ಸುಗಮ ಸಂಚಾರ ತಿದ್ದುಪಡಿ ನಿಯಮಾವಳಿ ಇಂದಿನಿಂದ ಜಾರಿ

ಉಪ್ಪಿನಂಗಡಿ, ಅ.17: ಇಲ್ಲಿನ ಪೇಟೆಯೊಳಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಉಪ್ಪಿನಂಗಡಿ ಗ್ರಾಪಂ ಈ ಹಿಂದೆ ರೂಪಿಸಿದ್ದ ನಿಯಮಗಳನ್ನು ಮತ್ತೆ ತಿದ್ದುಪಡಿ ತಂದಿದ್ದು, ಅ.18ರಿಂದಲೇ ಕಟ್ಟುನಿಟ್ಟಾಗಿ ಅದನ್ನು ಜಾರಿಗೊಳಿಸಲಾಗುವುದು ಎಂದು ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಅನಿಲ್ ಕುಲಕರ್ಣಿ ತಿಳಿಸಿದ್ದಾರೆ.
ಸುಗಮ ಸಂಚಾರಕ್ಕೆ ಪಂಚಾಯತ್ ರೂಪಿಸಿದ ನಿಯಮಗಳನ್ನು ಅನುಷ್ಠಾನಗೊಳಿಸುವ ಕುರಿತು ಚರ್ಚೆ ನಡೆಸಲು ಪೊಲೀಸ್ ಇಲಾಖೆಯು ಉಪ್ಪಿನಂಗಡಿಯ ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಕರೆದ ವಿವಿಧ ಸಂಘಟನೆಗಳ ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು.ೀಪು ನಿಲುಗಡೆ ಸ್ಥಳ ಬಿಟ್ಟು ಉಳಿದೆಡೆ ಜೀಪುಗಳನ್ನು ನಿಲ್ಲಿಸಿ, ಪ್ರಯಾಣಿಕರನ್ನು ಹತ್ತಿಸಬಾರದು. ಉಪ್ಪಿನಂಗಡಿ ಬಸ್ ನಿಲ್ದಾಣದಿಂದ ಹೊರಟು ರಾಷ್ಟ್ರೀಯ ಹೆದ್ದಾರಿ ತಲುಪುವವರೆಗೆ ಬಸ್ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಬಾರದು.ರಾತ್ರಿ 11:30ರಿಂದ ಮುಂಜಾನೆ 6ರವರೆಗೆ ಬಾಡಿಗೆ ನಡೆಸುವ ಆಟೊರಿಕ್ಷಾ ಚಾಲಕರು ಪೊಲೀಸ್ ಠಾಣೆಗೆ ಬಂದು ಪುಸ್ತಕದಲ್ಲಿ ಸಹಿ ಹಾಕಿ ಹೋಗಬೇಕು. ಸಾರ್ವಜನಿಕರು ಸಹ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವಂತಿಲ್ಲ. ಅಂಗಡಿಗಳಿಗೆ ಸಾಮಗ್ರಿಗಳ ಲಾರಿ ಸೇರಿದಂತೆ ಇನ್ನಿತರ ವಾಹನಗಳು ಜನಸಂದಣಿ ಇರುವ ಹಿನ್ನೆಲೆಯಲ್ಲಿ ಬೆಳಗ್ಗೆ 8 ರಿಂದ 10ರವರೆಗೆ ಮತ್ತು ಸಂಜೆ 4ರಿಂದ 7ರವರೆಗೆ ಇಳಿಸುವಂತಿಲ್ಲ. ಈ ನಿಯಮಾವಳಿಗಳ ಬಗ್ಗೆ ಧ್ವನಿವರ್ಧಕದ ಮೂಲಕ ಪ್ರಚಾರ ನಡೆಸಲಾಗುವುದು. ಪಂಚಾಯತ್ ರೂಪಿಸಿದ ನಿಯಮಾವಳಿಗಳ ಪ್ರಕಾರವೇ ವಾಹನಗಳನ್ನು ಪಾರ್ಕಿಂಗ್ ಮಾಡಬೇಕು. ತಪ್ಪಿದ್ದಲ್ಲಿ ಪೊಲೀಸ್ ಇಲಾಖೆ ದಂಡ ವಿಧಿಸಲಿದೆ ಎಂದರು.ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ಮಾತನಾಡಿ, ತಿದ್ದುಪಡಿ ನಿಯಮದಂತೆ ಗಾಂಧಿ ಪಾರ್ಕ್ನಿಂದ ನೇತ್ರಾವತಿ ಗ್ರಾಮೀಣ ವಿಕಾಸ ಬ್ಯಾಂಕ್ವರೆಗೆ, ನೇತ್ರಾವತಿ ಗ್ರಾಮೀಣ ವಿಕಾಸ ಬ್ಯಾಂಕ್ನಿಂದ ಬಸ್ನಿಲ್ದಾಣ ಬಳಿಯ ವೃತ್ತದವರೆಗೆ, ಅಂಚೆ ಕಚೇರಿಯ ಬದಿಗೆ ಮತ್ತು ಪೃಥ್ವಿ ಕಾಂಪ್ಲೆಕ್ಸ್ ಎದುರುಗಡೆ ಎರಡು ಕಡೆ ವಾಹನ ನಿಲುಗಡೆಗೆ ಅವಕಾಶವಿದ್ದು, ಶೆಣೈ ಆಸ್ಪತ್ರೆ ರಸ್ತೆಯಲ್ಲಿ ಆಸ್ಪತ್ರೆಯ ಬದಿಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.