ಅಲೆವೂರು: ಗ್ರಾಪಂನಿಂದ ಗೋಶಾಲೆಗೆ ಹುಲ್ಲು
ಉಡುಪಿ, ಅ.19: ಇಲ್ಲಿನ ಅಲೆವೂರು ಗ್ರಾಪಂ ನೇತೃತ್ವದಲ್ಲಿ ಸ್ವಚ್ಛ ಭಾರತ್ ಅಭಿಯಾನದ ಅಂಗವಾಗಿ ಸ್ಥಳೀಯ ರಾಂಪುರ ಮತ್ತು ಪಡು ಅಲೆವೂರುಗಳಲ್ಲಿ ಸಾರ್ವಜನಿಕರ ಸಹಕಾರದಿಂದ ಬುಧವಾರ ಶ್ರಮದಾನ ನಡೆಯಿತು.
ಶ್ರಮದಾನದ ಮೂಲಕ ಸಂಗ್ರಹಿಸಲಾದ ಸುಮಾರು ಒಂದು ಟೆಂಪೋದಷ್ಟು ಹಸಿರು ಹುಲ್ಲನ್ನು ಪರ್ಯಾಯ ಪೇಜಾವರ ಮಠದ ವತಿಯಿಂದ ನೀಲಾವರದಲ್ಲಿ ನಡೆಯುತ್ತಿರುವ ಗೋಶಾಲೆಗೆ ನೀಡಲಾಯಿತು. ಈ ಸಂದರ್ಭ ಸ್ಥಳಕ್ಕಾಗಮಿಸಿದ ಪರ್ಯಾಯ ಪೇಜಾವರ ಮಠದ ಕಿರಿಯಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥರು ಈ ಶ್ರಮದಾನಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಯುವ ಉದ್ಯಮಿ ಅಜೇಯ ಕಾಮತ್ ಹುಲ್ಲು ಕತ್ತರಿಸುವ ಯಂತ್ರವೊಂದನ್ನು ಗ್ರಾಪಂಗೆ ಕೊಡುಗೆಯಾಗಿ ನೀಡಿದರು. ಸ್ಥಳೀಯ ಅಲೆವೂರು ಯುವಕ ಮಂಡಲದ ಹರೀಶ್ ಶೆಟ್ಟಿಗಾರ್, ಅಭಿಮಾನ್ ಸ್ಪೋರ್ಟ್ಸ್ ಕ್ಲಬ್ನ ಉಮೇಶ್ ಶೆಟ್ಟಿಗಾರ್, ದಿ ಸ್ಟ್ರೈಕರ್ಸ್ನ ಕಿಶನ್ ಶೆಟ್ಟಿಗಾರ್, ಮಂಜೂಷಾ ಚಂಡೆ ಬಳಗ ತಾರಾ ಆಚಾರ್ಯ, ಅಲೆವೂರು ಗ್ರಾಪಂ ಸದಸ್ಯ ಶೇಖರ ಆಚಾರ್ಯ, ಸುಧಾಮ, ಪ್ರಶಾಂತ್ ಆಚಾರ್ಯ, ಪುಷ್ಪಲತಾ, ಶಕುಂತಳಾ, ಹರೀಶ್ ಶೇರಿಗಾರ್, ಉಪಾಧ್ಯಕ್ಷೆ ಜಯಲಕ್ಷ್ಮೀ ಮತ್ತು ಅಧ್ಯಕ್ಷ ಶ್ರೀಕಾಂತ್ ನಾಯಕ್ ಉಪಸ್ಥಿತರಿದ್ದರು.