ಅಖಿಲೇಶ್ಗೆ ಮಲತಾಯಿಯಿಂದ ಮಾಟ: ಉದಯವೀರ್
ಲಕ್ನೊ, ಅ.21: ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ರ ಎರಡನೆ ಹೆಂಡತಿ ಸಾಧನಾ, ತನ್ನ ಮಲ ಮಗ ಅಖಿಲೇಶ್ ಯಾದವ್ರ ಮೇಲೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡುತ್ತಿದ್ದಾರೆ. ಅವರು ಪಕ್ಷದ ರಾಜ್ಯಾಧ್ಯಕ್ಷ ಶಿವಪಾಲ್ ಸಿಂಗ್ ಯಾದವ್ರೊಂದಿಗೆ ಸೇರಿಕೊಂಡು ಅಖಿಲೇಶ್ರಿಗೆ ಕೆಡುಕು ಮಾಡುವ ಸಲುವಾಗಿ ಮಾಟ ಮಾಡಿಸಿದ್ದಾರೆಂದು ಉತ್ತರಪ್ರದೇಶದ ಮೊದಲ ಬಾರಿಯ ಶಾಸಕ ಉದಯವೀರ್ ಸಿಂಗ್ ಆರೋಪಿಸಿದ್ದಾರೆ.
ಮುಲಾಯಂ ಕೆಳಗಿಳಿದು, ಅವರ ಪುತ್ರ ತನ್ನ ಸ್ಥಾನವನ್ನು ಪಡೆಯುವಂತೆ ಮಾಡಬೇಕೆಂದು ಅವರು ವಿನಂತಿಸಿದ್ದಾರೆ.
ಈ ಕುರಿತು ವಿಧಾನ ಪರಿಷತ್ಗೆ ಮೊದಲ ಬಾರಿ ಸದಸ್ಯರಾಗಿರುವ ಉದಯ್ವೀರ್ ಸಿಂಗ್, ಮುಲಾಯಂರಿಗೆ ಖಾಸಗಿ ಪತ್ರವೊಂದನ್ನು ಬರೆದಿದ್ದು, ಅದೀಗ ಮಾಧ್ಯಮಗಳಿಗೆ ಲಭ್ಯವಾಗಿದೆ.
ಇದು ಕೇವಲ ತನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಗುರುವಾರ ಇಂಡೊ-ಏಶ್ಯನ್ ನ್ಯೂಸ್ಗೆ ತಿಳಿಸಿದ ಅವರು, ಆದಾಗ್ಯೂ ಅದು ತನ್ನ ಪಕ್ಷದ ಹೆಚ್ಚಿನ ಸಹೋದ್ಯೋಗಿಗಳನ್ನು ಪ್ರತಿಧ್ವನಿಸಿದೆ ಎಂದಿದ್ದಾರೆ.
ಪಕ್ಷದ ಯುವ ನಾಯಕರ ಉಚ್ಚಾಟನೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ ಉದಯವೀರ್, ಅಖಿಲೇಶ್ ಸಮಾಜವಾದಿ ಪಕ್ಷದ ಅತ್ಯಂತ ವಿಶ್ವಸನೀಯ ಮುಖವಾಗಿದೆಯೆಂದು ಹೇಳಿದ್ದಾರೆ.
ಅವರ ಈ ಪತ್ರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪಕ್ಷದ ನಾಯಕ ಅಶು ಮಲಿಕ್, ಇಂತಹ ಪತ್ರಗಳನ್ನು ಬರೆಯುವವರಿಗೆ 500 ಮತಗಳನ್ನು ಗಳಿಸುವ ಯೋಗ್ಯತೆಯೂ ಇಲ್ಲವೆಂದು ಕಿಡಿಕಾರಿದ್ದಾರೆ.