ಹಾದಿ ತಪ್ಪಿದ ‘ಚಲೋ ಉಡುಪಿ’: ಲೋಲಾಕ್ಷ
![ಹಾದಿ ತಪ್ಪಿದ ‘ಚಲೋ ಉಡುಪಿ’: ಲೋಲಾಕ್ಷ ಹಾದಿ ತಪ್ಪಿದ ‘ಚಲೋ ಉಡುಪಿ’: ಲೋಲಾಕ್ಷ](https://www.varthabharati.in/sites/default/files/images/articles/2016/10/18/lolaksha.jpg)
ಮಂಗಳೂರು, ಅ.18: ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಇತ್ತೀಚೆಗೆ ನಡೆಸಿದ ಸ್ವಾಭಿಮಾನಿ ಸಂಘರ್ಷ ಜಾಥಾ ‘ಚಲೋ ಉಡುಪಿ’ಯು ತನ್ನ ಮೂಲ ಉದ್ದೇಶ ಮರೆತು ಹಾದಿ ತಪ್ಪಿದೆ ಎಂದು ಅಹಿಂದ ನಾಯಕ ಲೋಲಾಕ್ಷ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ‘ಚಲೋ ಉಡುಪಿ’ಯ ಬಗ್ಗೆ ಬಗ್ಗೆ ಆಕ್ಷೇಪಿಸಿದ ಅವರು, ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಅಥವಾ ಬೇರೆ ದೇವಸ್ಥಾನಗಳಲ್ಲಿ ಪಂಕ್ತಿಭೇದ ಇದ್ದರೆ ಅದನ್ನು ಸರಕಾರದಲ್ಲಿ ಪ್ರಶ್ನಿಸಬೇಕೇ ಹೊರತು ಮುತ್ತಿಗೆ ಹಾಕಿ ಯಾವುದೇ ಪ್ರಯೋಜನವಾಗದು. ಅದಕ್ಕಾಗಿ ಪಂಕ್ತಿಭೇದ ನಿಷೇಧ ಕಾಯ್ದೆ ಜಾರಿಗೊಳ್ಳಬೇಕು. ‘ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು’ ಎಂಬ ಚಲೋ ಉಡುಪಿಯ ಘೋಷ ವಾಕ್ಯದ ವಿಚಾರಕ್ಕೆ ಆದ್ಯತೆ ನೀಡದೆ, ಉಡುಪಿ ಶ್ರೀ ಕೃಷ್ಣ ಮಠದ ವಿಚಾರವನ್ನು ಅನಗತ್ಯವಾಗಿ ಎಳೆದುಹಾಕಲಾಗಿದೆ ಎಂದು ಆಕ್ಷೇಪಿಸಿದರು.
ಪಂಕ್ತಿಭೇದವನ್ನು ಎರಡು ತಿಂಗಳಲ್ಲಿ ನಿಲ್ಲಿಸದಿದ್ದರೆ ಮುತ್ತಿಗೆ ಹಾಕಲಾಗುವುದು ಎಂದು ಸಮಾರೋಪದಲ್ಲಿ ಕಾರ್ಯಕ್ರಮದ ಮುಖ್ಯ ಭಾಷಣಗಾರ ಜಿಗ್ನೇಶ್ ಮೇವಾನಿ ಹೇಳುವ ಮೂಲಕ ಕೃಷ್ಣ ಮಠದ ಆಡಳಿತ ಮಂಡಳಿಯ ಮೂಲಭೂತ ಹಕ್ಕುಗಳ ಮೇಲಿನ ಅತಿಕ್ರಮಣದ ಬೆದರಿಕೆ ನೀಡಲಾಗಿದೆ ಇದು ಅನಗತ್ಯ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧ ಎಂದವರು ಹೇಳಿದರು.
