ಕಾರವಾರ: ಶತ ವಾರಕ್ಕೆ ಕಾಲಿಟ್ಟ ‘ಪಹರೇ’ ಸ್ವಚ್ಛತಾ ಕಾರ್ಯಕ್ರಮ

ಕಾರವಾರ, ಅ.19: ಪಹರೇ ವೇದಿಕೆಯಿಂದ ಸ್ವಚ್ಛತಾ ಕಾರ್ಯದ ಮೂಲಕ ನಗರವನ್ನು ಸ್ವಚ್ಛಗೊಳಿಸುತ್ತಿರುವುದು ಈಗ ನೂರನೆ ವಾರಕ್ಕೆ ಕಾಲಿಟ್ಟಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪಹರೇ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ.26ಕ್ಕೆ ಪಹರೇ ವೇದಿಕೆ 100ನೆ ವಾರ ಪೂರೈಸಲಿದೆ. ಈ ಸಂಭ್ರಮಾಚರಣೆಯಲ್ಲಿ ರಾಜ್ಯ, ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯ ಗಣ್ಯವ್ಯಕ್ತಿಗಳನ್ನು ಆಹ್ವಾನಿಸಲಾಗುತ್ತಿದೆ ಎಂದು ತಿಳಿಸಿದರು. ನೂರನೆ ವಾರದ ಸಂಭ್ರಮಾಚರಣೆ ಅಂಗವಾಗಿ ನ.26 ರಂದು ಕಡಲತೀರದ ಮೇಲಿನ ಮಯೂರವರ್ಮ ವೇದಿಕೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವೇದಿಕೆಯ ಅಭಿಯಾನದ ಯಶಸ್ಸಿನಲ್ಲಿ ಪೌರ ಕಾರ್ಮಿಕರ ಪಾತ್ರವೂ ಮಹತ್ವಪೂರ್ಣದ್ದಾಗಿದೆ. ಈ ಹಿನ್ನೆಲೆಯಲ್ಲಿ ಅಂದು ನಗರದ ಪೌರ ಕಾರ್ಮಿಕರನ್ನು ಸನ್ಮಾನಿಸಲಾಗುತ್ತದೆ ಎಂದರು. ಈ ಹಿಂದೆ 25, 50 ಹಾಗೂ 75ನೆ ವಾರ ಗಳ ಸಂಭ್ರಮಾಚರಣೆಯನ್ನು ವಿಶೇಷವಾಗಿ ಆಚರಿಸಿದ್ದು, ಸಾಲು ಮರದ ತಿಮ್ಮಕ್ಕ, ಪರಿಸರವಾದಿ ಸುರೇಶ ಹೆಬ್ಳೀಕರ್ ಸೇರಿದಂತೆ ಅನೇಕ ಗಣ್ಯರನ್ನು ಕರೆಸಿ ಜಾಗೃತಿ ಮೂಡಿಸಲಾಗಿದೆ. 2015 ರ ಫೆ.2 ರಂದು ಆರಂಭವಾದ ಸ್ವಚ್ಛತಾ ಅಭಿಯಾನಕ್ಕೆ ಜಿಲ್ಲಾಧಿಕಾರಿ ಉಜ್ವಲ್ಕುಮಾರ್ ಘೋಷ್ ಚಾಲನೆ ನೀಡಿದ್ದರು ಎಂದರು.
ಬಳಿಕ ನಗರದಲ್ಲಿನ ಸರಕಾರಿ ಅಧಿಕಾರಿಗಳು, ಸಿಬ್ಬಂದಿ, ಖಾಸಗಿ ಕ್ಷೇತ್ರದ ನೌಕರರ, ಹಲವು ಸಂಘ-ಸಂಸ್ಥೆಗಳ ಸ್ವಯಂ ಸೇವಕರ ಸಹಕಾರದಿಂದ ಯಾವುದೇ ತಾರತಮ್ಯವಿಲ್ಲದೆ ಸ್ವಚ್ಛತೆಯನ್ನು ಗುರಿಯಾಗಿಸಿಕೊಂಡು ಅವರವರ ಕೆಲಸ ಮಾಡುತ್ತಿರುವುದು ಇಂದಿನ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ ಎಂದರು.
ನೂರನೆ ವಾರದ ಸಂಭ್ರಮಾಚರಣೆ ನಿಮಿತ್ತ ತಾಲೂಕಿನ 15
1 ಪ್ರಾಥಮಿಕ ಶಾಲೆಗಳು ಹಾಗೂ 7 ಪ್ರೌಢ ಶಾಲೆಗಳಲ್ಲಿ ಸ್ವಚ್ಛತಾ ಅಭಿಯಾನದ ಮೂಲಕ ಸ್ಪರ್ಧಾ ಕಣ ಏರ್ಪಡಿಸಲಾಗಿದೆ. ಶಾಲಾ ಆವರಣ, ಮಕ್ಕಳಲ್ಲಿನ ಶಿಸ್ತು ಮತ್ತು ಸ್ವಚ್ಛತೆ ಬಗೆಗಿನ ಅವರ ಕಾಳಜಿಯನ್ನು ಮಾನದಂಡವನ್ನಾಗಿಸಿ ಎರಡು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇದಕ್ಕೆ ಪಹರೇ ವೇದಿಕೆಯಲ್ಲಿ ರಚಿತವಾಗಿರುವ ಸಮಿತಿ ಸದಸ್ಯರ ತಂಡ ನಗರ ಹಾಗೂ ಗ್ರಾಮೀಣ ಭಾಗದ ಶಾಲೆಗಳಿಗೆ ಭೇಟಿ ನೀಡಿ ನ.1 ರಿಂದ ನ.11 ರವರೆಗೆ ಪರಿಶೀಲಿಸಲಿದೆ. ಇದಲ್ಲದೆ, ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನ.21 ರಂದು ‘ಸ್ವಚ್ಛ ಕಾರವಾರ, ಸ್ವಸ್ಥ ಕಾರವಾರ’ ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ನಗರದ ದಿವೇಕರ ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಕನ್ನಡ, ಇಂಗ್ಲಿಷ್, ಹಿಂದಿ ಮಾಧ್ಯಮದಲ್ಲಿ ಪ್ರಬಂಧಗಳನ್ನು ಬರೆಯಬಹುದು. ಅಲ್ಲದೆ, ವೇದಿಕೆಯು ಕೈಗೊಂಡ ಸ್ವಚ್ಛತಾ ಅಭಿಯಾನದ ಕುರಿತು ಜನರಿಗೆ ತಿಳಿಸಲು ಪುಸ್ತಕವನ್ನು ಪ್ರಕಟಿಸಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಜಯ್ ಸಾಹುಕಾರ, ಖೈರುನ್ನೀಸಾ ಶೇಕ್, ವಿಠ್ಠಲ್ ನಾಯಕ, ಮಾಧುರಿ ಹೊನ್ಗೇಕರ, ರಾಜೇಶ ಮರಾಠೆ, ರಮೇಶ ಗುನಗಿ, ಅಲ್ತಾಫ್ ಶೇಕ್ ಮತ್ತಿತರರಿದ್ದರು.







