ಬಂಟ್ವಾಳ: ಕಾರು ಚಾಲಕನನ್ನು ಅಪಹರಿಸಿ ತಂಡದಿಂದ ಮಾರಣಾಂತಿಕ ಹಲ್ಲೆ
![ಬಂಟ್ವಾಳ: ಕಾರು ಚಾಲಕನನ್ನು ಅಪಹರಿಸಿ ತಂಡದಿಂದ ಮಾರಣಾಂತಿಕ ಹಲ್ಲೆ ಬಂಟ್ವಾಳ: ಕಾರು ಚಾಲಕನನ್ನು ಅಪಹರಿಸಿ ತಂಡದಿಂದ ಮಾರಣಾಂತಿಕ ಹಲ್ಲೆ](https://www.varthabharati.in/sites/default/files/images/articles/2016/10/18/6768_Dalit.jpg)
ಬಂಟ್ವಾಳ, ಅ.18: ಎಂಟು ಮಂದಿಯ ತಂಡವೊಂದು ಕಾರು ಚಾಲಕನೋರ್ವನನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ಸಿದ್ಧಕಟ್ಟೆಯಲ್ಲಿ ರವಿವಾರ ನಡೆದಿದೆ.
ಹಲ್ಲೆಗೊಳಗಾದ ಚಾಲಕನನ್ನು ಪಂಜಿಕಲ್ಲು ಗ್ರಾಮದ ಆಚಾರಿಪಲ್ಕೆ ಜೋರ ನಿವಾಸಿ ಸುರೇಶ್ ಪೂಜಾರಿ ಎಂದು ಗುರುತಿಸಲಾಗಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ: ಸುರೇಶ ಅವರು ರವಿವಾರ ಬೆಳಗ್ಗೆ ಪಂಜಿಕಲ್ಲು ಮನೆ ಬಳಿ ಕಾರು ಶುಚಿಗೊಳಿಸುತ್ತಿದ್ದ ವೇಳೆ ಎರಡು ಬೈಕ್ ಮತ್ತು ಮಾರುತಿ ಓಮ್ನಿ ಕಾರಿನಲ್ಲಿ ಬಂದಿದ್ದ ಎಂಟು ಮಂದಿಯ ತಂಡವು ಅವರನ್ನು ಎಳೆದು ಕಾರಿನಲ್ಲಿ ಕೂಡಿ ಹಾಕಿ ಸಿದ್ಧಕಟ್ಟೆಗೆ ಕೊಂಡೊಯ್ದಿದೆ ಎನ್ನಲಾಗಿದೆ. ಸಿದ್ಧಕಟ್ಟೆ ತ್ಯಾಜ್ಯ ಸಂಸ್ಕರಣಾ ಘಟಕ ಸಮೀಪದ ನಿರ್ಜನ ರಸ್ತೆಯ ಬಳಿ ಕರೆದುಕೊಂಡು ಹೋಗಿ ಬಳಿಕ ಕೈ ಮತ್ತು ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಸ್ಥಳೀಯ ನಿವಾಸಿ ರಜನೀಶ್ ಮತ್ತಿತರ ಎಂಟು ಮಂದಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.