ಆರನೇ ತರಗತಿವರೆಗೆ ಶಿಕ್ಷಣ. ಬ್ರಿಟಿಷರ ದಬ್ಬಾಳಿಕೆ ವಿರೋಧಿಸಿ ಸ್ವಾತಂತ್ರ ಹೋರಾಟದಲ್ಲಿ ಭಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷರಾಗಿ, ಬಳಿಕ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಯ್ಕೆ, ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿ... ಇದು ಮಹಾನ್ ಜನನಾಯಕ ಕಾಮರಾಜ್ ಅವರ ಸಂಕ್ಷಿಪ್ತ ಬಯೋಡೇಟಾ.
1903ರ ಜುಲೈ 15ರಂದು ಬಡ ಕುಟುಂಬದಲ್ಲಿ ಜನಿಸಿದ ಕುಮಾರಸಾಮಿ ಕಾಮರಾಜ್ ಅವರ ತಂದೆ ಮೂರ್ತೆದಾರಿಕೆ ವೃತ್ತಿ (ಸೇಂದಿ ಇಳಿಸುವ ವೃತ್ತಿ) ನಡೆಸುತ್ತಿದ್ದರು. ಈ ವೃತ್ತಿ ನಡೆಸುವವರನ್ನು (ನಾಡಾರ್ ಸಮುದಾಯ) ಅಂದಿನ ದಿನದಲ್ಲಿ ಅಸ್ಪಶ್ಯರು ಎಂದು ಪರಿಗಣಿಸಲಾಗುತ್ತಿತ್ತು. 6ನೆ ತರಗತಿಯಲ್ಲಿದ್ದಾಗ ತಂದೆ ನಿಧನರಾದರು. ಕುಟುಂಬ ನಿರ್ವಹಿಸುವ ಹೊಣೆ ಕಾಮರಾಜ್ ಹೆಗಲ ಮೇಲೆ ಬಿದ್ದಾಗ ಅನಿವಾರ್ಯವಾಗಿ ಓದಿಗೆ ತಿಲಾಂಜಲಿ ನೀಡಿ, ದುಡಿಮೆಗೆ ತೊಡಗಿದರು. ಜಲಿಯನ್ವಾಲಾ ಭಾಗ್ನಲ್ಲಿ 1919ರಲ್ಲಿ ಬ್ರಿಟಿಷರು ಭಾರತೀಯರ ಮೇಲೆ ದೌರ್ಜನ್ಯ ನಡೆಸಿದ ಘಟನೆಯಿಂದ ಆಘಾತಗೊಂಡ ಕಾಮರಾಜ್ ಸ್ವಾತಂತ್ರ ಚಳವಳಿಗೆ ದುಮುಕಿದರು. ಆಗಿನ್ನೂ ಅವರ ಪ್ರಾಯ ಕೇವಲ 16 ವರ್ಷ. ಪೆರಿಯಾರ್ ಇ.ವಿ.ರಾಮಸ್ವಾಮಿ ಅವರು ಕಾಮರಾಜರ ಮೊದಲ ರಾಜಕೀಯ ಗುರು. ಚತುರ ಸಂಘಟಕರಾಗಿದ್ದ ಕಾಮರಾಜರು ತಮ್ಮ ಸ್ವಸಾಮರ್ಥ್ಯದಿಂದ ಹಂತಹಂತವಾಗಿ ಮೇಲಕ್ಕೇರಿದರು. ಖ್ಯಾತ ಸ್ವಾತಂತ್ರಹೋರಾಟಗಾರ ಸುಂದರಶಾಸ್ತ್ರಿ ಸತ್ಯಮೂರ್ತಿ ಅವರ ಭಾಷಣದಿಂದ ಪ್ರೇರಣೆಗೊಂಡ ಕಾಮರಾಜ್ ಮುಂದಿನ ದಿನಗಳಲ್ಲಿ ಸ್ವಾತಂತ್ರಹೋರಾಟಗಾರರ ಸಭೆಗಳಿಗೆ ಜನರನ್ನು ಸಂಘಟಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಿದರು. ಈತನ ಚುರುಕುತನ, ನಿಸ್ವಾರ್ಥ ಕಾರ್ಯವನ್ನು ಶ್ಲಾಘಿಸಿದ ಸುಂದರಶಾಸ್ತ್ರಿ ಅವರು ಕಾಮರಾಜರನ್ನು ತನ್ನ ಬಳಗಕ್ಕೆ ಸೇರಿಸಿಕೊಂಡರು. ಮುಂದಿನ ದಿನಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ತಮಿಳ್ನಾಡು ಘಟಕದ ಅಧ್ಯಕ್ಷರಾದರು.
