‘ಸ್ವಚ್ಛ ನಗರ ಸುಂದರ ನಗರ’ ಜನಜಾಗೃತಿಗಾಗಿ ಓಟ

ಉಡುಪಿ, ಅ.15: ಜೆಸಿಐ ಮಣಿಪಾಲ ಹಿಲ್ ಸಿಟಿ, ಲಯನ್ಸ್, ಲಯನೆಸ್, ಲಿಯೋ ಕ್ಲಬ್ ಉಡುಪಿ- ಇಂದ್ರಾಳಿ, ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇವುಗಳ ಸಂಯುಕ್ತಾಶ್ರಯದಲ್ಲಿ ‘ಸ್ವಚ್ಛ ನಗರ ಸುಂದರ ನಗರ’ ಜನಜಾಗೃತಿಗಾಗಿ ಓಟವನ್ನು ಶನಿವಾರ ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಜೋಡುಕಟ್ಟೆಯಿಂದ ಇಂದ್ರಾಳಿಯವರೆಗೆ ನಡೆದ ಓಟಕ್ಕೆ ಜಿಲ್ಲಾ ಉಸ್ತು ವಾರಿ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ಸ್ವಚ್ಛತೆಯಲ್ಲಿ ಉಡುಪಿ ನಗರ ಈಗಾಗಲೇ ದೇಶದಲ್ಲಿ ಏಳನೆ ಸ್ಥಾನವನ್ನು ಪಡೆದಿದ್ದು, ಮುಂದಿನ ನಮ್ಮ ಗುರಿ ಒಂದನೆ ಸ್ಥಾನಕ್ಕೆ ಏರುವುದಾಗಿದೆ. ಈ ನಿಟ್ಟಿನಲ್ಲಿ ಇಂತಹ ಜನಜಾಗೃತಿ ಕಾರ್ಯಕ್ರಮಗಳು ಅಗತ್ಯ ಎಂದರು.
ಇಂದ್ರಾಳಿಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಜಯಕರ ಶೆಟ್ಟಿ ಇಂದ್ರಾಳಿ, ಮಣಿಪಾಲ ಪೊಲೀಸ್ ನಿರೀಕ್ಷಕ ಸುಭಾಸ್ಚಂದ್ರ, ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಕ್ಷ ವಾಲ್ಟರ್ ಸ್ಟೀಫನ್ ಮೆಂಡಿಸ್, ಜೆಸಿಐ ವಲಯಾಧ್ಯಕ್ಷ ಸಂದೀಪ್ ಕುಮಾರ್, ಜೀಸಿಐ ಮಣಿಪಾಲ್ ಹಿಲ್ ಸಿಟಿಯ ಅಧ್ಯಕ್ಷ ಜಗದೀಶ್ ಆಚಾರ್ಯ, ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ ಅಧ್ಯಕ್ಷ ಮುಹಮ್ಮದ್ ವೌಲ ಉಪಸ್ಥಿತರಿದ್ದರು.
ಸ್ಪರ್ಧೆಯ ಬಹುಮಾನ ವಿಜೇತರು
ಓಟದ ಪುರುಷರ ವಿಭಾಗದಲ್ಲಿ ಚಿದಾನಂದ ಪ್ರಥಮ, ಪರಶುರಾಮ ದ್ವಿತೀಯ, ಅನಿಲ್ ಕುಮಾರ್ ತೃತೀಯ ಮತ್ತು ಮಹಿಳೆಯರ ವಿಭಾಗದಲ್ಲಿ ಭೂಮಿಕಾ ಪ್ರಥಮ, ಅಧೀಕ್ಷಾ ದ್ವಿತೀಯ, ನೀಮಾ ತೃತೀಯ ಸ್ಥಾನವನ್ನು ಪಡೆದರು. ವಿಜೇತರಿಗೆ ಕ್ರಮವಾಗಿ ತಲಾ 5, 000ರೂ., 2,500ರೂ., 1,500 ರೂ. ನಗದು ಬಹುಮಾನ ನೀಡಲಾಯಿತು.
ಹಿರಿಯ ನಾಗರಿಕರ ಮಹಿಳಾ ವಿಭಾಗದಲ್ಲಿ ಜ್ಯೋತಿ ಶೆಟ್ಟಿ, ಪುರುಷರ ವಿಭಾಗದಲ್ಲಿ ರಾಮಚಂದ್ರ, ಬಾಲಕರ ವಿಭಾಗದಲ್ಲಿ ಶಶಾಂಕ್, ಬಾಲಕಿಯರ ವಿಭಾಗದಲ್ಲಿ ಹನಿ ಬೆಸ್ಕೂರ್ ಬಹುಮಾನ ಪಡೆದರು.





