ಸರಕಾರದ ಯೋಜನೆಗಳು ಅರ್ಹರಿಗೆ ತಲುಪಲಿ: ಕಾವೇರಮ್ಮ
ಮಾಹಿತಿ ಮಳಿಗೆ ಉದ್ಘಾಟನೆ

ಮಡಿಕೇರಿ, ಅ.11: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ 1ನೆ ತರಗತಿಯ ಮಕ್ಕಳಿಗೆ ಪ್ರತಿ ದಿನದ ಶಾಲಾ ಹಾಜರಾತಿಗೆ 2 ರೂ. ಪ್ರೋತ್ಸಾಹ ಧನ ವಿದ್ಯಾರ್ಥಿಗಳಿಗೆ ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲುಚೀಲ, ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ 150 ಮಿ.ಲೀ. ಉಚಿತ ಬಿಸಿ ಹಾಲು, ಅನ್ನಭಾಗ್ಯ ಯೋಜನೆಯಡಿ ಉಚಿತ ಆಹಾರಧಾನ್ಯ ಹಾಗೂ ಕಡಿಮೆ ದರದಲ್ಲಿ ತಾಳೆ ಎಣ್ಣೆ ವಿತರಣೆ, ಕ್ಷೀರಧಾರೆಯಡಿ ಸಹಕಾರಿ ಹೈನುಗಾರಿಕೆ ಪ್ರತಿ ಲೀಟರ್ ಹಾಲಿಗೆ 4 ರೂ. ಪ್ರೋತ್ಸಾಹ ಧನ ಹೀಗೆ ಸರಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಬಡವರ ಕಲ್ಯಾಣಕ್ಕಾಗಿ ಜಾರಿಗೊಳಿಸಿದ್ದು, ಅರ್ಹರಿಗೆ ತಲುಪುವಂತಾಗಬೇಕೆಂದು ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹೇಳಿದ್ದಾರೆ.
ಅವರು ದಸರಾ ಉತ್ಸವದ ಹಿನ್ನೆಲೆಯಲ್ಲಿ ಸರಕಾರದ ವಿವಿಧ ಕಾರ್ಯಕ್ರಮಗಳನ್ನು ಒಳಗೊಂಡ ಮಾಹಿತಿ ಮಳಿಗೆಯನ್ನು ಗಾಂಧಿ ಮೈದಾನದಲ್ಲಿ ಉದ್ಘಾಟಿಸಿ ಮಾತನಾಡಿದರು. ಕೃಷಿ ಭಾಗ್ಯದಡಿ ಒಣಭೂಮಿ ಬೇಸಾಯಕ್ಕೆ ಒತ್ತಾಸೆ, ಕೃಷಿ ಹೊಂಡಗಳ ನಿರ್ಮಾಣ, ಕೃಷಿಕರಿಗೆ ಕಡಿಮೆ ಬಾಡಿಗೆಗೆ ಕೃಷಿ ಯಂತ್ರೋಪಕರಣಗಳ ವಿತರಣೆ ಹೀಗೆ ಸರಕಾರದ ಹಲವು ಕಾರ್ಯಕ್ರಮಗಳನ್ನು ಅರ್ಹರು ಪಡೆದುಕೊಳ್ಳುವಂತಾಗಬೇಕು ಎಂದು ಕಾವೇರಮ್ಮ ಸೋಮಣ್ಣ ತಿಳಿಸಿದರು. ಶುದ್ಧ ಕುಡಿಯುವ ನೀರು ಘಟಕಗಳ ಸ್ಥಾಪನೆ, ಘಟಕಗಳ ಕಾರ್ಯಾರಂಭಗಳ ವಿವರ, ನಿರ್ಮಲ ಭಾಗ್ಯದಡಿ ವೈಯಕ್ತಿಕ ಶೌಚಾಲಯ ಹಾಗೂ ಸ್ನಾನಗೃಹ ಸಹಿತ ಶೌಚಾಲಯ ನಿರ್ಮಾಣ, ವಿದ್ಯಾಸಿರಿಯಡಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಊಟ ವಸತಿ ಸಹಾಯ ಯೋಜನೆ, ಪ್ರತಿ ತಿಂಗಳು 1,500 ರೂ. ಗಳಂತೆ ಹತ್ತು ತಿಂಗಳು ವಿದ್ಯಾರ್ಥಿ ಖಾತೆಗೆ ಹಣ ಜಮೆ ಹೀಗೆ ಹಲವು ಕಾರ್ಯಕ್ರಮಗಳ ಮಾಹಿತಿ ಒಳಗೊಂಡಿರುವುದು ವಿಶೇಷವಾಗಿದೆ ಎಂದರು. ಈ ಸಂದರ್ಭದಲ್ಲಿ ವಾರ್ತಾಧಿಕಾರಿ ಚಿನ್ನಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ವಿಭಾಗಾಧಿಕಾರಿ ಡಾ.ನಂಜುಂಡೇ ಗೌಡ, ನಗರಸಭೆ ಸದಸ್ಯರಾದ ಚುಮ್ಮಿ ದೇವಯ್ಯ, ಲಕ್ಷ್ಮೀ, ಅನಿತಾ ಪೂವಯ್ಯ, ಪೌರಾಯುಕ್ತೆ ಬಿ.ಬಿ.ಪುಷ್ಪಾವತಿ ಮತ್ತಿತರರು ಹಾಜರಿದ್ದರು.







