ಕಾವೇರಿ ವಿವಾದ ಬಗೆಹರಿಸಲು ಪ್ರಧಾನಿ ಮಧ್ಯಸ್ಥಿಕೆಗೆ ಮಾಜಿ ಸಂಸದೆ ರಮ್ಯಾ ಒತ್ತಾಯ

ಮಡಿಕೇರಿ, ಅ.17: ಕಾವೇರಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಟ್ರಿಬ್ಯೂನಲ್ನ ಮೂಲ ಒಪ್ಪಂದಗಳಲ್ಲಿ ಬದಲಾವಣೆಯಾಗಬೇಕು ಮತ್ತು ಪ್ರಧಾನ ಮಂತ್ರಿಗಳು ಮಧ್ಯಸ್ಥಿಕೆ ವಹಿಸಬೇಕೆಂದು ಮಂಡ್ಯದ ಮಾಜಿ ಸಂಸದೆ ರಮ್ಯಾ ಒತ್ತಾಯಿಸಿದ್ದಾರೆ.
ತೀರ್ಥೋದ್ಭವವನ್ನು ವೀಕ್ಷಿಸಲು ಸೋಮವಾರ ಮುಂಜಾನೆ ತಲಕಾವೇರಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾವೇರಿ ನದಿ ಪಾತ್ರಗಳಲ್ಲಿನ ಮರಳು ದಂಧೆ, ಪರಿಸರ ನಾಶ ಮೊದಲಾದ ಕೃತ್ಯಗಳಿಂದ ಮಳೆಯ ಕೊರತೆ ಸೇರಿದಂತೆ ಪ್ರಕೃತಿ ವಿಕೋಪಗಳನ್ನು ನಾವಿಂದು ಕಾಣುವಂತಾಗಿದೆ ಎಂದರು.ಪರಿಸರ ಸಂರಕ್ಷಣೆಗೆ ಪ್ರಥಮವಾಗಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆಯೆಂದು ಕಳಕಳಿ ವ್ಯಕ್ತಪಡಿಸಿದ ರಮ್ಯಾ, ಈ ನಿಟ್ಟಿನಲ್ಲಿ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಮಳೆ ನೀರಿನ ಕೊಯ್ಲಿಗೆ ಒತ್ತು ನೀಡಿ ಕಾರ್ಯ ನಿರ್ವಹಿಸಲಿದ್ದೇನೆಂದು ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಕಾವೇರಿಯ ನೀರನ್ನು ಬಳಸುವ ಕರ್ನಾಟಕ, ತಮಿಳುನಾಡು, ಕೇರಳ, ಪಾಂಡಿಚೇರಿ ರಾಜ್ಯದ ಜನತೆಗೆ ಒಳ್ಳೆಯದಾಗಲಿ ಎನ್ನುವ ಹಾರೈಕೆ ನನ್ನದಾಗಿದ್ದು, ನದಿ ನೀರಿನ ಹಂಚಿಕೆ ವಿವಾದದಿಂದ ಉಂಟಾದ ಗಲಭೆಗಳಿಂದಾಗಿ ರೂ. 2,500 ಕೋಟಿಗೂ ಹೆಚ್ಚಿನ ನಷ್ಟ ಸಂಭವಿಸಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾದ ಸಂದರ್ಭ ಹೊರ ಜಿಲ್ಲೆ ಮತ್ತು ರಾಜ್ಯಗಳು ಅದರ ಲಾಭವನ್ನು ಪಡೆದುಕೊಳ್ಳುತ್ತವೆ. ಅದೇ ಅವಧಿಯಲ್ಲಿ ಅತಿವೃಷ್ಟಿಯಿಂದ ಕೊಡಗು ಸಂಕಷ್ಟಕ್ಕೆ ಸಿಲುಕುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ವಿಶೇಷ ಅನುದಾನವನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಮಂಡ್ಯದ ಎಂಎಲ್ಸಿಗಳಾದ ಶ್ರೀ ಕಂಠೇಗೌಡ ಮತ್ತು ಅಪ್ಪಾಜಿ ಗೌಡ ಅವರು ಈ ಸಂದರ್ಭ ಮಾತನಾಡಿ, ಕೊಡಗಿನ ಸಮಗ್ರ ಅಭಿವೃದ್ಧಿಗೆ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ನಾವು ಕೂಡ ಕೈಜೋಡಿಸುತ್ತೇವೆ ಮತ್ತು ಆ ನಿಟ್ಟಿನಲ್ಲಿ ಕಟಿಬದ್ಧರಾಗಿರುವುದಾಗಿ ಸ್ಪಷ್ಟಪಡಿಸಿದರು.
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ನಾಡಿನ ಸುಭಿಕ್ಷೆಗೆ ಮಾತೆ ಕಾವೇರಿ ಹರಸುವಂತಾಗಲಿ ಎಂದರು.
‘ವಿಶ್ವಾಸ ಕಳೆದುಕೊಳ್ಳುತ್ತಿರುವ ರಾಷ್ಟ್ರೀಯ