ತಮಿಳ್ನಾಡಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಸಶಕ್ತಗೊಳಿಸಿದ ಕಾಮರಾಜರು ಗಾಂಧೀಜಿಯರ ಕರೆಗೆ ಓಗೊಟ್ಟು ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದರು. ಹೀಗೆ ಹಲವಾರು ಬಾರಿ ಸೆರೆವಾಸ ಅನುಭವಿಸಿದ ಕಾಮರಾಜರು 1933ರಲ್ಲಿ ವಿರುಧಾನಗರದಲ್ಲಿ ನಡೆದ ಬಾಂಬ್ಸ್ಫೋಟ ಪ್ರಕರಣದಲ್ಲಿ ಪ್ರಧಾನ ಆರೋಪಿಯೆಂದು ಹೆಸರಿಸಲ್ಪಟ್ಟಿದ್ದರು. ಆದರೆ ಬಳಿಕ ಇವರು ನಿರ್ದೋಷಿಯೆಂದು ಸಾಬೀತಾಯಿತು.
1937ರಲ್ಲಿ ಮದ್ರಾಸ್ ವಿಧಾನಸಭಾ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾದ ಕಾಮರಾಜರನ್ನು 1940ರಲ್ಲಿ ಸತ್ಯಾಗ್ರಹ ಚಳವಳಿಯಲ್ಲಿ ಪಾಲ್ಗೊಂಡ ಆರೋಪದಡಿ ಬ್ರಿಟಿಷರು ಬಂಧಿಸಿ ಸೆರೆಯಲ್ಲಿಟ್ಟರು. ಸೆರೆಯಲ್ಲಿದ್ದಾಗಲೇ ವಿರುಧಾನಗರ್ ಮುನಿಸಿಪಲ್ ಕೌನ್ಸಿಲ್ನ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ ಸೆರೆಯಿಂದ ಬಿಡುಗಡೆಯಾದ ಬಳಿಕ ಇವರು ಮಾಡಿದ ಮೊದಲ ಕೆಲಸವೆಂದರೆ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದ್ದು. ಓರ್ವ ವ್ಯಕ್ತಿ ಜವಾಬ್ದಾರಿ ಹೊರಲು ಸಾಧ್ಯವಾಗದು ಎಂದಾದರೆ ಆತ ರಾಜೀನಾಮೆ ನೀಡುವುದು ಒಳಿತು ಎಂದು ಈ ಸಂದರ್ಭದಲ್ಲಿ ಕಾಮರಾಜರು ಹೇಳಿದ್ದರು.
ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಕಾಮರಾಜರು ಪ್ರಮುಖ ಪಾತ್ರ ವಹಿಸಿದ್ದರು. ಮದ್ರಾಸ್ ಪ್ರೆಸಿಡೆನ್ಸಿಯ ಅಸೆಂಬ್ಲಿಗೆ 1937 ಮತ್ತು 1946ರಲ್ಲಿ ಆಯ್ಕೆಯಾದರು. 1947ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದರು. ಶೀಘ್ರ ಸ್ವತಂತ್ರಗೊಳ್ಳಲಿರುವ ಭಾರತದ ಸಂವಿಧಾನವನ್ನು ರಚಿಸುವ ಹೊಣೆ ನಿಭಾಯಿಸಿದರು. 1951ರಲ್ಲಿ ಪ್ರಪ್ರಥಮ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಗೆದ್ದರು.
