ನವೆಂಬರ್ನಲ್ಲಿ ಹೂಡಿಕೆದಾರರ ಸಮಾವೇಶ: ಶಾಸಕ ಲೋಬೊ ಸೂಚನೆ
![ನವೆಂಬರ್ನಲ್ಲಿ ಹೂಡಿಕೆದಾರರ ಸಮಾವೇಶ: ಶಾಸಕ ಲೋಬೊ ಸೂಚನೆ ನವೆಂಬರ್ನಲ್ಲಿ ಹೂಡಿಕೆದಾರರ ಸಮಾವೇಶ: ಶಾಸಕ ಲೋಬೊ ಸೂಚನೆ](https://www.varthabharati.in/sites/default/files/images/articles/2016/10/17/meeting.jpg)
ಮಂಗಳೂರು, ಅ. 17: ನವೆಂಬರ್ ತಿಂಗಳಲ್ಲಿ ಮಂಗಳೂರಿನಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸುವಂತೆ ಶಾಸಕ ಜೆ.ಆರ್.ಲೋಬೊ ಸೂಚಿಸಿದರು.
ಅವರು ಇಂದು ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು. ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಐಟಿ, ಬಿಟಿ ಸಚಿವರು ಮತ್ತು ಉನ್ನತ ಮಟ್ಟದ ಸರಕಾರಿ ಅಧಿಕಾರಿಗಳು ಬರಬೇಕು. ಕನಿಷ್ಠ 20ರಿಂದ 25 ದೊಡ್ಡ ಕಂಪೆನಿಗಳು ಪಾಲ್ಗೊಳ್ಳಬೇಕು ಎಂದು ಶಾಸಕ ಲೋಬೊ ತಿಳಿಸಿದರು.
ಸಾಮಾನ್ಯವಾಗಿ ಬಂಡವಾಳ ಹೂಡಿಕೆ ಸಮಾವೇಶ ನಡೆದಾಗ ಮಂಗಳೂರಿನ ಹೂಡಿಕೆದಾರರನ್ನು ಪ್ರೋತ್ಸಾಹಿಸುವ ಬದಲು ಬೆಂಗಳೂರನ್ನೇ ಹೆಚ್ಚು ಆಕರ್ಷಿಸುವ ಕೆಲಸವಾಗುತ್ತಿದೆ. ಈ ರೀತಿ ಆಗಬಾರದು. ಮಂಗಳೂರಲ್ಲಿ ಎಲ್ಲಾ ರೀತಿಯ ಸೌಕರ್ಯಗಳೂ ಲಭ್ಯ ಇವೆ ಎಂದರು.
ಈ ಸಲ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿ ಮಂಗಳೂರಲ್ಲಿ ಯಾಕೆ ಹೂಡಿಕೆ ಮಾಡಲು ಅನುಕೂಲಕರ ಎಂಬ ಬಗ್ಗೆ ಅವರಿಗೆ ಮನದಟ್ಟು ಮಾಡಬೇಕು ಎಂದು ನುಡಿದ ಶಾಸಕರು, ರಸ್ತೆ ಸಂಪರ್ಕ, ವಾಯು ಯಾನ ಸೇವೆ, ರೈಲು ಮತ್ತು ಬಂದರು ಈ ನಾಲ್ಕು ಸೇವೆಗಳೂ ದಕ್ಕುವ ಏಕೈಕ ನಗರ ಮಂಗಳೂರು ಎಂಬುದನ್ನು ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದರು.
ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ ಜಿಲ್ಲಾಧಿಕಾರಿ ಕೆ.ಜಿ. ಜಗದೀಶ್ ಮಾತನಾಡಿ, ಬಂಡವಾಳ ಹೂಡಿಕೆದಾರರಿಗೆ ಮಂಗಳೂರನ್ನು ಮನವರಿಕೆ ಮಾಡಿಕೊಡುವ ಉದ್ದೇಶದಿಂದ 15 ರಿಂದ 20 ನಿಮಿಷಗಳ ಅವಧಿಯ ಡಾಕ್ಯೂಮೆಂಟೆಷನ್ ಮಾಡಬೇಕು. ಅದರಲ್ಲಿ ಮಂಗಳೂರು ಯಾವೆಲ್ಲಾ ಸೌಲಭ್ಯಗಳನ್ನು ಒಳಗೊಂಡಿದೆ ಎಂಬ ಬಗ್ಗೆ ಮನಮುಟ್ಟುವಂತೆ ತೋರಿಸಬೇಕು ಎಂದರು.
ಬೆಂಗಳೂರಲ್ಲಿ ಎರಡನೇ ಸಭೆಯನ್ನು ನಡೆಸಬೇಕು. ಆ ಸಭೆಯಲ್ಲಿ ಶಾಸಕ ಜೆ.ಆರ್.ಲೋಬೊ ಮತ್ತು ಸಂಬಂಧಪಟ್ಟ ಸಚಿವರು ಕೂಡಾ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ ಮುಹಮ್ಮದ್ ನಝೀರ್, ಮಂಗಳೂರು ನಗರಾಭಿವೃದ್ಧಿ ಕಮಿಷನರ್ ಶ್ರೀಕಾಂತ ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.