ಉಡುಪಿ ವಿಭಾಗ ಮಟ್ಟದ ಪ್ರತಿಭೋತ್ಸವ
ಉಡುಪಿ, ಅ.17: ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ಉಡುಪಿ ವಿಭಾಗ ಮಟ್ಟದ ಕ್ಯಾಂಪಸ್ ವಿದ್ಯಾರ್ಥಿಗಳ ಪ್ರತಿಭೋತ್ಸವವನ್ನು ಇತ್ತೀಚೆಗೆ ಹೂಡೆಯ ದಾರುಸ್ಸಲಾಂ ಮದ್ರಸ ಹಾಲ್ನಲ್ಲಿ ಆಯೋಜಿಸಲಾಗಿತ್ತು.
ಸೀನಿಯರ್ ವಿಭಾಗದಲ್ಲಿ ಎಂಐಟಿ ಕ್ಯಾಂಪಸ್ ಮಣಿಪಾಲ ಶಾಖೆ ಮತ್ತು ಜೂನಿಯರ್ ವಿಭಾಗದಲ್ಲಿ ಎಸ್ಎಂಎಸ್ ಪಿಯು ಕಾಲೇಜು ಬ್ರಹ್ಮಾವರ ಶಾಖೆಯು ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿತು. ಸೀನಿಯರ್ ವಿಭಾಗದಲ್ಲಿ ಎಂಐಟಿ ಕ್ಯಾಂಪಸ್ನ ಇರ್ಶಾದ್ ಕನ್ನಂಗಾರ್ ಮತ್ತು ಜೂನಿಯರ್ ವಿಭಾಗದಲ್ಲಿ ಬ್ರಹ್ಮಾವರ ಶಾಖೆಯ ಶಾಹಿಲ್ ಕೆ.ಟಿ. ಭದ್ರಗಿರಿ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದರು.
ಉಡುಪಿ ವಿಭಾಗದ ಕ್ಯಾಂಪಸ್ ಕಾರ್ಯದರ್ಶಿ ಯೂಸುಫ್ ನವಾಝ್ ನೂರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪ್ರತಿಭೋತ್ಸವ ಸಮಿತಿಯ ಸಂಚಾಲಕ ರಝಾಕ್ ಉಸ್ತಾದ್ ವಹಿಸಿದ್ದರು. ವಿಭಾಗೀಯ ಸದಸ್ಯ ಶಂಶುದ್ದೀನ್ ಆರ್.ಕೆ., ಇಬ್ರಾಹೀಂ ಆರ್.ಕೆ., ಅನೀಶ್ ಭದ್ರಗಿರಿ, ಹೂಡೆ ಶಾಖೆಯ ಮಾಜಿ ಅಧ್ಯಕ್ಷ ಜುನೈದ್ ಹೂಡೆ, ನಿಝಾಮುದ್ದೀನ್ ಸರಕಾರಿಗುಡ್ಡೆ, ಪ್ರತಿಭೋತ್ಸವ ಸಮಿತಿಯ ಸಂಚಾಲಕ ನವಾಝ್ ಮಣಿಪುರ, ಸುಲೈಮಾನ್, ದಾರುಸ್ಸಲಾಂನ ಪ್ರಾಂಶುಪಾಲ ಅಶ್ರಫ್, ತೀರ್ಪುಗಾರ ಝಹೈರ್ ಹುಸೇನ್ ಮೂಡುಬಿದಿರೆ ಉಪಸ್ಥಿತರಿದ್ದರು.
ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ನಾಸೀರ್ ಭದ್ರಗಿರಿ ಸ್ವಾಗತಿಸಿದರು. ಕೋಶಾಧಿಕಾರಿ ಸಿದ್ದೀಕ್ ಅಂಬಾಗಿಲು ವಂದಿಸಿದರು. ಸ್ಪರ್ಧೆಯಲ್ಲಿ 10-12 ಕ್ಯಾಂಪಸ್ ಶಾಖೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.







