ಡಿವೈಎಫ್ಐ ನೇತೃತ್ವದಲ್ಲಿ ಜನಾಂದೋಲನ ಜಾಥಾ
ಮಂಗಳೂರು, ಅ. 21: ಮುನ್ನೂರು ಗ್ರಾಮದ ಕೆಲವು ಪ್ರದೇಶದಲ್ಲಿ ಗಾಂಜಾ,ಅಫೀಮು ಮುಂತಾದ ನಿಷೇಧಿತ ಮಾದಕ ವಸ್ತುಗಳ ಹಾವಳಿ ವ್ಯಾಪಕವಾಗಿ ಹಬ್ಬುತ್ತಿದ್ದು, ಮುಗ್ಧ ವಯಸ್ಸಿನ ಎಳೆಯ ವಿದ್ಯಾರ್ಥಿಗಳನ್ನು, ಯುವಕರನ್ನು ಮಾದಕ ವ್ಯಸನಕ್ಕೆ ವ್ಯವಸ್ಥಿತವಾಗಿ ಸಿಲುಕಿಸಿ ಅದರ ದಾಸರನ್ನಾಗಿಸಿ ನಂತರ ಅದರ ವ್ಯವಹಾರ ಮಾಡುವಂತೆ ಪ್ರೇರೇಪಿಸಲಾಗುತ್ತಿದೆ. ವ್ಯಸನಕ್ಕೆ ಬಲಿಬಿದ್ದ ಮಕ್ಕಳು ಕಳ್ಳತನ, ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರದಂತಹ ಪ್ರಕರಣಕ್ಕೆ ಸಿಲುಕಿ ಸಮಾಜಘಾತುಕರಾಗುತ್ತಿದ್ದಾರೆ ಇದರ ವಿರುದ್ಧ ಡಿವೈಎಫ್ಐ ಮುನ್ನೂರು ಗ್ರಾಮದಾದ್ಯಂತ ಜನಾಂದೋಲನ ಜಾಥಾ ಮತ್ತು ಬೀದಿ ನಾಟಕವನ್ನು ಅ.23ರಂದು ಬೆಳಗ್ಗೆ 8:30ಕ್ಕೆ ಕುತ್ತಾರು ಜಂಕ್ಷನ್ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.
ಉದ್ಘಾಟನೆಗೊಂಡ ಜಾಥಾ ಬೈಕ್ ರ್ಯಾಲಿ ಮೂಲಕ ಸುಭಾಷ್ನಗರ, ದೇಸೋಡಿ, ಸಂತೋಷ್ ನಗರ, ಪಂಡಿತ್ ಹೌಸ್, ಮದನಿನಗರ ನಂತರ ಕೊನೆಗೆ ತೇವುಲ ಪ್ರದೇಶದಲ್ಲಿ ಸಮಾರೋಪಗೊಳ್ಳಲಿದೆ. ಜಾಥಾದ ಉದ್ಘಾಟನೆಯನ್ನು ಡಿವೈಎಫ್ಐ ಜಿಲ್ಲಾಧ್ಯಕ್ಷ ಮ.ನ.ಪಾ.ದ ಸದಸ್ಯದಯಾನಂದ ಶೆಟ್ಟಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಉಳ್ಳಾಲ ಪೊಲೀಸ್ ಠಾಣಾ ನಿರೀಕ್ಷಕ ಎಚ್.ಶಿವಪ್ರಕಾಶ್, ಕೊಣಾಜೆ ಪೊಲೀಸ್ ಠಾಣಾ ನಿರೀಕ್ಷಕ ಅಶೋಕ್ ಪಜೀರು, ಅಂಬ್ಲಮೊಗರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಸುದೇಶ್ ಕೆ.ದೆರೆಬೈಲು, ಡಿವೈಎಫ್ಐ ಉಳ್ಳಾಲ ವಲಯ ಅಧ್ಯಕ್ಷ ಅಶೋಕ್ ಶೆಟ್ಟಿ ಚೆಂಬುಗುಡ್ಡೆ, ಉಳ್ಳಾಲ ವಲಯ ಕಾರ್ಯದರ್ಶಿ ಜೀವನ್ ರಾಜ್ ಕುತ್ತಾರ್, ಎಸ್ಎಫ್ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್ ಭಾಗವಹಿಸಲಿದ್ದಾರೆ. ಗ್ರಾಮಾದಾದ್ಯಂತ ನಡೆಯುವ ಜನಾಂದೋಲನಕ್ಕೆ ಗ್ರಾಮದ ಜನರು ಬಂದು ಕಾರ್ಯಕ್ರಮ ಯಶಸ್ವಿಗೊಳಿಸಿ, ಮುನ್ನೂರು ಗ್ರಾಮವನ್ನು ನಿಷೇಧಿತ ಮಾದಕ ವಸ್ತು ಮುಕ್ತ ಗ್ರಾಮವನ್ನಾಗಿ ಮಾಡಲು ನಮ್ಮಾಂದಿಗೆ ಕೈ ಜೋಡಿಸಬೇಕಾಗಿ ಡಿವೈಎಫ್ಐ ಮುನ್ನೂರು ಗ್ರಾಮದ ಸಂಚಾಲಕ ಸುನೀಲ್ ತೇವುಲ, ಸಹ ಸಂಚಾಲಕರಾದ ಭರತ್ ರಾಜ್ ಕೆ, ಸುರೇಶ್ ಪೂಜಾರಿ ತಲೆನೀರು ಪತ್ರಿಕಾ ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.







