ಚೈತ್ರಾ ಆತ್ಮಹತ್ಯೆ: ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು
ಉಡುಪಿ, ಅ.21: ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಚೈತ್ರಾ ಪ್ರಕರಣ ವನ್ನು ಆಕೆ ಅಪ್ರಾಪ್ತೆ ವಯಸ್ಕಳಾಗಿರುವುದರಿಂದ ಪೋಕ್ಸೊ ಕಾಯಿದೆಯಡಿ ದಾಖಲಿಸಿ ಉಡುಪಿ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪುತ್ತೂರು ಗ್ರಾಮದ ಲಿಂಗೋಟಿಗುಡ್ಡೆಯ ಚಂದ್ರಶೇಖರ ಎಂಬವರ ಮಗಳು ಚೈತ್ರಾ ಸೆ.28ರಂದು ಅಂಬಲಪಾಡಿಯಲ್ಲಿರುವ ಕಂಪ್ಯೂಟರ್ ಸೆಂಟರ್ಗೆ ಕೆಲಸಕ್ಕೆ ಹೋದವಳು ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಾಗಿತ್ತು. ಸೆ.30ರಂದು ಚೈತ್ರಾಳ ಮೃತದೇಹ ಹಾರಾಡಿ ಗ್ರಾಮದ ಹೊನ್ನಾಳ ಎಂಬಲ್ಲಿ ಪತ್ತೆಯಾಗಿತ್ತು.
ಅ.3ರಂದು ಚೈತ್ರಾಳ ತಂದೆ ಚಂದ್ರಶೇಖರ್ ತನ್ನ ಮಗಳು ಚೈತ್ರಾಳನ್ನು ಆದರ್ಶ, ಪವನ್ ಮತ್ತು ಸಾಗರ್ ಎಂಬವರು ಅಪಹರಿಸಿ ಆತ್ಮಹತ್ಯೆಗೆ ಪ್ರೇರೇಪಣೆ ನೀಡಿರುವುದರಿಂದ ಆಕೆ ಸೆ.28ರಂದು ಕಲ್ಯಾಣಪುರ ಸಮೀಪದ ಕೆ.ಜಿ.ರೋಡಿನ ಸೇತುವೆಯಿಂದ ಸುವರ್ಣ ನದಿಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿ ಉಡುಪಿ ನಗರ ಠಾಣೆಗೆ ದೂರು ನೀಡಿದ್ದರು.ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಅ.ಕ್ರ217/2016ಕಲಂ 363, 306 ಜೊತೆಗೆ 34 ಐಪಿಸಿರಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯ ಸಂದರ್ಭದಲ್ಲಿ ಅ.15ರಂದು ಚೈತ್ರಾಳ ತಾಯಿ ಜ್ಯೋತಿ ಎಂಬವರು ಮೃತ ಚೈತ್ರಾಳಿಗೆ 17ವರ್ಷ 10ತಿಂಗಳು ಆಗಿರುವ ಬಗ್ಗೆ ಆಕೆಯ ಜನನ ಪ್ರಮಾಣ ಪತ್ರದ ಪ್ರತಿಯನ್ನು ನೀಡಿದ್ದು, ಆ ದಾಖಲೆ ಆಧಾರದಿಂದ ಆಕೆಯು ಅಪ್ರಾಪ್ತ ವಯಸ್ಕಳೆಂದು ಕಂಡು ಬಂದಿರುವುದರಿಂದ ಅ.17ರಂದು ಈ ಪ್ರಕರಣದಲ್ಲಿ ಕಲಂ9(ಜಿ), 10,11,(4) 12 ಪೊಕ್ಸೊ ಕಾಯಿದೆ 2012ನ್ನು ಸೇರಿಸಿಕೊಂಡು ನ್ಯಾಯಾಲಯಕ್ಕೆ ಉಡುಪಿ ನಗರ ಠಾಣಾಧಿಕಾರಿಯವರು ವರದಿಯನ್ನು ನೀಡಿ ತನಿಖೆ ಮುಂದುವರಿಸಿದ್ದಾರೆ.
ಇದೀಗ ಪೊಕ್ಸೊ ಕಾಯಿದೆಯಡಿ ಪ್ರಕರಣದ ತನಿಖೆ ನಡೆಯುತ್ತಿದ್ದು, ತಲೆಮರೆಸಿಕೊಂಡಿರುವ ಪ್ರಕರಣದ ಆರೋಪಿಗಳಾದ ಆದರ್ಶ, ಪವನ್ ಮತ್ತು ಸಾಗರ್ ಎಂಬವರ ಪತ್ತೆಗಾಗಿ ಎರಡು ಪೊಲೀಸ್ ತಂಡಗಳನ್ನು ರಚಿಸ ಲಾಗಿದೆ. ಆರೋಪಿಗಳನ್ನು ಶ್ರೀಘ್ರದಲ್ಲಿ ಬಂಧಿಸಲಾಗುವುದು ಎಂು ಎಸ್ಪಿ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.