ನಿವೇಶನರಹಿತರಿಗೆ ಭೂಮಿ ನೀಡಲು ಬೆಳ್ಮ ದಲಿತ ಹಕ್ಕು ಹೋರಾಟ ಸಮಿತಿ ಆಗ್ರಹ,
ಮಂಗಳೂರು,ಅ.12: ಬೆಳ್ಮ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಸರಕಾರಿ ಸ್ಥಳವನ್ನು ಮಂಜೂರು ಮಾಡಬೇಕೆಂದು ಬೆಳ್ಮ ಗ್ರಾಮದ ದಲಿತ ಹಕ್ಕು ಹೋರಾಟ ಸಮಿತಿ ಆಗ್ರಹಿಸಿದೆ.
ಬೆಳ್ಮ ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಮಂದಿ ದಲಿತರು, ಅಲ್ಪಸಂಖ್ಯಾತರು ಸ್ವಂತ ನಿವೇಶನವಿಲ್ಲದೆ ಬಾಡಿಗೆ ಕಟ್ಟಡಗಳಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ಸಾಕಷ್ಟು ಸರಕಾರಿ ಭೂಮಿ ಮಾರಾಟವಾಗಿದೆ. ಕೆಲವರು ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡಿರುವುದು ಇದೆ. ಈ ಹಿನ್ನೆಲೆಯಲ್ಲಿ ಸರ್ವೇ ನಂಬರ್ 45ರಲ್ಲಿ ಖಾಲಿ ಇರುವ 11 ಎಕರೆ ಸ್ಥಳವನ್ನು ನಿವೇಶನ ರಹಿತರಿಗೆ ಹಾಗೂ ಅಂಗನವಾಡಿ ಕೇಂದ್ರ, ಸಾರ್ವಜನಿಕ ಸಮುದಾಯ ಭವನ ಮತ್ತು ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಮಂಜೂರಾತಿ ನೀಡಬೇಕು ಎಂದು ದಲಿತ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಬೆಳ್ಮ ಗ್ರಾಪಂ ಸ.ನಂ.33ರಲ್ಲಿ ಖಾಲಿ ಇರುವ 7.13 ಎಕರೆ ಸ್ಥಳವನ್ನು ನಿವೇಶನ ರಹಿತರಿಗೆ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ, ನಿವೇಶನ ರಹಿತರಿಗೆ, ಕೋರ್ದಬ್ಬು ದೈವಸ್ಥಾನ ಬಳಿಯ ರಸ್ತೆ ನಿರ್ಮಾಣಕ್ಕೆ ಮಂಜೂರಾತಿ ನೀಡಬೇಕು. ಸರ್ವೇ ನಂಬರ್ 93ರಲ್ಲಿ ಖಾಲಿ ಇರುವ 16 ಎಕರೆ ಸ್ಥಳವನ್ನು ಪಪೂ ಕಾಲೇಜು ಮತ್ತು ವೀರ ರಾಣಿ ಅಬ್ಬಕ್ಕ ಕ್ರೀಡಾಂಗಣಕ್ಕೆ ಮಂಜೂರಾತಿ ಮಾಡಬೇಕು. ಹಾಗೂ ಸರ್ವೇ ನಂಬರ್ 48ರಲ್ಲಿ ತ್ಯಾಜ್ಯ ವಿಲೆವಾರಿ ಘಟಕ, ಸ್ಮಶಾನ ನಿರ್ಮಾಣಕ್ಕೆ ಮಂಜೂರಾತಿ ಮಾಡುವ ಕುರಿತು ದಲಿತ ಹಕ್ಕುಗಳ ಹೋರಾಟ ಸಮಿತಿ ಮನವಿ ಸಲ್ಲಿಸಿರುವುದಾಗಿ ಪ್ರಕಟನೆಯಲ್ಲಿ ತಿಳಿಸಿದೆ.