ಇಷ್ಟಕ್ಕೂ ದಲಿತರಿಗೂ ಉಡುಪಿ ಮಠಕ್ಕೆ ಏನು ಸಂಬಂಧ? ಮಠದ ವಿಚಾರದಲ್ಲಿ ದಲಿತರು ಯಾಕೆ ಹಸ್ತಕ್ಷೇಪ ಮಾಡಬೇಕು ಎಂದು ಪ್ರಶ್ನಿಸಿದ ಅವರು, ಅಲ್ಲಿ ಪಂಕ್ತಿಭೇದ ಇದ್ದರೂ ಇಲ್ಲದಿದ್ದರೂ ನನ್ನದೇನು ತಕರಾರು ಇಲ್ಲ. ಅದು ಅವರ ಮಠ. ಅದರ ನಿರ್ವಹಣೆ ಅವರದ್ದು. ನಾವು ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಮಠದ ಮೇಲೆ ಬೆದರಿಕೆ ಹಾಕಿರುವ ಕ್ರಮ ಸರಿಯಲ್ಲ. ಇದಕ್ಕೆ ಪ್ರತೀಕಾರವಾಗಿ ಹಿಂದೂ ಸಂಘಟನೆಗಳು ಉಡುಪಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳುವುದು ಸಮಂಜಸವಲ್ಲ. ದಲಿತರು ನೋವು ಹೇಳಿಕೊಂಡರೆ ಧರ್ಮರಕ್ಷಕರು ಹಿಂದೂ ಸಮಾಜದಲ್ಲಿನ ನ್ಯೂನತೆಯನ್ನು ಸರಿಪಡಿಸಬೇಕು. ಅಷ್ಟಕ್ಕೂ ದಲಿತರಿಗೂ ಗೋಮಾಂಸಕ್ಕೂ ಇಲ್ಲಿ ಸಂಬಂಧವಿಲ್ಲ. ಹೊರಗಿನಿಂದ ಬಂದವರು ಚಳುವಳಿಗೆ ಸಂಬಂಧವೇ ಇಲ್ಲದ ವಿಚಾರವನ್ನು ಮಾತನಾಡಿದ್ದಾರೆ. ರಾಜ್ಯದಲ್ಲಿರುವ ದಲಿತರಿಗೆ ಗೋಮಾಂಸ ವಿವಾದವೇ ಅಲ್ಲ. ಇನ್ನೊಬ್ಬರ ಹಕ್ಕು ಕಸಿಯುವುದಕ್ಕಾಗಿ ಹೋರಾಡುವ ಅಗತ್ಯ ಇಲ್ಲ ಎಂದು ಲೋಲಾಕ್ಷ ಹೇಳಿದರು.
ವೈಷ್ಣವ ದೀಕ್ಷೆ ಪಡೆದವರಿಗೆ ಸಹ ಪಂಕ್ತಿ ನೀಡಿ!
ಪೇಜಾವರದ ವಿಶ್ವೇಶ ತೀರ್ಥ ಸ್ವಾಮೀಜಿ ರಾಜ್ಯದ ಹಲವೆಡೆ ದಲಿತ ಕಾಲನಿಗಳಿಗೆ ಭೇಟಿ ನೀಡಿ ದಲಿತರಿಗೆ ವೈಷ್ಣವ ದೀಕ್ಷೆ ನೀಡುತ್ತಾರೆ. ಹೀಗೆ ದೀಕ್ಷೆ ಪಡೆದ ದಲಿತ ವೈಷ್ಣವರಿಗೆ ಸಂಪ್ರದಾಯಸ್ಥ ಬ್ರಾಹ್ಮಣರ ಜೊತೆಗೆ ಸಹಭೋಜನಕ್ಕೆ ಅವಕಾಶ ನೀಡುತ್ತಾರೆಯೇ ಎಂದು ಪ್ರಶ್ನಿಸಿದ ಲೋಲಾಕ್ಷ, ಹಾಗಾದರೆ ಮಾತ್ರ ವೈಷ್ಣವ ದೀಕ್ಷೆಗೆ ಮಹತ್ವ ದೊರೆಯುವುದು ಎಂದು ನುಡಿದರು.