1954ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ 10 ವರ್ಷ ಆಡಳಿತ ನಡೆಸಿದರು. ಇವರ ಆಡಳಿತಾವಧಿಯಲ್ಲಿ ತಮಿಳುನಾಡು ಔದ್ಯೋಗಿಕ ಮತ್ತು ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿತು. ಮದ್ರಾಸಿನ ಹೊರಭಾಗದಲ್ಲಿ ನಿರ್ಮಿಸಲಾದ ಕೈಗಾರಿಕಾ ಪ್ರಾಂಗಣ (ಇಂಡಸ್ಟ್ರಿಯಲ್ ಎಸ್ಟೇಟ್) ಅಂದಿನ ದಿನದಲ್ಲಿ ಏಷ್ಯಾದಲ್ಲೇ ಅತ್ಯಂತ ಬೃಹತ್ ಕೈಗಾರಿಕಾ ಪ್ರಾಂಗಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. 60ರ ದಶಕದಲ್ಲಿ ಭಾರತ ಎದುರಿಸಿದ ಮೂರು ಯುದ್ದಗಳ ಸಂದರ್ಭಗಳಲ್ಲೂ ಕಾಮರಾಜರು ರಾಷ್ಟ್ರರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ನಿಧನರಾದಾಗ ಸಹಜವಾಗಿ ದೇಶದ ಪ್ರಮುಖ ಹುದ್ದೆಗೆ ಕಾಮರಾಜರ ಹೆಸರು ಕೇಳಿ ಬಂದಿತ್ತು. ಆದರೆ ಅಧಿಕಾರದ ಬೆನ್ನು ಹತ್ತಿ ಹೋದವರಲ್ಲ ಕಾಮರಾಜರು. ಪ್ರಧಾನಿ ಹುದ್ದೆಗೆ ಲಾಲ್- ಬಹಾದ್ದೂರ್ ಶಾಸ್ತ್ರಿಯವರ ಹೆಸರನ್ನು ಸೂಚಿಸಿದರು. ಶಾಸ್ತ್ರಿಯವರು ನಿಧನರಾದಾಗಲೂ ಕಾಮರಾಜರಿಗೆ ಪ್ರಧಾನಿಯಾಗುವ ಅವಕಾಶ ಒದಗಿ ಬಂದಿತ್ತು. ಆದರೆ ಈ ಸಂದರ್ಭವೂ ಕಾಮರಾಜರು ಇಂದಿರಾ ಗಾಂಧಿಯವರ ಹೆಸರು ಸೂಚಿಸಿದರು. ಹೀಗೆ ಸದಾ ‘ಕಿಂಗ್ಮೇಕರ್’ ಆಗಿಯೇ ಉಳಿದರು. ಶಿಕ್ಷಣದ ಮಹತ್ವ ಅರಿತಿದ್ದ ಕಾಮರಾಜರು ರಾಜ್ಯದ 17 ಸಾವಿರ ಗ್ರಾಮಗಳಲ್ಲಿ ಗಣತಿ ಕಾರ್ಯ ನಡೆಸಿದಾಗ ಸುಮಾರು 6 ಸಾವಿರ ಗ್ರಾಮಗಳಲ್ಲಿ ಶಾಲೆಗಳೇ ಇಲ್ಲ ಎಂಬ ವಾಸ್ತವಾಂಶ ಬೆಳಕಿಗೆ ಬಂದಿತು. ಈ ಗ್ರಾಮಗಳಲ್ಲಿ ಪ್ರಾಥಮಿಕ ಶಾಲೆ ಆರಂಭಿಸಲು ಕ್ರಮ ಕೈಗೊಂಡರು. ತೀರಾ ಗ್ರಾಮೀಣ ಪ್ರದೇಶಗಳಲ್ಲಿ ಏಕೋಪಾಧ್ಯಾಯ ಶಾಲೆಗಳನ್ನು ಆರಂಭಿಸಿದ ಕೀರ್ತಿ ಕಾಮರಾಜರದ್ದು. ಮಕ್ಕಳು ಶಾಲೆಗೆ ಹೋಗದಿದ್ದರೆ ಶಾಲೆಯೇ ಮಕ್ಕಳ ಬಳಿ ಬರಬೇಕು ಎಂಬುದು ಕಾಮರಾಜರ ಧ್ಯೇಯವಾಕ್ಯವಾಗಿತ್ತು. ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟದ ಯೋಜನೆ ಜಾರಿಗೆ ತಂದರು.
