ದಿನಸಿ ಅಂಗಡಿಯಲ್ಲಿ ದಾಸ್ತಾನಿರಿಸಿದ್ದ ಅನ್ನಭಾಗ್ಯದ ಅಕ್ಕಿ ವಶ
ಬಂಟ್ವಾಳ, ಅ. 19: ಗೋಳ್ತಮಜಲು ಗ್ರಾಮದ ಅಮ್ಟೂರು ಎಂಬಲ್ಲಿರುವ ದಿನಸಿ ಅಂಗಡಿಯೊಂದಕ್ಕೆ ಬಂಟ್ವಾಳ ತಹಶೀಲ್ದಾರರ ನೇತೃತ್ವದ ತಂಡ ಬುಧವಾರ ದಾಳಿ ನಡೆಸಿ ದಾಸ್ತಾನಿಟ್ಟಿದ್ದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿ ಹಾಗೂ ಗೋಧಿಯನ್ನು ವಶಪಡಿಸಿಕೊಂಡಿದೆ.
ಅಮ್ಟೂರು ಜಂಕ್ಷನ್ನಲ್ಲಿರುವ ಅಬ್ದುರ್ರಹ್ಮಾನ್ ಎಂಬವರ ಅಂಗಡಿಗೆ ಖಚಿತ ವರ್ತಮಾನದ ಮೇರೆಗೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರ ನೇತೃತ್ವದಲ್ಲಿ ತಾಲೂಕು ಆಹಾರ ಶಿರಸ್ಥಾದಾರ್ ವಾಸು ಶೆಟ್ಟಿ, ಆಹಾರ ನಿರೀಕ್ಷಕ ಶ್ರೀನಿವಾಸ್, ಆಹಾರ ಶಾಖೆಯ ಸಿಬ್ಬಂದಿ ಸುಂದರ, ಶಿವ ಪ್ರಸಾದ್ರವರನ್ನೊಳಗೊಂಡ ತಂಡ ದಾಳಿ ಕಾರ್ಯಾಚರಣೆ ನಡೆಸಿದೆ.
ಪಡಿತರ ಕಾರ್ಡ್ದಾರರಿಂದ ಕಡಿಮೆ ಬೆಲೆಗೆ ಖರೀದಿಸಿ ಅಂಗಡಿಯಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಸುಮಾರು 5 ಚೀಲಗಳಲ್ಲಿ ತುಂಬಿದ 250 ಕೆ.ಜಿ. ಕುಚ್ಚಲು ಅಕ್ಕಿ ಮತ್ತು ಮೂರು ಚೀಲಗಳಲ್ಲಿ ತುಂಬಿಸಿಡಲಾಗಿದ್ದ 120 ಕೆ.ಜಿ. ಗೋಧಿಯನ್ನು ತಂಡ ವಶಪಡಿಸಿಕೊಂಡಿದೆ.
ಪಾಣೆಮಂಗಳೂರಿನ ಸೊಸೈಟಿಯೊಂದರಲ್ಲಿ ಈ ಪಡಿತರ ಸಾಮಾಗ್ರಿಗಳನ್ನು ಕಾರ್ಡ್ದಾರರು ಖರೀದಿಸಿ ಬಳಿಕ ಕಡಿಮೆ ಬೆಲೆಗೆ ಅಬ್ದುರ್ರಸಹ್ಮಾನ್ ಅವರ ಅಂಗಡಿಗೆ ಮಾರಾಟ ಮಾಡಿದ್ದಾರೆಂದು ತಿಳಿದು ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.