ನಂದಿಗುಡ್ಡೆ: ವಾಲಿಬಾಲ್ ಪಂದ್ಯಾವಳಿ ಉದ್ಘಾಟನೆ
ಮಂಗಳೂರು, ಅ.15: ಕ್ರೀಡಾಪಟುಗಳಿಗೆ ಪ್ರೋತ್ಸಾಹ ಸಿಗಬೇಕಾದರೆ ಕ್ರೀಡಾ ನೀತಿ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಸರಕಾರಗಳು ಬಜೆಟ್ನಲ್ಲಿ ಹಣ ಮೀಸಲಿಡಬೇಕು ಎಂದು ವಿಧಾನ ಪರಿಷತ್ನ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದ್ದಾರೆ.
ಯುನೈಟೆಡ್ ನಂದಿಗುಡ್ಡ ಸಂಘಟನೆಯ ವತಿಯಿಂದ ನಂದಿಗುಡ್ಡದ ನಾಯಕ್ಸ್ ಮೈದಾನದಲ್ಲಿ ಶನಿವಾರ ಆಯೋಜಿಸಲಾದ ‘ಗುಡ್ಡೆಡ್ ಒಂಜಿ ವಾಲಿಬಾಲ್ದ ಗೊಬ್ಬು- 2016’ ಪಂದ್ಯಾಟದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಟಗಾರರಿಗೆ ದೊರೆಯಬೇಕಾದ ಪ್ರೋತ್ಸಾಹ ನಿರೀಕ್ಷಿತ ಮಟ್ಟದಲ್ಲಿ ದೊರೆತಿಲ್ಲ. ಈ ನಿಟ್ಟಿನಲ್ಲಿ ಕ್ರೀಡಾಳುಗಳನ್ನು ಪೋತ್ಸಾಹಿಸಲು ರಾಜ್ಯಕ್ಕೆ ಕ್ರೀಡಾ ನೀತಿಯ ಅಗತ್ಯವಿದೆ ಅಲ್ಲದೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ಸಹಿತ ಹಾಜರಾತಿ ನೀಡುವಂತೆ ಸಲಹೆ ನೀಡಿದ್ದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೇಯರ್ ಹರಿನಾಥ್, ಕ್ರಿಕೆಟ್ಗೆ ನೀಡುವಂತಹ ಪ್ರಾಶಸ್ತ್ಯ ವಾಲಿಬಾಲ್ಗೂ ನೀಡಬೇಕಿದ್ದು, ಈ ಆಟಕ್ಕೆ ಹೆಚ್ಚು ಪ್ರೋತ್ಸಾಹ ಅಗತ್ಯವಿದೆ ಎಂದರು.
ಈ ಸಂದರ್ಭ ರಾಷ್ಟ್ರೀಯ ವಾಲಿಬಾಲ್ ತೀರ್ಪುಗಾರ ಹಾಗೂ ತರಬೇತುದಾರ ನಾಗೇಶ್ ಎ. ಹಾಗೂ ವಾಲಿಬಾಲ್ ಆಟಗಾರ ಗಣೇಶ್ ಪುತ್ತೂರು ಅವರನ್ನು ಸನ್ಮಾನಿಸಲಾಯಿತು.
ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅಪ್ಪಿ, ಕಾರ್ಪೊರೇಟರ್ರಾದ ಪ್ರೇಮಾನಂದ ಶೆಟ್ಟಿ, ಶೈಲಜಾ, ಪ್ರೊ.ಎಂ.ಎನ್.ಶೆಟ್ಟಿ, ಯುನೈಟೆಡ್ ನಂದಿಗುಡ್ಡೆಯ ಗೌರವಾಧ್ಯಕ್ಷ ರೋಶನ್ ಡಿಮೆಲ್ಲೊ, ಕೆ.ಪಿ. ಶೆಟ್ಟಿ, ಪುಂಡಲೀಕ ಸುವರ್ಣ, ಸಂದೀಪ್ ವಿನಯ್ ಉಪಸ್ಥಿತರಿದ್ದರು.