ಕಾಮರಾಜ ಯೋಜನೆ: ಭಾರತದ ಇತಿಹಾಸದಲ್ಲೇ ಅತ್ಯಂತ ಅಪರೂಪ ಮತ್ತು ಮಾದರಿ ಯೋಜನೆ ಎಂದು ಹೆಸರಾಗಿದೆ ಕಾಮರಾಜ ಯೋಜನೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ರಾಜಕೀಯವಾಗಿ ರಾಜ್ಯದಲ್ಲಿ ಪಕ್ಷ ಬಲಹೀನವಾಗುತ್ತಿದೆ ಎಂದು ತಿಳಿಯುತ್ತಿರುವಂತೆಯೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಪಕ್ಷ ಸಂಘಟಿಸುವ ಕಾರ್ಯಕ್ಕೆ ಇಳಿದರು. ತಮ್ಮ ಸಚಿವ ಸಂಪುಟದ ಇತರ ಪ್ರಭಾವೀ ನಾಯಕರೂ ಇದೇ ರೀತಿ ಮಾಡುವಂತೆ ಪ್ರೇರೇಪಿಸಿದರು.
ಬ್ರಹ್ಮಚಾರಿಯಾಗಿಯೇ ಉಳಿದ ಕಾಮರಾಜರು ಸರಳ ಜೀವನ ನಡೆಸಿದರು. ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಇವರ ತಾಯಿ ಹಳ್ಳಿಯಲ್ಲಿ ಜೀವನ ನಡೆಸುತ್ತಿದ್ದರು. 1975ರ ಅಕ್ಟೋಬರ್ 2ರಂದು ತಮ್ಮ 72ನೇ ವಯಸ್ಸಿನಲ್ಲಿ ಕಾಮರಾಜರು ನಿಧನರಾದರು. ಕೆಲವು ನೂರು ರೂಪಾಯಿಗಳು, ಎರಡು ಧೋತಿಗಳು ಮತ್ತು ಖಾದಿ ಜುಬ್ಬಾ... ಇವಿಷ್ಟೇ ಅವರ ಬಳಿಯಿದ್ದ ಆಸ್ತಿಗಳು. ಇವರ ಸ್ಮರಣಾರ್ಥ ಮದ್ರಾಸಿನಲ್ಲಿ ಒಂದು ಪ್ರತಿಮೆ ಇದೆ. ಈ ಪ್ರತಿಮೆಯ ವೈಶಿಷ್ಟವೆಂದರೆ ಕಾಮರಾಜರು ಒಂದು ಕೈಯಲ್ಲಿ ಒಬ್ಬ ಬಾಲಕನ್ನು ಇನ್ನೊಂದು ಕೈ ಓರ್ವ ಬಾಲಕಿಯನ್ನು ಹಿಡಿದಿದೆ. ಕಾಮರಾಜರಿಗೆ ಮಕ್ಕಳ ಮೇಲಿದ್ದ ಅಪಾರ ವಾತ್ಸಲ್ಯದ ಪ್ರತೀಕವಾಗಿದೆ ಈ ಪ್ರತಿಮೆ.