‘‘ಭಾರತಕ್ಕೆ ಅಪಾಯವಿರುವುದುಕೋಮುವಾದದಿಂದ, ಬಾಹ್ಯ ಶಕ್ತಿಗಳಿಂದಲ್ಲ’’
ಮಾಜಿ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್

ಹೊಸದಿಲ್ಲಿ,ಅ.13 : ‘‘ಭಾರತಕ್ಕೆ ನಿಜವಾದ ಅಪಾಯವಿರುವುದು ಕೋಮುವಾದ ಹಾಗೂ ಸಾಮಾಜಿಕ ಹಿಂಸೆಯಿಂದಲೇ ಹೊರತು ಬಾಹ್ಯ ಶಕ್ತಿಗಳಾದ ಪಾಕಿಸ್ತಾನ ಅಥವಾ ಚೀನಾದಿಂದಲ್ಲ,’’ ಎಂದು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಹೇಳಿದ್ದಾರೆ.
ಪಾಕಿಸ್ತಾನ ಅಥವಾ ಚೀನಾದಿಂದ ಭಾರತಕ್ಕೆ ಬೆದರಿಕೆಯಿಲ್ಲ ಎಂದು ಹೇಳಿದ ಮೆನನ್50 ರ ದಶಕದಲ್ಲಿದ್ದಂತೆ ಈಗ ಭಾರತಕ್ಕೆ ಯಾವುದೇ ಬಾಹ್ಯ ಬೆದರಿಕೆಯಿಲ್ಲವೆಂದು ತಿಳಿಸಿದರು, ಆಂತರಿಕ ಬೆದರಿಕೆಗಳ ಬಗ್ಗೆ ವಿವರಿಸಲು ಹೇಳಿದಾಗ ‘‘ಉಗ್ರವಾದದಿಂದ, ಎಡಪಂಥೀಯ ತೀವ್ರಗಾಮಿತ್ವದಿಂದ ಉಂಟಾಗುವ ಸಾವುಗಳು21 ನೇ ಶತಮಾನದುದ್ದಕ್ಕೂ2014-15 ರ ತನಕ ಕಡಿಮೆಯಾಗಿವೆ. ಈಗಲೂ ಅದು ಕಡಿಮೆಯಾಗಿದೆ. ಆದರೆ 2012 ರಿಂದ ಮತೀಯ ಹಿಂಸೆ, ಸಾಮಾಜಿಕ ಹಿಂಸೆ, ಆಂತರಿಕ ಹಿಂಸೆ ಹೆಚ್ಚಾಗಿದೆ. ಇವುಗಳನ್ನು ಹೇಗೆ ನಿಭಾಯಿಸಬೇಕೆಂಬುದನ್ನು ನಾವೀಗ ಅರಿಯಬೇಕಿದೆ’’ ಎಂದು ಅವರು ಹೇಳಿದರು.
‘‘ಇದೇನು ಸಾಮಾನ್ಯ ಕಾನೂನು, ಸುವ್ಯವಸ್ಥೆಯ ಸಮಸ್ಯೆಯಲ್ಲ. ಮಹಿಳೆಯರ ವಿರುದ್ಧದ ಅಪರಾಧ, ಮತೀಯ ಹಾಗೂ ಜಾತೀಯ ಹಿಂಸೆ ಇವುಗಳೆಲ್ಲವನ್ನೂ ಗಮನಿಸಿದಾಗ ಇವುಗಳೆಲ್ಲ,ನಗರೀಕರಣ, ಜನಸಂಖ್ಯೆಯ ಹೆಚ್ಚಳ ಹಾಗೂ ವಿವಿಧ ಬಗೆಯ ಬದಲಾವಣೆಗಳಿಂದುಂಟಾದ ಪರಿಣಾಮವಾಗಿದೆ ಹಾಗೂ ಇವುಗಳನ್ನು ಹೇಗೆ ನಿಭಾಯಿಸಬೇಕೆಂಬುದನ್ನು ನಾವು ಇನ್ನಷ್ಟೇ ಕಲಿಯಬೇಕಿದೆ’’ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಈ ಸಮಸ್ಯೆಗಳು ಹೆಚ್ಚಾಗಿವೆಯೆಂದು ಹಲವರು ತಿಳಿದುಕೊಳ್ಳುತ್ತಿರುವ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಭಾರತೀಯ ಸಮಾಜದಲ್ಲಾಗುತ್ತಿರುವ ಬದಲಾವಣೆಯೇ ಇದಕ್ಕೆ ಕಾರಣ ಎಂದು ಹೇಳಿದರು.







