ಜೆಡಿಎಸ್ ಸ್ವಂತ ಬಲದಿಂದ ಅಧಿಕಾರ ಪಡೆಯಲು ಸಂಘಟಿತ ಪ್ರಯತ್ನ: ಎಚ್.ಡಿ .ದೇವೇಗೌಡ
ದ.ಕ. ಜಿಲ್ಲಾ ಜೆಡಿಎಸ್ ಕಾರ್ಯಕರ್ತರ ಸಭೆ

ಮಂಗಳೂರು, ಅ.15:ರಾಜ್ಯದಲ್ಲಿ ಜೆಡಿಎಸ್ ಸ್ವಂತ ಬಲದಿಂದ ಅಧಿಕಾರಕ್ಕೇರಲು ಸಂಘಟಿತ ಪ್ರಯತ್ನ ನಡೆಸಬೇಕಾಗಿದೆ ಎಂದು ಜಾತ್ಯತೀತ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ .ದೇವೇಗೌಡ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಅವರು ಇಂದು ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದ.ಕ ಜಿಲ್ಲಾ ಮಟ್ಟದ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಜಾತ್ಯತೀತ ಜನತಾ ದಳವನ್ನು ಮತ್ತೆ ಅಧಿಕಾರಕ್ಕೆ ತರಲು ಮಂಗಳೂರಿನಿಂದ ಅಭಿಯಾನವನ್ನು ಆರಂಭಿಸಿದ್ದೇನೆ. ಈ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಜೊತೆಗೆ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ಪಕ್ಷವನ್ನು ಸಂಘಟಿಸುವ ಬಗ್ಗೆ ಸಮಾಲೋಚನೆ ನಡೆಸಲು ಜಿಲ್ಲೆಗೆ ಆಗಮಿಸಿರುವುದಾಗಿ ತಿಳಿಸಿದರು.
ಕರಾವಳಿಯಲ್ಲಿ ಅಡಿಕೆ ಬೆಳೆಗಾರರು, ರಬ್ಬರ್ ಬೆಳೆಗಾರರು ಬೆಲೆ ಕುಸಿತದಿಂದ ಬಸವಳಿದಿದ್ದಾರೆ. ನಿರುದ್ಯೋಗ, ಬಡತನದ ಸಮಸ್ಯೆ ನಮ್ಮನ್ನು ಕಾಡುತ್ತಿರುವಾಗ ಸರಕಾರ ನಡೆಸುವವರು ಅದನ್ನು ಪರಿಹರಿಸಲು ಹೆಚ್ಚಿನ ಗಮನಹರಿಸಬೇಕು ಹೊರತು ‘ದೇಶಕ್ಕೆ ಒಂದು ಕಾನೂನು-ಒಂದು ನಿಯಮ’ಎನ್ನುವ ವಿಚಾರಗಳಿಗಲ್ಲ ಎಂದು ದೇವೇಗೌಡ ತಿಳಿಸಿದರು.
ಜೆಡಿಎಸ್ ಪಕ್ಷದೊಳಗಿನ ಆಂತರಿಕ ಭಿನ್ನಮತಗಳನ್ನು ಮರೆತು ಜೆಡಿಎಸ್ನ್ನು ರಾಜ್ಯದಲ್ಲಿ ಮತ್ತೊಮ್ಮೆ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಬೆಳೆಸಲು ಎಲ್ಲರ ಸಹಕಾರ ಅಗತ್ಯ. ಈ ಅಭಿಯಾನವನ್ನು ಮಂಗಳೂರಿನಿಂದಲೇ ಆರಂಭಿಸುವುದು ಸೂಕ್ತ ಎಂದು ಮಂಗಳೂರಿಗೆ ಆಗಮಿಸಿರುವುದಾಗಿ ದೇವೇಗೌಡ ತಿಳಿಸಿದರು.
ಅಧಿಕಾರದ ಆಸೆಯಿಲ್ಲ
ನಾನು ದೇಶದ ಪ್ರಧಾನಿಯಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಕಳೆದ 25ವರ್ಷ ಸಂಸದನಾಗಿ ಕಾರ್ಯನಿರ್ವಹಿಸಿ ಅಧಿಕಾರವನ್ನು ಅನುಭವಿಸಿದ್ದೇನೆ. ಈಗ ಮತ್ತೆ ಅಧಿಕಾರದ ಆಸೆ ನನಗಿಲ್ಲ. ಆದರೆ ರಾಜ್ಯದಲ್ಲಿ ಜೆಡಿಎಸ್ ಒಂದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಉಳಿಯಬೇಕು ಎನ್ನುವ ಸ್ವಾರ್ಥ ನನ್ನಲ್ಲಿದೆ. ಇದು ನನ್ನ ಜೀವನದ ಕೊನೆಯ ಆಸೆಯೂ ಹೌದು.ಆ ಕಾರಣದಿಂದ ಈ ಇಳಿ ವಯಸ್ಸಿನಲ್ಲೂ ಪಕ್ಷದ ಸಂಘಟನೆಗೆ ಹೊರಟಿದ್ದೇನೆ. ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಕೇಳಲು ಬಂದಿದ್ದೇನೆ ಎಂದು ದೇವೇಗೌಡ ತಿಳಿಸಿದರು.
ಸಮಾರಂಭದಲ್ಲಿ ಜೆಡಿಎಸ್ ಮುಖಂಡರಾದ ಅಮರನಾಥ ಶೆಟ್ಟಿ, ಜೇವಿಜಯ, ಝಫರುಲ್ಲಾ ಖಾನ್, ತನ್ವಿರ್ ಪಾಷಾ, ಮಧು ಬಂಗಾರಪ್ಪ, ವಿಟ್ಲ ಮುಹಮ್ಮದ್ ಕುಂಞ, ಎಂ.ಬಿ.ಸದಾಶಿವ, ಬಿ.ಎಂ.ಫಾರೂಕ್, ಅಝೀಝ್ ಕುದ್ರೋಳಿ, ರಮೀಝಾ ನಾಝಿರ್, ಅಶ್ವಿನ್ ಪಿರೇರಾ, ಸೌಂದರ್ಯ ರಮೇಶ್, ಜಗನ್ನಾಥ ಅರಸಿನ ಮಕ್ಕಿ, ಅಬೂಬಕರ್ ನಾಟೆಕಲ್, ವಸಂತ ಪೂಜಾರಿ, ಎಸ್.ಪಿ.ಚಂಗಪ್ಪ, ಪ್ರವೀಣ್ ಚಂದ್ರ, ಅಕ್ಷಿತ್ ಸುವರ್ಣ, ಇಮ್ರಾನ್ ಪಾಷಾ, ಅಬ್ದುರ್ರಹ್ಮಾನ್ ಬೆಳ್ತಂಗಡಿ, ಐ.ಸಿ.ಕೈಲಾಸ್, ದಯಾಕರ ಆಳ್ವ, ಡಿ.ಪಿ.ಹಮ್ಮಬ್ಬ, ಮೊಹನ್ ದಾಸ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರವೀಣ್ ನಾಯಕ್, ಗಣೇಶ್ ಪ್ರಸಾದ್, ಉದ್ಯಮಿ ಸಿ.ಎಂ.ಉಮರ್ ಮೊದಲಾದವರು ದೇವೇಗೌಡರ ಸಮ್ಮಖದಲ್ಲಿ ಜೆಡಿಎಸ್ಗೆ ಸೇರ್ಪಡೆಗೊಂಡರು.







