ಕಡೆಗಣಿಸಿದರೆ ಆತಂಕ ನಿಶ್ಚಿತ: ಸಾಲುಮರದ ತಿಮ್ಮಕ್ಕ
‘ಕಾವೇರಿ ಸಂರಕ್ಷಿಸಿ’ ಲಕ್ಷ ಅಂಚೆ ಕಾರ್ಡ್ ಚಳವಳಿಗೆ ಚಾಲನೆ

ಕುಶಾಲನಗರ, ಅ. 11: ನದಿ ನೀರಿನ ವಿವಾದ ಳ ನಡುವೆ ಸರಕಾರಗಳು ಜೀವನದಿ ಕಾವೇರಿ ಜಲ ಮೂಲಗಳ ಸಂರಕ್ಷಣೆ ಬಗ್ಗೆ ತಕ್ಷಣ ಗಮನಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಆತಂಕ ಎದುರಿಸಬೇಕಾಗುತ್ತದೆ ಎಂದು ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಎಚ್ಚರಿಸಿದ್ದಾರೆ.
ನಗರದ ಸರಕಾರಿ ಬಸ್ ನಿಲ್ದಾಣದ ಆವರಣದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ನಡೆದ ‘ಕಾವೇರಿ ಸಂರಕ್ಷಿಸಿ’ 1 ಲಕ್ಷ ಅಂಚೆ ಕಾರ್ಡ್ ಚಳವಳಿಗೆ ಹೆಬ್ಬೆಟ್ಟು ಗುರುತು ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ನದಿ ಮೂಲಗಳಲ್ಲಿ ಪರಿಸರ ಸಂರಕ್ಷಣೆಯಾ ಗಬೇಕಾಗಿದೆ. ಈ ಮೂಲಕ ಮಾತ್ರ ನೀರಿನ ಕೊರತೆ ನೀಗಿಸಲು ಸಾಧ್ಯ. ನದಿ ತಟಗಳ ರಕ್ಷಣೆಯೊಂದಿಗೆ ಜಲಸಂರಕ್ಷಣೆಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಆದ್ಯತೆ ನೀಡಬೇಕು ಎಂದು ತಿಮ್ಮಕ್ಕ ಮನವಿ ಮಾಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ, ಎಂ.ಎನ್. ಚಂದ್ರಮೋಹನ್, ಕಾವೇರಿ ನದಿ ಸಂರಕ್ಷಣೆಯ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಲು ಇತ್ತೀಚೆಗೆ ಕೇಂದ್ರ ಜಲ ಆಯೋಗದ ತಜ್ಞರ ಮೂಲಕ ಪ್ರಧಾನಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ನಾಡಿನ ಜನತೆಯಿಂದ 1 ಲಕ್ಷ ಅಂಚೆ ಕಾರ್ಡ್ ಮೂಲಕ ಪ್ರಾರ್ಥನಾ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಮನವಿ ಮಾಡಿದರು.
ಈ ಸಂದರ್ಭ ಉಪಸ್ಥಿತರಿದ್ದ ತಿಮ್ಮಕ್ಕನವರ ಮಗ ಉಮೇಶ್ ಮಾತನಾಡಿ, ನದಿ ಸಂರಕ್ಷಣೆಯ ನಿಟ್ಟಿನಲ್ಲಿ ತಿಮ್ಮಕ್ಕನವರ ನೇತೃತ್ವದಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ರಾಜ್ಯಪಾಲರ ಬಳಿ ನಿಯೋಗ ತೆರಳಲು ಸಮಿತಿಗೆ ಎಲ್ಲಾ ರೀತಿಯ ಸಹಯೋಗ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನದಿ ಸ್ವಚ್ಛತಾ ಸಮಿತಿ, ಕರ್ನಾ ಟಕ ರಕ್ಷಣಾ ವೇದಿಕೆ, ವಾಸವಿ ಯುವಜನ ಸಂಘ, ನಗರ ಬಿಜೆಪಿ ಘಟಕ ವತಿಯಿಂದ ವೃಕ್ಷಮಾತೆ ಶತಾ ಯುಷಿ ಸಾಲುಮರದ ತಿಮ್ಮಕ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಾಗರಿಕ ಹಕ್ಕುಗಳ ರಕ್ಷಣಾ ವೇದಿಕೆಯ ಅಧ್ಯಕ್ಷ ಸಿರಿಗೆರೆ ತಿಪ್ಪೇಶ್, ಬೆಂಗಳೂರು ಪರಿಸರ ಸಂರಕ್ಷಣಾ ಸಮಿತಿಯ ಸುನಿತಾ, ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಶಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ, ಕೆ.ಜಿ. ಮನು, ಯುವಮೋರ್ಚಾ ತಾ.ಪ್ರ.ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ, ಕರವೇ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ, ಮಂಜುನಾಥ್ ಮತ್ತಿತರರಿದ್ದರು.







