ಯು.ಟಿ.ಖಾದರ್ ಜನ್ಮದಿನಕ್ಕೆ ಅಲ್ಲಲ್ಲಿ ಸೇವಾ ಕಾರ್ಯಕ್ರಮ
ಮಂಗಳೂರು,ಅ.11:ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಯು.ಟಿ. ಖಾದರ್ ಅವರಿಗೆ ಅಕ್ಟೋಬರ್ 12 ಬುಧವಾರ 47 ವರ್ಷ ತುಂಬಲಿದ್ದು, 48 ನೇ ಹರೆಯಕ್ಕೆ ಕಾಲಿಡುವ ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳು ಸೇವಾ ಕಾರ್ಯಕ್ರಮಕ್ಕೆ ಸಜ್ಜಾಗಿವೆ.
ಪ್ರಸಾದ್ ನೇತ್ರಾಲಯ ಉಡುಪಿ ಹಾಗೂ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ನಡುಪದವು, ಪಟ್ಟೋರಿ ಸಹಯೋಗದಲ್ಲಿ ಬೆಳಿಗ್ಗೆ 10 ಗಂಟೆಗೆ ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಉಚಿತ ಕನ್ನಡಕ ವಿತರಣೆ, 11 ಗಂಟೆಗೆ ಕೋಣಾಜೆ ಅಸೈಗೋಳಿ ಅಭಯಾಶ್ರಮದಲ್ಲಿ ಯು.ಟಿ.ಖಾದರ್ ಅಭಿಮಾನಿಗಳ ವತಿಯಿಂದ ಆಶ್ರಮವಾಸಿಗಳಿಗೆ ಉಚಿತ ವಸ್ತ್ರ ವಿತರಣೆ ಹಾಗೂ ಅವರೊಂದಿಗೆ ಭೋಜನ ಕೂಟ, ಮಧ್ಯಾಹ್ನ 1 ಗಂಟೆಗೆ ಹೆಲ್ಪ್ ಫೌಂಡೇಶನ್ ವತಿಯಿಂದ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮಾನಸಿಕ ಅಸ್ವಸ್ಥ ವಿಭಾಗದ ರೋಗಿಗಳೊಂದಿಗೆ ಯು.ಟಿ. ಖಾದರ್ ಹುಟ್ಟುಹಬ್ಬ ಆಚರಿಸುವರು. ಇವುಗಳಲ್ಲದೆ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಯು.ಟಿ. ಖಾದರ್ ಹಿತೈಷಿಗಳು, ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮ ಆಚರಿಸಲಿದ್ದಾರೆ.