ಸಭೆಯಲ್ಲಿ ಎಸಿ ನೇತೃತ್ವದಲ್ಲಿ ಅ.20ರಂದು ಸಾರ್ವಜನಿಕರ ಸಭೆ ಕರೆದು ಅಂತಿಮ ನಿರ್ಣಯ ಕೈಗೊಂಡು ಅನುಷ್ಠಾನಕ್ಕೆ ಹಾಗೂ ಮುಕ್ತ ಸಂಚಾರ ಅಭಿಯಾನಕ್ಕಾಗಿ ಜಾಗೃತಿ ಜಾಥಾ ನಡೆಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಕೆಡಿಪಿ ಸದಸ್ಯ ಅಶ್ರಫ್ ಬಸ್ತಿಕ್ಕಾರ್, ಸ್ನೇಹ ಸಂಗಮ ಅಟೊ ರಿಕ್ಷಾ ಚಾಲಕ ಮಾಲಕ ಸಂಘದ ಉಪಾಧ್ಯಕ್ಷ ಫಾರೂಕ್ ಬೆದ್ರೋಡಿ, ಕಾರ್ಯದರ್ಶಿ ಮುಹಮ್ಮದ್, ಬಿಎಂಎಸ್ ಅಟೊ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಸುರೇಶ್ ಮಡಿವಾಳ, ಫ್ರೆಂಡ್ಸ್ ಸಂಘದ ಬಶೀರ್, ಕಾರ್ಯದರ್ಶಿ ಪೂವಣಿ ಗೌಡ ಮಾತನಾಡಿದರು.
ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಘುನಾಥ ರೈ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೊಯ್ದಿನ್ ಕುಟ್ಟಿ, ಸದಸ್ಯ ಝಕರಿಯಾ ಕೊಡಿಪ್ಪಾಡಿ, ಸ್ಥಳೀಯ ಪ್ರಮುಖರಾದ ಜಯಂತ ಪೊರೋಳಿ, ಮುಹಮ್ಮದ್ ಕೆಂಪಿ, ಬಸ್ ಮಾಲಕರಾದ ಗಫೂರ್, ಝಕರಿಯಾ, ಬಸ್ ಏಜೆಂಟರಾದ ಗಣೇಶ್, ಇಲ್ಯಾಸ್ ಉಪಸ್ಥಿತರಿದ್ದರು.
ಉಪ್ಪಿನಂಗಡಿ ಠಾಣೆಯ ಪ್ರಭಾರ ಎಸ್ಸೈ ರತನ್ ಸ್ವಾಗತಿಸಿದರು. ಠಾಣಾ ಬರಹಗಾರ ಮನೋಹರ್ ವಂದಿಸಿದರು. ದೇವದಾಸ್ ಕಾರ್ಯಕ್ರಮ ನಿರೂಪಿಸಿದರು.
ವರ್ತಕ ಸಂಘದಿಂದ ಸಭೆ ಬಹಿಷ್ಕಾರ
ಸುಗಮ ಸಂಚಾರದಲ್ಲಿ ಪ್ರಮುಖ ಪಾತ್ರ ವಹಿಸಬೇಕಿದ್ದ ಉಪ್ಪಿನಂಗಡಿ ವರ್ತಕ ಸಂಘದ ಪದಾಧಿಕಾರಿಗಳು ಸಭೆಗೆ ಹಾಜರಾಗಿರಲಿಲ್ಲ. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ, ಉಪ್ಪಿನಂಗಡಿ ಪೊಲೀಸರು ಕೊನೆಯ ಕ್ಷಣದಲ್ಲಿ ಸಭೆಯ ಬಗ್ಗೆ ಮಾಹಿತಿ ನೀಡುತ್ತಾರೆ. ತರಾತುರಿಯಲ್ಲಿ ಸಭೆಗೆ ಆಹ್ವಾನಿಸಿದರೆ ವರ್ತಕರಿಗೆ ಸಭೆಯಲ್ಲಿ ಹಾಜರಾಗಲು ಸಾಧ್ಯವಿಲ್ಲ. ಈ ಬಗ್ಗೆ ಈ ಹಿಂದೆಯೂ ಮನವರಿಕೆ ಮಾಡಿಕೊಡಲಾಗಿತ್ತು. ಈಗ ಮತ್ತೆ ಅದೇ ತಪ್ಪು ಮಾಡಲಾಗಿದೆ. ಹಾಗಾಗಿ ಸಭೆಯನ್ನು ಬಹಿಷ್ಕರಿಸಲಾಗಿದೆ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.







