ಭಾರತಕ್ಕಿರುವುದು ಕೇವಲ ಆಂತರಿಕ ಬೆದರಿಕೆ: ಮೆನನ್

ವಾಶಿಂಗ್ಟನ್, ಅ.13: ಭಾರತಕ್ಕೆ ನಿಜವಾಗಿಯೂ ಬೆದರಿಕೆಯಿರುವುದು ಒಳಗಿನದೇ ಹೊರತು ಪಾಕಿಸ್ತಾನ, ಚೀನಗಳಂತಹ ಹೊರಗಿನ ಶಕ್ತಿಗಳಿಂದಲ್ಲ. ಅದು ಕೋಮು ಹಾಗೂ ಸಾಮಾಜಿಕ ಹಿಂಸಾಚಾರಗಳಿಂದ ಉದ್ಭವಿಸುವ ಬೆದರಿಕೆಯಾಗಿರುತ್ತದೆಂದು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ ಮೆನನ್ ಹೇಳಿದ್ದಾರೆ.
ಪಾಕಿಸ್ತಾನ ಹಾಗೂ ಚೀನಗಳು ಭಾರತದ ಅಸ್ತಿತ್ವಕ್ಕೆ ಬೆದರಿಕೆಯಾಗಿವೆಯೇ ಎಂಬ ಪ್ರಶ್ನೆಗೆ ಇಲ್ಲವೆಂದು ಅವರುತ್ತರಿಸಿದ್ದಾರೆ.
ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಹೇಳುವುದಾದರೆ ನಿಜವಾಗಿಯೂ ದೇಶಕ್ಕೆ ಆಂತರಿಕ ಬೆದರಿಕೆಯಿದೆ ಎಂಬುದು ತನ್ನ ಅಭಿಪ್ರಾಯವಾಗಿದೆ. 50ರ ದಶಕದಲ್ಲಿ ಭಾರತ ರಚನೆಯಾಗುವ ಮೊದಲಿನಂತಹ ಬಾಹ್ಯ ಬೆದರಿಕೆ ಈಗ ದೇಶಕ್ಕಿಲ್ಲ. 60ರ ದಶಕದ ಕೊನೆಯ ವರೆಗೆ ಹಲವು ವರ್ಷಗಳ ಕಾಲ ಈ ಬೆದರಿಕೆಯಿತ್ತು. ಆದರೆ, ಈಗಿಲ್ಲವೆಂದು ಮೆನನ್ ಹೇಳಿದ್ದಾರೆ.
ಮೆನನ್ 2010ರ ಜನವರಿಯಿಂದ 2014ರ ಮೇಯ ವರೆಗೆ ಆಗಿನ ಪ್ರಧಾನಿ ಮನಮೋಹನ ಸಿಂಗ್ರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದರು. ಅವರು ತನ್ನ ಸುದೀರ್ಘ ಸಾರ್ವಜನಿಕ ಸೇವೆಯು ರಾಜತಾಂತ್ರಿಕತೆ, ರಾಷ್ಟ್ರೀಯ ಭದ್ರತೆ ಹಾಗೂ ನೆರೆ ದೇಶಗಳು ಮತ್ತು ಪ್ರಮುಖ ಜಾಗತಿಕ ಶಕ್ತಿಗಳೊಂದಿಗೆ ಭಾರತದ ಸಂಬಂಧಗಳ ಕುರಿತಾಗಿತ್ತು.
ನಿವೃತ್ತಿಯ ಬಳಿಕ ಮೆನನ್ ಬರೆದಿರುವ ಪ್ರಥಮ ಪುಸ್ತಕ ‘ಚಾಯ್ಸಿ: ಇನ್ಸೈಡ್ ದಿ ಮೇಕಿಂಗ್ ಆಫ್ ಇಂಡಿಯಾಸ್ ಫಾರಿನ್ ಪಾಲಿಸಿ’ ಮುಂದಿನ ವಾರ ಜಗತ್ತಿನ ಪುಸ್ತಕದ ಅಂಗಡಿಗಳನ್ನು ತಲುಪಲಿದೆ.
ಆಂತರಿಕ ಬೆದರಿಕೆಯೆಂದು ಯಾವುದರ ಕುರಿತಾಗಿ ಹೇಳಿದ್ದಾರೆಂದು ಪ್ರಶ್ನಿಸಿದಾಗ, ಭಾರತ, ಭಾರತದ ಚಿಂತನೆ, ಸಮಗ್ರತೆಗಳಿಗೆ ನಿಜವಾದ ಬೆದರಿಕೆಯಿದ್ದರೆ, ಅದು ವಾಸ್ತವವಾಗಿ ದೇಶದೊಳಗಿನಿಂದಲೇ ಬರುತ್ತದೆ. ಭಾರತದಲ್ಲಿ ಹಿಂಸಾಚಾರದ ಬಗ್ಗೆ ಹೇಳುವುದಾದರೆ, ಭಯೋತ್ಪಾದನೆ, ಎಡಪಂಥೀಯ ಉಗ್ರವಾದಗಳು 21ನೆ ಶತಮಾನದಲ್ಲಿ 2014-15ರ ವರೆಗೆ ನಿಧಾನವಾಗಿ ಕಡಿಮೆಯಾಗಿವೆ. ಈಗಲೂ ಭಯೋತ್ಪಾದನೆ ಎಡಪಂಥೀಯ ಉಗ್ರವಾದಗಳ ಪ್ರವೃತ್ತಿ ಇಳಿಕೆಯಾಗಿದೆ. 2012ರ ಬಳಿಕ ಏರಿಕೆಯಾಗಿರುವುದು ಕೋಮು ಹಿಂಸಾಚಾರ, ಸಾಮಾಜಿಕ ಹಿಂಸಾಚಾರ ಹಾಗೂ ಆಂತರಿಕ ಹಿಂಸಾಚಾರಗಳು. ಅವುಗಳನ್ನು ನಿಭಾಯಿಸಲು ದಾರಿ ಹುಡುಕಬೇಕಿದೆಯೆಂದು ಮೆನನ್ ಹೇಳಿದ್ದಾರೆ.







