ಮಣಿಪಾಲದಲ್ಲಿ ರಾ.ಫಾರ್ಮಸಿ ಅಧ್ಯಾಪಕರ ಸಮ್ಮೇಳನ
ಮಣಿಪಾಲ, ಅ.11: ಮಣಿಪಾಲ ಕಾಲೇಜ್ ಆಫ್ ಫಾರ್ಮಸ್ಯೂಟಿಕಲ್ ಸಯನ್ಸ್ನ ಆಶ್ರಯದಲ್ಲಿ ಅಸೋಸಿಯೇಷನ್ ಆಫ್ ಫಾರ್ಮಸಿ ಟೀಚರ್ಸ್ ಆಫ್ ಇಂಡಿಯಾ (ಎಪಿಟಿಐ)ದ ಸ್ವರ್ಣಮಹೋತ್ಸವ ಸಮಾರಂಭ ಹಾಗೂ 21ನೆ ಅಪ್ಟಿ ರಾಷ್ಟ್ರೀಯ ಸಮ್ಮೇಳನವು ಅ.14ರಿಂದ 16ರವರೆಗೆ ಮಣಿಪಾಲ ಕೆಎಂಸಿಯ ಡಾ.ಟಿಎಂಎ ಪೈ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಣಿಪಾಲ ವಿವಿ ಹೆಲ್ತ್ ಸಯನ್ಸ್ನ ಸಂಶೋಧನಾ ನಿರ್ದೇಶಕ ಡಾ.ನಯನಾಭಿರಾಮ ಉಡುಪ ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು, ಸಮ್ಮೇಳನವನ್ನು ಅ.14ರ ಸಂಜೆ 7ಕ್ಕೆ ಪುಣೆಯ ಸಾವಿತ್ರಿಬಾಯಿ ಫುಲೆ ಹಾಗೂ ವಿವಿಯ ಡಾ.ಭೂಷಣ್ ಕೇಶವ್ ಪಟವರ್ಧನ್ ಉದ್ಘಾಟಿಸಲಿದ್ದು, ಮಣಿಪಾಲ ವಿವಿ ಚಾನ್ಸಲರ್ ಡಾ.ರಾಮದಾಸ ಪೈ ಅಧ್ಯಕ್ಷತೆ ವಹಿಸುವರು.
ದೇಶದಲ್ಲಿ 1,500 ಫಾರ್ಮಸಿ ಕಾಲೇಜುಗಳಿದ್ದು, ಇಲ್ಲಿನ 15,000 ಮಂದಿ ಅಪ್ಟಿಯ ಸದಸ್ಯರಾಗಿದ್ದಾರೆ. ಇವರಲ್ಲಿ ಸುಮಾರು 1,500 ಮಂದಿ ಮೂರು ದಿನಗಳ ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಅ.15ರಂದು ಬೆಳಗಾವಿ ಕೆಎಲ್ಇ ವಿವಿಯ ಕುಲಪತಿ ಡಾ.ಸಿ.ಕೆ.ಕೊಕಟೆ ನೇತೃತ್ವದಲ್ಲಿ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಅಧ್ಯಾಪಕರಾಗಿ ಅತ್ಯುತ್ತಮ ಸಾಧನೆಗೈದ ದೇಶದ 50 ಪ್ರಾಧ್ಯಾಪಕರನ್ನು ಗುರುತಿಸಿ ಸನ್ಮಾನಿಸಲಾಗುವುದು. ಅಲ್ಲದೇ ವಿಶಿಷ್ಟ ಸಾಧನೆ ಮಾಡಿದ 20 ಮಂದಿಯನ್ನು ವಿವಿಧ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದವರು ಮಾಹಿತಿ ನೀಡಿದರು.
ಅ.14ರಂದು ಬೆಳಗ್ಗೆ 7ರಿಂದ ಸಮ್ಮೇಳನ ಪೂರ್ವ ಕಾರ್ಯಾಗಾರ ನಡೆಯಲಿದ್ದು, ಮಣಿಪಾಲ ವಿವಿಯ ಡಾ.ಕೆ.ರಾಮನಾರಾಯಣ್, ಡಾ.ಸುಧಾಕರ ನಾಯಕ್ ಹಾಗೂ ಡಾ.ಸಿರಾಜ್ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ ಎಂದರು.
ಮಣಿಪಾಲ ಎಂಕಾಫ್ನ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ರಾವ್ ಉಪಸ್ಥಿತರಿದ್ದರು.





